ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಜತೆ ಬೌನ್ಸರ್ಗಳ ಕಿರಿಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಚಿಕ್ಕಣ್ಣ ತಮ್ಮ ಸ್ನೇಹಿತರ ಜತೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗದ ಅರಣ್ಯ ಪ್ರದೇಶಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಬಿಆರ್ ಪ್ರಾಜೆಕ್ಟ್ ಸಮೀಪದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿರುವ ದರ್ಶನ್, ಭದ್ರಾ ಜಲಾಶಯ ವೀಕ್ಷಣೆ ಮಾಡಿದ್ದರು.
Recommended Video
ತಮ್ಮ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಅರಣ್ಯ ಭವನದ ಸಮೀಪ ಗುಂಪುಗೂಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ದರ್ಶನ್ ಅಥವಾ ಚಿಕ್ಕಣ್ಣ ಅವರನ್ನು ಭೇಟಿ ಮಾಡಿ ಫೋಟೊ ತೆಗೆಸಿಕೊಳ್ಳಬೇಕು ಎಂಬ ಬಯಕೆಗೆ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ದೂರದಿಂದಲೇ ದರ್ಶನ್ ಅವರ ಫೋಟೊ ಮತ್ತು ವಿಡಿಯೋಗಳನ್ನು ತೆಗೆಯಲು ಸಹ ಬಿಟ್ಟಿಲ್ಲ. ಫೋಟೊ ತೆಗೆಯಲು ಪ್ರಯತ್ನಿಸಿದವರ ಜತೆ ಅವರ ಭದ್ರತಾ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ವಿಡಿಯೋ ಮಾಡುತ್ತಿದ್ದವರ ಜತೆ ದುರ್ವರ್ತನೆ
ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ಅಣೆಕಟ್ಟು ವೀಕ್ಷಣೆ ಮಾಡಿ ದರ್ಶನ್ ಹೊರಬರುವ ಸಂದರ್ಭದಲ್ಲಿ ಅಭಿಮಾನಿಗಳು ದೂರದಿಂದಲೇ ನಿಂತು ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದರು. ಆದರೆ ವಿಡಿಯೋ ತೆಗೆಯಲು ಕೂಡ ದರ್ಶನ್ ಸಿಬ್ಬಂದಿ ಅವಕಾಶ ನೀಡಿಲ್ಲ. ವಿಡಿಯೋ ಮಾಡುತ್ತಿದ್ದವರ ಫೋನ್ಗೆ ಬಡಿದು ದುರ್ವರ್ತನೆ ತೋರಿಸಿದ್ದಾರೆ.

ಆವಾಜ್ ಹಾಕಿದ ಸಿಬ್ಬಂದಿ
ದರ್ಶನ್ ಅವರೊಂದಿಗೆ ಹೊರಬಂದ ಸಿಬ್ಬಂದಿ ವಿಡಿಯೋ ಮಾಡುತ್ತಿದ್ದವರನ್ನು ಕಂಡು ಕಿಡಿಕಾರಿದ್ದಾರೆ. ಅವರತ್ತ ಬಂದು 'ಏ ಹೋಗ್ರೋ ಹೋಗ್ರೋ ಕೊರೊನಾ' ಎಂದು ಏಕವಚನದಿಂದ ಬೆದರಿಸಿ ಆವಾಜ್ ಹಾಕಿದ್ದಾರೆ. ಅಭಿಮಾನಿಗಳು ವಿಡಿಯೋ ಮಾಡುವಾಗ ದರ್ಶನ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಅವರ ಜತೆಗಿದ್ದವರು ಈ ರೀತಿ ಮಾಡಿದ್ದಾರೆ ಎಂದು ಅಭಿಮಾನಿಗಳ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ದೂರದಿಂದ ಬಂದ ಅಭಿಮಾನಿಗಳಿಗೆ ನಿರಾಶೆ
ದರ್ಶನ್ ಅವರಿಗೆ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಈ ಭಾಗದ ಪ್ರವಾಸಕ್ಕೆಂದು ಬಂದಿರುವ ಸಂಗತಿ ಅಭಿಮಾನಿಗಳ ಕಿವಿಗೆ ಬಿದ್ದೊಡನೆ, ಅವರಿದ್ದ ಸ್ಥಳಕ್ಕೆ ದೂರದ ಊರುಗಳಿಂದ ಧಾವಿಸಿದ್ದಾರೆ. ವಿಪರೀತ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಅಲ್ಲಿಗೆ ತೆರಳಿದ್ದಾರೆ. ಆದರೆ ಅವರಿಗೆ ಅಲ್ಲಿ ನಿರಾಶೆಯಾಗಿದೆ.

ಅಭಯಾರಣ್ಯ ಸಫಾರಿ
ಶಿವಮೊಗ್ಗ ಪ್ರವಾಸದಲ್ಲಿರುವ ದರ್ಶನ್, ಚಿಕ್ಕಣ್ಣ ಮತ್ತು ಗೆಳೆಯರು ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದಾರೆ. ವನ್ಯ ಸಂಪತ್ತು ಮತ್ತು ಪ್ರಾಣಿಗಳ ವೀಕ್ಷಣೆ ಬಳಿಕ ದರ್ಶನ್ ಎರಡು ದಿನ ವಿವಿಧೆಡೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.


Click it and Unblock the Notifications











