'ಮಾಡಿದ ತಪ್ಪು ಅರಿವಾಯಿತು': ರಜನಿ, ಕಮಲ್ ಆ ತಪ್ಪು ಮಾಡುವುದು ಬೇಡ
ಮೆಗಾಸ್ಟಾರ್ ಚಿರಂಜೀವಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ಯುವನಟರು ಅಬ್ಬರಿಸುತ್ತಿರುವಗಾಲೂ ನಂಬರ್ 1 ಸ್ಥಾನ ಬಿಟ್ಟುಕೊಡದಂತಹ ನಟ ಚಿರಂಜೀವಿ. ಬಹಳ ಉತ್ತುಂಗದಲ್ಲಿದ ಸಮಯದಲ್ಲಿ ಚಿರು ಮಾಡಿದ ಒಂದು ತಪ್ಪು ಈಗಲೂ ಅವರನ್ನ ಕಾಡುತ್ತಿದೆ.
ಅಂದು ಮೆಗಾಸ್ಟಾರ್ ಇಟ್ಟಿದ್ದು ತಪ್ಪು ಹೆಜ್ಜೆ ಎಂದು ಅನೇಕರು ಹೇಳಿದರೂ, ಅದ್ಯಾವುದಕ್ಕೂ ಕಿವಿಕೊಡದ ಟಾಲಿವುಡ್ ಸ್ಟಾರ್ 'ಪ್ರಜಾರಾಜ್ಯಂ' ಎಂಬ ಹೊಸ ಅಧ್ಯಾಯವನ್ನ ಆರಂಭಿಸಿದರು.
ಆದರೆ, ಆ ಪ್ರಜಾರಾಜ್ಯದಲ್ಲಿ ಯಶಸ್ಸಿಗಿಂತ ಅವಮಾನವೇ ಹೆಚ್ಚಾಯ್ತು ಎಂಬುದು ಕಾಲಕ್ರಮೇಣ ಚಿರುಗೆ ಮನವರಿಕೆ ಆಯ್ತು. ಈಗ ಆ ತಪ್ಪನ್ನ ನೀವು ಮಾಡಬೇಡಿ ಎಂದು ಸೂಪರ್ ಸ್ಟಾರ್ ರಜನಿ ಮತ್ತು ಕಮಲ್ ಹಾಸನ್ ಗೆ ಸಲಹೆ ನೀಡಿದ್ದಾರೆ. ಎಲ್ಲಿ, ಯಾವಾಗ? ಮುಂದೆ ಓದಿ....

ರಾಜಕೀಯದಿಂದ ದೂರವಿರಿ
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಕುರಿತು ಮಾತನಾಡಿದ ಚಿರಂಜೀವಿ 'ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳಿಗೆ ರಾಜಕೀಯ ಯೋಗ್ಯವಾದ ಕ್ಷೇತ್ರವಲ್ಲ. ದಯವಿಟ್ಟು ರಾಜಕೀಯದಿಂದ ನೀವು ದೂರವಿರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಣವಿದ್ದರೆ ಮಾತ್ರ ರಾಜಕೀಯ
''ಇಂದಿನ ರಾಜಕೀಯ ಸಂಪೂರ್ಣವಾಗಿ ಹಣದಿಂದ ಕೂಡಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ವಂತ ನನ್ನ ಕ್ಷೇತ್ರದಲ್ಲೇ ನಾನು ಸೋಲು ಕಂಡೆ. ಕಳೆದ ಚುನಾವಣೆಯಲ್ಲಿ ನನ್ನ ಸಹೋದರ ಪವನ್ ಕಲ್ಯಾಣ್ ಅವರಿಗೆ ಇದೇ ಎದುರಾಯಿತು'' ಎಂದು ಚಿರು ತಮಿಳು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಜನಿ, ಕಮಲ್ ಸಿದ್ಧರಿದ್ದಾರೆ
''ರಾಜಕೀಯದಲ್ಲಿ ನೀವು ಇರಬೇಕು ಅಂದ್ರೆ ನಿರಾಶೆ, ಹತಾಶೆ, ಅವಮಾನಗಳನ್ನ ಎದುರಿಸಬೇಕು. ಬಹುಶಃ ರಜನಿ ಮತ್ತು ಕಮಲ್ ಹಾಸನ್ ಅವರು ಜನರಿಗಾಗಿ ಕೆಲಸ ಮಾಡಲು ದೃಢ ನಿರ್ಧಾರ ಹೊಂದಿದ್ದರೆ, ಈ ಎಲ್ಲ ರೀತಿಯ ಹತಾಶೆ, ಸವಾಲುಗಳನ್ನ ಎದುರಿಸಲು ಸಾಧ್ಯವಾಗುತ್ತದೆ'' ಎಂದು ಚಿರಂಜೀವಿ ಹೇಳಿದ್ದಾರೆ.

ಕಮಲ್ ಹಾಸನ್ ಮೇಲೆ ನಿರೀಕ್ಷೆ ಇತ್ತು
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಉತ್ತಮ ಸಾಧನೆ ಮಾಡ್ತಾರೆ ಎಂದು ನಿರೀಕ್ಷಿಸಿದ್ದೆ, ಆದರೆ ಅದು ಆಗಲಿಲ್ಲ. ಸ್ವತಃ ಕಮಲ್ ಹಾಸನ್ ಸ್ಪರ್ಧಿಸಲಿಲ್ಲ ಅವರ ಪಕ್ಷವೂ ಒಂದು ಸೀಟ್ ಗೆಲ್ಲಲಿಲ್ಲ. ರಜನಿಕಾಂತ್ ಅವರು ಇನ್ನು ರಾಜಕೀಯ ಪಕ್ಷವನ್ನ ರಚಿಸಿಲ್ಲ'' ಎಂದು ಇಬ್ಬರು ನಟರ ಬಗ್ಗೆ ಮಾತನಾಡಿದರು.

ಒಂದು ಕಡೆ ಗೆದ್ದು ಒಂದು ಸೋತಿದ್ದರು
2008ರಲ್ಲಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಥಾಪನೆ ಮಾಡಿದ್ದ ಚಿರಂಜೀವಿ 2009ರ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ್ದರು. ತಿರುಪತಿಯಲ್ಲಿ ಗೆದ್ದರು, ಪಾಲಕೊಲ್ಲು ಕ್ಷೇತ್ರದಲ್ಲಿ ಸೋಲು ಕಂಡರು.


Click it and Unblock the Notifications











