ಮೂಲ್ಕಿಯಲ್ಲಿ ದರ್ಶನ್ 'ದರ್ಶನ'ಕ್ಕೆ ಮುಗಿಬಿದ್ದ ಜನ
ಮೂಲ್ಕಿಯ ಇತಿಹಾಸ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಭಾನುವಾರ ಅಕ್ಷರಶ: ಜಾತ್ರೆಯ ವಾತಾವರಣ. ಸಾವಿರಾರು ಮಂದಿ ಮಕ್ಕಳು, ಮಹಿಳೆಯರು ಜಾತಿ-ಮತದ ಬೇಧಭಾವವಿಲ್ಲದೆ ಜನಸಾಗರವೇ ನೆರೆದಿತ್ತು. ಎಲ್ಲರ ಕಣ್ಣಲ್ಲೂ ಕುತೂಹಲ ಮನೆಮಾಡಿತ್ತು.
ತನ್ನ ನೆಚ್ಚಿನ ನಾಯಕನಟ ದರ್ಶನ್ ದರ್ಶನಕ್ಕಾಗಿ ಬಿರುಬಿಸಿಲಿನಲ್ಲಿ ಕಾಯುತ್ತಿದ್ದ ಅಭಿಮಾನಿಗಳು ದೂರದಿಂದಲೇ ದರ್ಶನ್ ಕಾರ್ ಇಳಿದು ಕೈಬೀಸಿದಾಗ ಪುಳಕಿತಗೊಂಡರು. ಹಸ್ತಾಕ್ಷರ, ಫೊಟೋ ಕ್ಲಿಕ್ಕಿಸಲು ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಸಾಹಸ ಪಡಬೇಕಾಯಿತು. [ದರ್ಶನ್ ಯಶಸ್ಸಿನ ಹಿಂದೆ ನೋವಿನ 'ಬದುಕು ಜಟಕಾ ಬಂಡಿ']
ತುಂಗಭದ್ರ ಫಿಲಂಸ್ ಲಾಂಛನದಲ್ಲಿ ತೆರೆಗೆ ಬರಲಿರುವ ರಾಜಶೇಖರ್ ಕೋಟ್ಯಾನ್ ನಿರ್ಮಾಣ-ನಿರ್ದೇಶನದ 'ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ' ಚಿತ್ರದ ಮುಹೂರ್ತ ಮತ್ತು ಕ್ಲಾಪ್ ಗೆಂದು ಖ್ಯಾತ ಕನ್ನಡ ಚಲನಚಿತ್ರ ನಟ ದರ್ಶನ್ನನ್ನು ಆಮಂತ್ರಿಸಲಾಗಿತ್ತು. ಈ ಬಗ್ಗೆ ಪತ್ರಿಕೆ, ಚಾನೆಲ್, ಫ್ಲೆಕ್ಸ್ ಗಳಲ್ಲಿ ಪ್ರಚಾರವನ್ನೂ ಮಾಡಲಾಗಿತ್ತು.ಆದಿತ್ಯವಾರ ಮುಂಜಾನೆಯಿಂದಲೇ ಬಪ್ಪನಾಡು ದೇವಳದ ಆವರಣದಲ್ಲಿ ಅಭಿಮಾನಿಗಳು ದರ್ಶನ್ ಬರುವಿಕೆಗಾಗಿ ಕಾಯುತ್ತಿದ್ದರು. ಸರಿಸುಮಾರು 11:30ರ ಹೊತ್ತಿಗೆ ದರ್ಶನ್ ಆಗಮಿಸಿದಾಗ ಅಸಂಖ್ಯಾತ ಅಭಿಮಾನಿಗಳು ನೆರೆದಿದ್ದರು.
ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ಚಿತ್ರಕ್ಕೆ ಕ್ಲಾಪ್ ಮಾಡಿ ವೇದಿಕೆಯೇರಿದಾಗ ಮತ್ತದೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹಾರ ಹಾಕಿ, ಹೂಗುಚ್ಛ ನೀಡಿ ಪ್ರೀತಿ ವ್ಯಕ್ತಪಡಿಸಿದರು. ಮಕ್ಕಳು-ಹಿರಿಯರೊಂದಿಗೆ ಹಸನ್ಮುಖಿಯಾಗಿಯೇ ಬೆರೆದ ದರ್ಶನ್ ತುಳುವಲ್ಲಿ ಮಾತಾಡಿದಾಗ ಕರತಾಡನಗಳ ಸುರಿಮಳೆ.
ಆನಂತರ ಎರಡೇ ನಿಮಿಷಗಳ ಕಾಲ ಮಾತಾಡಿ ಚಿತ್ರಕ್ಕೆ ಶುಭಾಶಯ ಕೋರಿದ ದರ್ಶನ್ ವೇದಿಕೆಯಿಳಿದು ಹೊರಡುವಾಗ ಅಭಿಮಾನಿಗಳು ಮತ್ತೆ ಹಸ್ತಾಕ್ಷರ, ಫೊಟೋಗಾಗಿ ಮುಗಿಬಿದ್ದರು. ಎಲ್ಲರೊಂದಿಗೆ ಬೆರೆತ ದರ್ಶನ್ ಮೂಲ್ಕಿಯ ಜನರ ಅಭಿಮಾನ ಕಂಡು ಮೂಕವಿಸ್ಮಿತರಾದರು. ದರ್ಶನ್ ರನ್ನು ಕಾಣಲು ಉತ್ತರ ಕನ್ನಡದವರೇ ಹೆಚ್ಚಾಗಿ ವಾಸಿಸುವ ಲಿಂಗಪ್ಪಯ್ಯ ಕಾಡಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಿಳ್ಳೆ, ಚಪ್ಪಾಳೆಯ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು. (ಒನ್ಇಂಡಿಯಾ ಕನ್ನಡ)


Click it and Unblock the Notifications












