ಗೋಲ್ಡನ್ ಗರ್ಲ್ ರಮ್ಯಾ ಬೆಂಬಲಕ್ಕೆ ದರ್ಶನ್,ಚಿರಂಜೀವಿ
ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರಾಗಿರುವ ಮಂಡ್ಯ ಕ್ಷೇತ್ರದಲ್ಲಿ ಈಗಾಗಲೇ ಲೋಕಸಭಾ ಉಪಚುನಾವಣೆಯ ಪ್ರಚಾರದ ಭರಾಟೆ ತಾರಕಕ್ಕೇರಿದೆ. ನಾನ..ನೀನಾ.. ಹೋರಾಟಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿವೆ.
ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಗೋಲ್ಡನ್ ಗರ್ಲ್ ರಮ್ಯಾ ಪರ ಸಿನಿಮಾ ತಾರೆಯರು ಪ್ರಚಾರಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಮೈಸೂರು ನಗರ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಮೀನಾ ತೂಗುದೀಪ್ ಈಗಾಗಲೇ ರಮ್ಯಾ ಪರ ಪ್ರಚಾರಕ್ಕೆ ಇಳಿದಿದ್ದಾರೆ.

ತೆಲುಗು ಮೆಗಾಸ್ಟಾರ್ ಚಿರಂಜೀವಿ ಮತ್ತು ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಮ್ಯಾ ಪರ ಪ್ರಚಾರಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿದೆ. ದರ್ಶನ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಲಿಂಬಾವಳಿ, ಅಂಬರೀಶ್, ಡಾ. ವಿನಯ್ ಮತ್ತು ಅಪ್ಪುಗೋಳ್ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು.
ಮಂಡ್ಯ ಕ್ಷೇತ್ರದಲ್ಲಿ ದರ್ಶನ್ ಅಧಿಕ ಅಭಿಮಾನಿಗಳನ್ನು ಹೊಂದಿದ್ದು, ಚುನಾವಣಾ ಪ್ರಚಾರದಲ್ಲಿ ಇವರ ಉಪಸ್ಥಿತಿ ಪಕ್ಷಕ್ಕೆ ಉತ್ತಮ ಫಸಲು ತಂದು ಕೊಡಲಿದೆ ಎನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.
ರಮ್ಯಾ ಪರ ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಂಡಿರುವ ಅಂಬರೀಶ್ ಮತ್ತು ದರ್ಶನ್ ಕಾಂಬಿನೇಶನಿನಲ್ಲಿ ಬಂದ ಬುಲ್ ಬುಲ್ ಚಿತ್ರಕ್ಕೆ ಮಂಡ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಅದರ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಈಗ ಸಜ್ಜಾಗಿದೆ.
ಇನ್ನು ಚಿರಂಜೀವಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬೆಂಗಳೂರು, ಕೋಲಾರ, ಉತ್ತರ ಕರ್ನಾಟಕ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











