ಸರ್ಜಾ ಕುಟುಂಬದ ಕುಡಿ ಜೊತೆಗೆ ಶ್ರುತಿ ಹರಿಹರನ್ ಸಿನಿಮಾ.!
ಆಕ್ಷನ್ ಕಿಂಗ್.. ಜೆಂಟಲ್ ಮ್ಯಾನ್ ಅಂತೆಲ್ಲಾ ಕರೆಯಿಸಿಕೊಳ್ಳುವ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಗಂಭೀರ ಆರೋಪ ಮಾಡಿದ್ದರು. 'ವಿಸ್ಮಯ' ಚಿತ್ರದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು ಎಂದು #ಮೀಟೂ ಅಭಿಯಾನದ ಅಡಿ ಶ್ರುತಿ ಹರಿಹರನ್ ಬೆಟ್ಟು ಮಾಡಿ ತೋರಿಸಿದ್ದರು.
ಈ ಪ್ರಕರಣ ಇಡೀ ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಶ್ರುತಿ ಹರಿಹರನ್ ಮಾಡಿರುವ ಆರೋಪ ಸುಳ್ಳು ಎನ್ನುತ್ತ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಶ್ರುತಿ ಹರಿಹರನ್ - ಅರ್ಜುನ್ ಸರ್ಜಾ ನಡುವಿನ ವಿವಾದ ಕೋರ್ಟ್ ಅಂಗಳದಲ್ಲಿದೆ.
ಹೀಗಿರುವಾಗಲೇ, ಅರ್ಧಕ್ಕೆ ನಿಂತು ಹೋಗಿದ್ದ ಚಿತ್ರಕ್ಕೆ ಮರುಜೀವ ನೀಡಲು ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಮನಸ್ಸು ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ಆದ್ಯ' ಚಿತ್ರಕ್ಕೆ ಮರುಜೀವ
ತೆಲುಗಿನ 'ಕ್ಷಣಂ' ಚಿತ್ರದ ರೀಮೇಕ್ ಆಗಿರುವ 'ಆದ್ಯ' ಚಿತ್ರಕ್ಕೆ ಕಳೆದ ವರ್ಷ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಕೆಲವು ದಿನ ಚಿತ್ರೀಕರಣ ನಡೆದ ಮೇಲೆ ಚಿತ್ರ ನಿಂತು ಹೋಗಿತ್ತು. ಈಗ ಇದೇ ಪ್ರಾಜೆಕ್ಟ್ ಗೆ ಮರುಜೀವ ಸಿಕ್ಕಿದೆ.

ಟ್ರ್ಯಾಕ್ ಗೆ ಬಂದ 'ಆದ್ಯ'
ಕೆ.ಎಂ.ಚೈತನ್ಯ ನಿರ್ದೇಶನದ 'ಆದ್ಯ' ಚಿತ್ರ ಇದೀಗ ಲಾಂಗ್ ಗ್ಯಾಪ್ ಬಳಿಕ ಟ್ರ್ಯಾಕ್ ಗೆ ಮರಳಿದೆ. ಇನ್ನೆರಡು ಮೂರು ತಿಂಗಳಲ್ಲಿ 'ಆದ್ಯ' ಚಿತ್ರವನ್ನ ಕಂಪ್ಲೀಟ್ ಮಾಡಿ ತೆರೆಗೆ ತರಲು ಕೆ.ಎಂ.ಚೈತನ್ಯ ಮುಂದಾಗಿದ್ದಾರೆ.

ಚಿರಂಜೀವಿ ಸರ್ಜಾ-ಶ್ರುತಿ ಮುಖಾಮುಖಿ ಆಗ್ತಾರಾ.?
ಈಗಾಗಲೇ ಶ್ರುತಿ ಹರಿಹರನ್ ರವರ ಭಾಗದ ಚಿತ್ರೀಕರಣ ಮುಗಿದು ಹೋಗಿದೆ. ಹೀಗಾಗಿ, ಡಬ್ಬಿಂಗ್ ನಲ್ಲಿ ಮಾತ್ರ ಶ್ರುತಿ ಹರಿಹರನ್ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ನಿರ್ದೇಶಕ ಕೆ.ಎಂ.ಚೈತನ್ಯ.

ಶೂಟಿಂಗ್ ಇನ್ನೂ ಪೆಂಡಿಂಗ್ ಇದೆ.!
ಚಿರಂಜೀವಿ ಸರ್ಜಾ ರವರ ಭಾಗದ ಚಿತ್ರೀಕರಣ ಇನ್ನೂ ಪೆಂಡಿಂಗ್ ಇದೆ. ಮಾರ್ಚ್ ನಲ್ಲಿ ಚಿರಂಜೀವಿ ಸರ್ಜಾ ಕಾಲ್ ಶೀಟ್ ಕೊಟ್ಟಿದ್ದಾರಂತೆ. ಅದು ಮುಗಿದ ಬಳಿಕ ಪೋಸ್ಟ್ ಪ್ರೊಡಕ್ಷನ್, ಪ್ರೊಮೋಷನ್ ಮತ್ತು ರಿಲೀಸ್. 'ಆದ್ಯ' ಚಿತ್ರದ ಪ್ರಮೋಷನ್ ವೇಳೆ ಶ್ರುತಿ ಹರಿಹರನ್ ಮತ್ತು ಚಿರಂಜೀವಿ ಸರ್ಜಾ ಒಂದೇ ವೇದಿಕೆ ಹಂಚಿಕೊಳ್ತಾರಾ, ನೋಡಬೇಕು.


Click it and Unblock the Notifications











