ಮೈಸೂರು ಮೃಗಾಲಯಕ್ಕೆ 'ದಾಸ' ದರ್ಶನ್ ಬ್ರಾಂಡ್ ಅಂಬಾಸಿಡರ್.!
Recommended Video

ಪ್ರಾಣಿಗಳೆಂದರೆ ಅತಿ ಹೆಚ್ಚು ಇಷ್ಟ ಪಡುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಅಪಾರ ಪ್ರೀತಿ ತೋರುವ 'ದಾಸ' ದರ್ಶನ್ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದು, ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಸಾರಥಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈಗಾಗಲೇ ತಮ್ಮದೇ ಆದ ಫಾರಂನಲ್ಲಿ ಅನೇಕ ಪ್ರಾಣಿಗಳನ್ನು ಸಾಕುತ್ತಿರುವ ದರ್ಶನ್, ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ, ಆನೆ ಸೇರಿದಂತೆ ನಾನಾ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಕರಿಸಿದ್ದಾರೆ. ದರ್ಶನ್ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರೂ ಕೂಡ ಹಲವು ಬಾರಿ ಮೃಗಾಲಯಕ್ಕೆ ಭೇಟಿ ನೀಡಿ, ಅರಣ್ಯ ಇಲಾಖೆಯೊಂದಿಗೆ ವಿಶೇಷವಾದ ಒಡನಾಟ ಹೊಂದಿದ್ದಾರೆ.
ಇದನ್ನೆಲ್ಲ ಗಮನಿಸಿದ ಅರಣ್ಯ ಇಲಾಖೆಯು ಗುಜರಾತ್ ನಲ್ಲಿ ಅಮಿತಾಬ್ ಬಚ್ಚನ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವಂತೆ ಕರ್ನಾಟಕದಲ್ಲಿ ದರ್ಶನ್ ಅವರನ್ನು ನೇಮಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಅವರಿಗೆ ರಾಯಭಾರಿಯಾಗಿ ನೇಮಕಗೊಂಡಿರುವ ಪತ್ರ ನೀಡಿದ್ದಾರೆ. ದರ್ಶನ್ ಇನ್ನು ಮುಂದೆ ವಿಶ್ವಭೂಮಿ ದಿನಾಚರಣೆ, ಪರಿಸರ ದಿನಾಚರಣೆ, ವನ ಮಹೋತ್ಸವ ಹಾಗೂ ಇನ್ನಿತರ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ ಅಸ್ತು ಕೊಟ್ಟ ನಟ : ಪ್ರಾಣಿ - ಪಕ್ಷಿಗಳು ಹಾಗೂ ಅರಣ್ಯದ ಮೇಲೆ ಅಪಾರ ಕಾಳಜಿ ಹೊಂದಿರುವ ನಟ ದರ್ಶನ್ ಮಹತ್ತರ ಕೆಲಸವೊಂದಕ್ಕೆ ಓಕೆ ಅಂದಿದ್ದಾರೆ. ಈಗಾಗಲೆ ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಕುರಿತ 90 ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಾರೆ.

ಅರಣ್ಯ ಇಲಾಖೆಯು ಜೂ. 5ರಂದು ಪರಿಸರ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾವಿರಾರು ಗಿಡಗಳನ್ನು ನೆಡುವ ಈ ಕಾರ್ಯಕ್ರಮಕ್ಕಾಗಿಯೇ ನಿರ್ಮಿಸುತ್ತಿರುವ 'ಪ್ಲಾಂಟ್ ಎ ಟ್ರೀ' ಎಂಬ ಸಾಕ್ಷ್ಯ ಚಿತ್ರದಲ್ಲಿಯೂ ದರ್ಶನ್ ನಟಿಸಲಿದ್ದಾರೆ. ಇಲಾಖೆಯ ನಿರ್ಮಿಸುತ್ತಿರುವ ಈ ಸಾಕ್ಷ್ಯ ಚಿತ್ರಗಳಿಗೆ ದರ್ಶನ್ ಹಣ ಪಡೆದಿಲ್ಲ. ಈ ಚಿತ್ರದ ಚಿತ್ರೀಕರಣ ಮಲೆ ಮಹದೇಶ್ವರ ಬೆಟ್ಟ, ಬಂಡಿಪುರ, ನಾಗರಹೊಳೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನಡೆಯಲಿದೆ. ಇನ್ನು ಈ ಚಿತ್ರೀಕರಣಕ್ಕೆ ಪ್ರಯಾಣ ಕೈಗೊಳ್ಳುವ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಸಿಗುವ ಗ್ರಾಮಗಳು, ಸಾರ್ವಜನಿಕ ಸ್ಥಳಗಳಲ್ಲಿ 'ಅರಣ್ಯ ಉಳಿಸಿ' ಎಂಬ ಜನಜಾಗೃತಿ ಮೂಡಿಸಲಿದ್ದಾರೆ. ಈ ಎಲ್ಲ ಕಾರ್ಯಗಳಿಗೆ ದರ್ಶನ್ ಸ್ವಯಂ ಪ್ರೇರಣೆಯಿಂದಲೇ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


Click it and Unblock the Notifications











