ಫಿಲಂಫೇರ್ ಪ್ರಶಸ್ತಿಗೆ ದರ್ಶನ್ ಗೈರಾಗಲು ಕಾರಣ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮುಟ್ಟಿದೆಲ್ಲಾ ಚಿನ್ನ. ಸಾರಥಿ ನಂತರ ಬಿಡುಗಡೆಗೊಂಡ ಮೂರೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುತ್ತಿರುವ ದರ್ಶನ್ ಮೊದಲ ಬಾರಿಗೆ ನೋವನ್ನು ತೋಡಿಕೊಂಡಿದ್ದಾರೆ.
ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿಯ 60ನೇ ಕಂತಿನಲ್ಲಿ ಪ್ರಪ್ರಥಮ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಟನೆಗಾಗಿ ದರ್ಶನ್ ಪ್ರಶಸ್ತಿಗೆ ಭಾಜನರಾಗಿದ್ದರು.
ಹೈದರಾಬಾದಿನಲ್ಲಿ ನಡೆದ ಈ ಪ್ರಶಸ್ತಿ ಸ್ವೀಕರಿಸಲು ದರ್ಶನ್ ಹಾಜರಾಗರಿರಲಿಲ್ಲ. ಮೊದಲ ಬಾರಿಗೆ ಒಲಿದ ಪಶಸ್ತಿ ಖುದ್ದಾಗಿ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎನ್ನುವ ನೋವು ದರ್ಶನಿಗೆ ಕಾಡುತ್ತಿದೆ ಎಂದು ಅವರೇ ಮೈಸೂರಿನಲ್ಲಿ ಹೇಳಿದ್ದಾರೆ.

ಪ್ರಶಸ್ತಿ ವಿತರಣೆಯ ದಿನ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರಿಂದ ದರ್ಶನ್ ಫಿಲಂಫೇರ್ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಸಂಪತ್, ಸಾಯಿಕುಮಾರ್ ಮತ್ತು ನಟಿ ಗೀತಾ ಭಾಗಿಯಾಗಿದ್ದ ಚಿತ್ರೀಕರಣ ನಡೆಯುತ್ತಿತ್ತು.
ನಾನು ಪ್ರಶಸ್ತಿ ಸ್ವೀಕರಿಸಲು ತೆರಳಿದಿದ್ದರೆ ಶೂಟಿಂಗ್ ಮೂರು ತಿಂಗಳು ಮುಂದೆ ಹೋಗುತ್ತಿತ್ತು. ನಾವು ಮೂರು ಜನ ಒಟ್ಟಿಗೆ ಚಿತ್ರೀಕರಣದಲ್ಲಿ ಮತ್ತೆ ಒಂದಾಗಲು ಡೇಟ್ಸ್ ಸಮಸ್ಯೆ ತೋರಿ ನನ್ನಿಂದ ಚಿತ್ರೀಕರಣ ಮುಗಿಯಲು ತೊಂದರೆಯಾಗುತ್ತಿತ್ತು.
ನಿರ್ಮಾಪಕರು ನನಗೆ ಪ್ರಶಸ್ತಿ ಸ್ವೀಕರಿಸಿ ಬರಲು ಅನುಮತಿ ನೀಡಿದ್ದರೂ ನನ್ನ ವೃತ್ತಿ ಧರ್ಮಕ್ಕೆ ಅನ್ಯಾಯ ಮಾಡಲು ನನಗೆ ಇಷ್ಟವಿರಲಿಲ್ಲ. ನನ್ನಿಂದ ಎಲ್ಲರಿಗೂ ತೊಂದರೆಯಾಗುವುದು ಬೇಡ, ಮುಖ್ಯವಾಗಿ ನಿರ್ಮಾಪಕರಿಗೆ ನಷ್ಟ ಆಗಬಾರದು ಎಂದು ಚಿತ್ರೀಕರಣದಲ್ಲೇ ಮುಂದುವರಿದೆ ಎಂದು ದರ್ಶನ್ ಹೇಳಿದ್ದಾರೆ.
ಪ್ರಶಸ್ತಿಯನ್ನು ಇನ್ನೂ ನಾನು ಕೈಯಿಂದ ಮುಟ್ಟಿಲ್ಲ, ಬೆಂಗಳೂರು ತಲುಪಿದ ಮೇಲೆ ಆನಂದ್ ಅಪ್ಪುಗೋಳ್ ಅವರಿಂದ ಪಡೆದುಕೊಳ್ಳುವೆ ಎಂದು ದರ್ಶನ್ ತೂಗುದೀಪ್ ಹೇಳಿದ್ದಾರೆ.


Click it and Unblock the Notifications











