D57 ಸೀಕ್ರೆಟ್ ರಿವೀಲ್: ದರ್ಶನ್- ಸಚ್ಚಿದಾನಂದ ಚಿತ್ರಕ್ಕೆ ಡೈರೆಕ್ಟರ್ ಸಿಕ್ಕೇಬಿಟ್ರು!
ಒಂದ್ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದಾರೆ. ಮತ್ತೊಂದು ಕಡೆ D56 ಶೂಟಿಂಗ್ ನಡೀತಿದೆ. ಇದರ ನಡುವೆಯೇ ದರ್ಶನ್ ನಟನೆಯ ಮುಂದಿನ ಚಿತ್ರಕ್ಕೆ ನಿರ್ದೇಶಕರು ಯಾರು ಎನ್ನುವುದು ಗೊತ್ತಾಗಿದೆ. ಸ್ವತಃ ನಿರ್ಮಾಪಕರೇ ಈ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಸಿನಿಮಾ ಅಂದರೆ ನಿರೀಕ್ಷೆ ಹೆಚ್ಚಾಗಿರುತ್ತದೆ. ಮಾಸ್ನಲ್ಲಿ ಒಳ್ಳೆ ಫಾಲೋಯಿಂಗ್ ಇರುವ ದರ್ಶನ್ ಕಮರ್ಷಿಯಲ್ ಸಿನಿಮಾಗಳ ಮೂಲಕ ಅಬ್ಬರಿಸುತ್ತಿದ್ದಾರೆ. ಐತಿಹಾಸಿಕ, ಪೌರಾಣಿಕ ಸಿನಿಮಾಗಳಲ್ಲೂ ನಟಿಸಿ ಗೆಲ್ಲುತ್ತಿದ್ದಾರೆ. ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಸಿನಿಮಾ ನಿಧಾನವಾಗಿ ಹೈಪ್ ಕ್ರಿಯೇಟ್ ಮಾಡ್ತಿದೆ. ತರುಣ್ ಸುಧೀರ್ ಸಾರಥ್ಯದಲ್ಲಿ D56 ಸದ್ದು ಮಾಡ್ತಿದೆ. ಹಾಗಾಗಿ ಸಹಜವಾಗಿಯೇ 57ನೇ ಸಿನಿಮಾ ನಿರ್ದೇಶಕರು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಒಂದು ಸಿನಿಮಾ ಕಂಪ್ಲೀಟ್ ಆಗುವುದಕ್ಕೂ ಮುನ್ನವೇ ದರ್ಶನ್ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟುಬಿಡುತ್ತಾರೆ. ದರ್ಶನ್ ಅವರಿಗೆ ಪರಮಾಪ್ತರಾಗಿರುವ ಸಚ್ಚಿದಾನಂದ D57 ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿ ಬಹಳ ಹಿಂದೆಯೇ ಘೋಷಣೆ ಆಗಿತ್ತು.

ತರುಣ್- ದರ್ಶನ್ ಹ್ಯಾಟ್ರಿಕ್ ಕಾಂಬೋ
ಹೌದು D57 ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಬಹಳ ಹಿಂದೆಯೇ ಇಂತಾದೊಂದು ಮಾತು ಕೇಳಿಬಂದಿತ್ತು. ಆದರೆ D56 ಚಿತ್ರವನ್ನು ತರುಣ್ ನಿರ್ದೇಶನ ಮಾಡುತ್ತಿದ್ದರಿಂದ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಾರಾ ಎನ್ನುವ ಅನುಮಾನ ಇತ್ತು. ಇದೀಗ ನಿರ್ಮಾಪಕ ಸಚ್ಚಿದಾನಂದ ಈ ವಿಚಾರವನ್ನು ಕನ್ಫರ್ಮ್ ಮಾಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಅಂಬಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಕಥೆ ಏನು? ತಾರಾಗಣ ಎಲ್ಲರದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ತರುಣ್ ಸುಧೀರ್ ನಿರ್ದೇಶಣದ 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ನಂತರ 'ರಾಬರ್ಟ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಶ್ರೀರಂಗಪಟ್ಟದಲ್ಲಿ ಅದ್ಧೂರಿ ಕಾರ್ಯಕ್ರಮ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ನಿನ್ನೆ(ನವೆಂಬರ್ 19) ಕನ್ನಡ ರಾಜ್ಯೋತ್ಸವ ಹಾಗೂ ಅಂಬಿ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ಸಚಿವರಾದ ಬಿ. ಸಿ ಪಾಟೀಲ್, ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೀಶ್ವರ್, ಸಂಸದೆ ಸುಮಲತಾ ಅಂಬರೀಷ್ ಭಾಗಿ ಆಗಿದ್ದರು. ರಾಜ್ಯೋತ್ಸವ ಹಿನ್ನಲೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

'ಕ್ರಾಂತಿ' ಪ್ರಚಾರ ಶುರು
ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ನಿರ್ಮಾಣದ 'ಕ್ರಾಂತಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಕ್ಷರ ಕ್ರಾಂತಿಯ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಇದೀಗ ಚಿತ್ರರಂಗ ಪ್ರಚಾರ ಆರಂಭಿಸಿದ್ದು ದರ್ಶನ್ ಸಂದರ್ಶನಗಳನ್ನು ನೀಡುವ ಮೂಲಕ ತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸಾಂಗ್ಸ್ ರಿಲೀಸ್ ಆಗಲಿದೆ.

D56 ಚಿತ್ರದ 2 ಶೆಡ್ಯೂಲ್ ಪೂರ್ಣ
ಇನ್ನು ದರ್ಶನ್ ನಟನೆಯ 56ನೇ ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಂದು ಹೈದರಾಬಾದ್ನಲ್ಲಿ ಒಂದು ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿದೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.


Click it and Unblock the Notifications











