ಗುರು ಶಿಷ್ಯರು ಚಿತ್ರತಂಡದ ಆ ಒಂದು ಕೆಲಸಕ್ಕೆ ಸಿಎಂ ಬೊಮ್ಮಾಯಿ ಪ್ರಶಂಸೆ
ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿರುವ ಗುರು ಶಿಷ್ಯರು ತಂಡ ಕಳೆದ ಶುಕ್ರವಾರವಷ್ಟೇ ( ಸೆಪ್ಟೆಂಬರ್ 23 ) ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿತ್ತು. ಈ ಹಿಂದೆ ನಟ ಪ್ರಜ್ವಲ್ ದೇವರಾಜ್ ಅವರಿಗೆ ಜಂಟಲ್ಮನ್ ರೀತಿಯ ಒಂದೊಳ್ಳೆ ಸಿನಿಮಾ ನಿರ್ದೇಶಿಸುವುದರ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಈ ಚಿತ್ರವನ್ನು ನಿರ್ದೇಶಿಸಿದ್ದು, ನಾಯಕ ಶರಣ್ ಹಾಗೂ ತರುಣ್ ಸುಧೀರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಕನ್ನಡದ ನಟರಾದ ಶರಣ್, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್, ರವಿಶಂಕರ್ ಗೌಡ ಹಾಗೂ ನೆನಪಿರಲಿ ಪ್ರೇಮ್ ಪುತ್ರರು ನಟಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಚಿತ್ರ ಟ್ರೈಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆಯನ್ನು ಮೂಡಿಸಿತ್ತು ಹಾಗೂ ಈ ನಿರೀಕ್ಷೆಯನ್ನು ಉಳಿಸುಕೊಳ್ಳುವಲ್ಲಿ ಯಶಸ್ವಿಯಾದ ಚಿತ್ರತಂಡ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತು. ಸಿನಿಮಾ ನೋಡಿದ ಪ್ರೇಕ್ಷಕ ಇಂಥ ವಿಷಯಗಳ ಮೇಲೆ ಕನ್ನಡದಲ್ಲಿ ಇನ್ನೂ ಹೆಚ್ಚಿನ ಸಿನಿಮಾಗಳು ಬರಬೇಕು ಎಂದು ಹೊಗಳಿದ್ದರು. ಚಿತ್ರದಲ್ಲಿ ದೇಶೀಯ ಆಟವಾದ ಖೋಖೋಗೆ ಹೆಚ್ಚಿನ ಮಹತ್ವ ನೀಡಿದ್ದ ಕಾರಣ ವೀಕ್ಷಕರು ಈ ರೀತಿಯ ಪ್ರಶಂಸೆಯನ್ನು ನೀಡಿದ್ದರು.
ಇದೇ ವಿಷಯಕ್ಕಾಗಿ ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಸಹ ಇದೀಗ ಗುರು ಶಿಷ್ಯರು ಚಿತ್ರ ತಂಡವನ್ನು ಭೇಟಿಯಾಗಿ ಪ್ರಶಂಸಿಸಿದ್ದಾರೆ. ಈ ವಿಷಯವನ್ನು ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿನ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರ ಜತೆಗೆ ಚಿತ್ರತಂಡವಿರುವ ಫೋಟೊವನ್ನು ಹಂಚಿಕೊಂಡಿರುವ ನಟ ಹಾಗೂ ನಿರ್ಮಾಪಕ ಶರಣ್ ಗುರು ಶಿಷ್ಯರು ಚಿತ್ರದಲ್ಲಿ ಖೋಖೋ ಆಟವನ್ನು ಹೈಲೈಟ್ ಮಾಡಿ ತೋರಿಸಿದ್ದಕ್ಕೆ ನಮ್ಮ ತಂಡವನ್ನು ಪ್ರಶಂಸಿಸಿದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸರ್ ಅವರಿಗೆ ಧನ್ಯವಾದಗಳು, ತಮ್ಮ ಹಲವಾರು ಕೆಲಸಗಳ ನಡುವೆಯೂ ನಮ್ಮ ತಂಡವನ್ನು ಭೇಟಿ ಮಾಡಿದ್ದು ತುಂಬಾ ಖುಷಿ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಗುರು ಶಿಷ್ಯರು ಚಿತ್ರ ನಾಳೆಗೆ ಒಂದು ವಾರವನ್ನು ಪೂರೈಸಲಿದ್ದು, ತನ್ನ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ತನ್ನ ಆಟವನ್ನು ನಿಲ್ಲಿಸಲಿದೆ. ಶುಕ್ರವಾರದಿಂದ ನರ್ತಕಿ ಚಿತ್ರಮಂದಿರದಲ್ಲಿ ಪೊನ್ನಿಯಿನ್ ಸೆಲ್ವನ್ ಕನ್ನಡ ಹಾಗೂ ತೆಲುಗು ವರ್ಷನ್ ಬಿಡುಗಡೆಯಾಗಲಿದೆ. ಮುಖ್ಯ ಚಿತ್ರಮಂದಿರವನ್ನು ಹೊರತುಪಡಿಸಿ ರಾಜ್ಯದ ಉಳಿದೆಡೆ ಸಿನಿಮಾ ಉತ್ತಮ ಪ್ರದರ್ಶನಗಳನ್ನು ಕಾಣುತ್ತಿದೆ. ಇಂದು ಚಿತ್ರತಂಡವನ್ನು ಭೇಟಿಯಾಗಿ ಹೊಗಳಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಿತ್ರಮಂದಿರದಲ್ಲಿ ಶೀಘ್ರದಲ್ಲಿಯೇ ಚಿತ್ರ ನೋಡಲಿದ್ದಾರೆ ಎಂಬ ಮಾತೂ ಸಹ ಕೇಳಿಬಂದಿದೆ.


Click it and Unblock the Notifications











