'ಚಂಬಲ್' ರಹಸ್ಯ ಹೊತ್ತು ತಂದ ಜೇಕಬ್ ವರ್ಗೀಸ್
'ಸವಾರಿ' ಹಾಗೂ 'ಪೃಥ್ವಿ' ಕನ್ನಡ ಸಿನಿಮಾರಂಗದಲ್ಲಿ ಇಂದಿಗೂ ಕೂಡ ವಿಶೇಷ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂತಹ ಚಿತ್ರಗಳು. ಇಂತಹ ಅದ್ಬುತ ಸಿನಿಮಾಗಳನ್ನ ಕನ್ನಡ ಪ್ರೇಕ್ಷಕರಿಗೆ ನೀಡಿದ ಕೀರ್ತಿ ನಿರ್ದೇಶಕ ಜೇಕಬ್ ವರ್ಗೀಸ್ ಅವರಿಗೆ ಸಲ್ಲುತ್ತದೆ. ಸಾಕಷ್ಟು ದಿನಗಳ ನಂತರ ಮತ್ತೆ ಜೇಕಬ್ ವರ್ಗೀಸ್ ಸ್ಯಾಂಡಲ್ ವುಡ್ ಗೆ ಚಂಬಲ್ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ.
ಚಂಬಲ್ ನೀನಾಸಂ ಸತೀಶ್ ಅಭಿನಯಿಸುತ್ತಿರುವ ಸಿನಿಮಾ, ಜೇಕಬ್ ವರ್ಗೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಶರತ್ ಚಕ್ರವರ್ತಿ ಸಂಭಾಷಣೆ ಸಿನಿಮಾಗಿದೆ. 'ಗೋದ್ರಾ' ಸಿನಿಮಾ ನಿರ್ದೇಶಕ ನಂದೀಶ್ ಚಂಬಲ್ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು ಪೂರ್ಣ ಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಸಿಂಪಲ್ ಸುನಿ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ.

ಚಂಬಲ್ ಟೈಟಲ್ ಕೇಳುತ್ತಿದ್ದಂತೆ ನೈಜ ಘಟನೆ ಆಧಾರಿಸಿ ಮಾಡಿರುವ ಸಿನಿಮಾ ಇರಬಹುದು ಎನ್ನಿಸುತ್ತದೆ. ಚಿತ್ರತಂಡದ ಹೇಳುವ ಪ್ರಕಾರ ಚಂಬಲ್ ಸಸ್ಪೆನ್ಸ್-ಥ್ರಿಲ್ಲರ್ ಕಥಾ ಹಂದವಿರುವಂತಹ ಚಿತ್ರ. ಸದ್ಯ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಜೇಕಬ್ ವರ್ಗೀಸ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
ಚಂಬಲ್ ಸಿನಿಮಾದ ಮೋಷನ್ ಪೊಸ್ಟರ್ ಬಿಡುಗಡೆ ಆಗಿದ್ದು ಸತೀಶ್ ನೀನಾಸಂ ಚಿತ್ರದಲ್ಲಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸತೀಶ್ ಜೊತೆಯಾಗಿ ಸೋನು ಗೌಡ, ಕಿಶೋರ್, ರೋಜರ್ ನಾರಯಣ್, ಅಚ್ಯುತ್, ಲೂಸಿಯಾ ಪವನ್ ಕುಮಾರ್, ಸರ್ದಾರ್ ಸತ್ಯ ಅಭಿನಯಿಸಿರುವುದು ಚಿತ್ರದ ವಿಶೇಷತೆ.

'ಸವಾರಿ', 'ಪೃಥ್ವಿ' ಸಿನಿಮಾ ನಿರ್ದೇಶನ ಮಾಡಿ ಜನಮನ ಗೆದ್ದಿರುವ ನಿರ್ದೇಶಕರು 'ಚಂಬಲ್' ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನಿನಾಸಂ ಸತೀಶ್ ಈ ಚಿತ್ರದ ಮೂಲಕ ಸಿನಿಮಾರಂಗದಲ್ಲಿ ಬೇರೆಯದ್ದೇ ರೀತಿಯಲ್ಲಿ ಗುರುತಿಸಿಕೊಳ್ಳಲಿದ್ದಾರೆ.


Click it and Unblock the Notifications











