ಇನ್ನೊಂದು ಹಿಟ್ ನಿರೀಕ್ಷೆಯಲ್ಲಿ ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ ಅವರು ಇನ್ನೊಂದು ಹಿಟ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಅವರ ಅಭಿನಯದ 'ಅಜಿತ್' ಚಿತ್ರ ಶುಕ್ರವಾರದಿಂದ (ಮೇ.9) ರಾಜ್ಯಾದ್ಯಂತ ಅಮೋಘ ಪ್ರಾರಂಭವಾಗುತ್ತಿದೆ. ಈ ಬಾರಿಯೂ ಚಿರು ಅಭಿಮಾನಿಗಳ ಹೃದಯ ಗೆಲ್ತಾರಾ ಎಂಬ ಕುತೂಹಲ ಇದ್ದೇ ಇದೆ.
ಈಗ ತೆರೆಕಂಡಿರುವ ಅವರ 'ಚಂದ್ರಲೇಖ' ಚಿತ್ರ ಶತದಿನೋತ್ಸವಕ್ಕೆ ಸಜ್ಜಾಗಿದೆ. ಚಿರಂಜೀವಿ ಸರ್ಜಾ ಅಭಿನಯದ ರೀಮೇಕ್ ಚಿತ್ರಗಳೆಲ್ಲವೂ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿವೆ. ಇದೀಗ ಬರುತ್ತಿರುವ ಅಜಿತ್ ಚಿತ್ರವೂ ತಮಿಳಿನ 'ಪೈಯ್ಯಾ' ಚಿತ್ರದ ರೀಮೇಕ್. [ಚಿರು ಅಭಿನಯದ 'ಚಂದ್ರಲೇಖ' ಚಿತ್ರ ವಿಮರ್ಶೆ]
ಮೂಲ ಚಿತ್ರದಲ್ಲಿ ಕಾರ್ತಿ ಹಾಗೂ ತಮನ್ನಾ ಮುಖ್ಯ ಪಾತ್ರಗಳನ್ನು ಪೋಷಿಸಿದ್ದರು. ಬೆಂಗಳೂರಿನಿಂದ ಆರಂಭವಾಗುವ ಕಥೆ ಹಲವಾರು ತಿರುವುಗಳನ್ನು ಪಡೆಯುತ್ತಾ ಮುಂಬೈವರೆಗೂ ರೋಚಕವಾಗಿ ಸಾಗಿಹೋಗುತ್ತಾ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡುತ್ತದೆ.ಸಂಜನಾ ಗಲ್ ರಾಣಿ ಸಹೋದರಿ ನಿಕ್ಕಿ ಗಲ್ ರಾಣಿ ಇದೇ ಮೊದಲ ಬಾರಿಗೆ ಚಿರುಗೆ ಜೋಡಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಹೇಶ್ ಬಾಬು ಈ ಚಿತ್ರದ ನಿರ್ದೇಶಕರು. ಐದು ಹಾಡುಗಳಿರುವ ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾರ ಸಂಗೀತ ನಿರ್ದೇಶನವಿದೆ. ಮೋಹನ್ ಛಾಯಾಗ್ರಹಣ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿನೋದ್ ಮನೋಹರ್ ಅವರ ಸಂಕಲನ ಚಿತ್ರಕ್ಕಿದೆ.
ಬಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ.ಪ್ರೇಮ್ ಹಾಗೂ ಪ್ರಣವ್ ಗೌಡ ಅವರು ನಿರ್ಮಿಸಿರುವ 'ಅಜಿತ್' ಚಿತ್ರದ ಸಹ ನಿರ್ಮಾಪಕರು ಮಾರುತೇಶ್, ಹರೀಶ್ ಹಾಗೂ ರಾಜೇಶ್. ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ನಿಕ್ಕಿ, ಅರ್ಪಿತ್(ಬಾಂಬೆ), ರಾಕ್ ಲೈನ್ ಸುಧಾಕರ್, ಶಿವಮಂಜು ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












