ನಟ ದರ್ಶನ್ ಡಿಸ್ಚಾರ್ಜ್, ಒಂದು ವಾರ ವಿಶ್ರಾಂತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಶನಿವಾರ (ಆ.3) ಮಧ್ಯಾಹ್ನ 12 ಗಂಟೆಗೆ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
'ಬೃಂದಾವನ' ಚಿತ್ರೀಕರಣ ವೇಳೆ ಕುದುರೆ ಮೇಲಿಂದ ಬಿದ್ದು ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಕೆಂಗೇರಿ ಬಳಿಯ ಬಿಜಿಎಸ್ ಅಸ್ಪತ್ರೆಗೆ ದಾಖಲಿಸಲಾಗಿತ್ತು.
ತಮ್ಮ ನೆಚ್ಚಿನ ನಟನನ್ನು ನೋಡಲು ಆಸ್ಪತ್ರೆ ಬಳಿ ದರ್ಶನ್ ಅವರ ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಅವರ ಕುತ್ತಿಗೆಗೆ ಪಟ್ಟಿ ಕಟ್ಟಲಾಗಿತ್ತು. ಕತ್ತನ್ನು ಅತ್ತ ಇತ್ತ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಅವರು ಮಾಧ್ಯಮಗಳೊಂದಿಗೆ ಹಸನ್ಮುಖಿಯಾಗಿ ಮಾತನಾಡಿದರು.
ತಾನೀಗ ಆರಾಮವಾಗಿದ್ದೇನೆ. ವೈದ್ಯರು ಒಂದು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಹೇಳಿದರು. ಬಳಿಕ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಡಾ.ವೆಂಕಟರಮಣ ಅವರು ಮಾತನಾಡುತ್ತಾ, ದರ್ಶನ್ ಅವರು ಚೇತರಿಸಿಕೊಂಡಿದ್ದಾರೆ. ಮನೆಯಲ್ಲಿ ಒಂದು ವಾರ ವಿಶ್ರಾಂತಿಗೆ ಸೂಚಿಸಲಾಗಿದೆ. ಅವರ ಕುತ್ತಿಗೆ ನೋವಿಗೆ ಕೆಲವೊಂದು ಸರಳ ವ್ಯಾಯಾಮಗಳನ್ನು ಮಾಡಲು ಹೇಳಿರುವುದಾಗಿ ತಿಳಿಸಿದರು.ಒಂದು ವಾರದ ನಂತರ ದರ್ಶನ್ ಮತ್ತೆ ಆಕ್ಷನ್, ಫೈಟಿಂಗ್ ಮಾಡಲು ಅಡ್ಡಿಯಿಲ್ಲ ಎಂದಿದ್ದಾರೆ ವೈದ್ಯರು. 'ಬೃಂದಾವನ' ಚಿತ್ರೀಕರಣ ವೇಳೆ ದರ್ಶನ್ ಎರಡು ಬಾರಿ ಗಾಯಗೊಂಡಿದ್ದರು. ಐಸ್ ಲ್ಯಾಂಡ್ ನಲ್ಲಿ ಹಾಡಿನ ಚಿತ್ರೀಕರಣ ವೇಳೆ ಕುದುರೆ ಮೇಲಿಂದ ಬಿದ್ದಿದ್ದರು.
ಬಳಿಕ ಮೈಸೂರಿನಲ್ಲಿ ನಡೆದ ಡಿಶುಂ ಡಿಶುಂ ಸನ್ನಿವೇಶಗಳಲ್ಲಿ ಅವರಿಗೆ ಕೆಲವು ಪೆಟ್ಟುಗಳಾಗಿದ್ದವು. ಆದರೆ ದರ್ಶನ್ ಈ ನೋವುಗಳನ್ನೂ ಲೆಕ್ಕಿಸದೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಕಾರಣ ನೋವು ಉಲ್ಬಣಿಸಿತ್ತು. ಕಡೆಗೆ ಅವರು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












