ಕೆಸಿಸಿ ಕ್ರಿಕೆಟ್ ಟೂರ್ನಿಗೆ ಸಿದ್ಧರಾಮಯ್ಯ ಚಾಲನೆ : ಶಿವಣ್ಣ - ಸುದೀಪ್ ನಡುವೆ ಮೊದಲ ಪಂದ್ಯ
ಕೆಸಿಸಿ (ಕನ್ನಡ ಚಲನಚಿತ್ರ ಕಪ್) ಪಂದ್ಯಾವಳಿ ಇಂದಿನಿಂದ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಪಂದ್ಯಾವಳಿ ಉದ್ಘಾಟನೆಯನ್ನು ಮಾಡಿದ್ದಾರೆ. ನಗರದ ನೆಲಮಂಗಲದ ಆದಿತ್ಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಇಂದು ಮತ್ತು ನಾಳೆ ಎರಡು ದಿನ ಮಾತ್ರ ಆಟ ನಡೆಯಲಿದೆ.
ಇಂದು 4 ತಂಡಗಳು ಮೈದಾನದಲ್ಲಿ ಸೆಣಸಾಡಲಿವೆ. ನಾಳೆ ಉಳಿದ ಎರಡು ಪಂದ್ಯಗಳು ಇದೆ. ಅದರ ನಂತರ ನಾಳಯೇ ಫೈನಲ್ ಮ್ಯಾಚ್ ನಡೆಯಲಿದ್ದು, ಯಾರು ಕಪ್ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಇಂದು ಹೊಯ್ಸಳ ಲಯನ್ಸ್ ಮತ್ತು ವಿಜಯನಗರ ಈಗಲ್ಸ್ ನಡುವೆ ಮ್ಯಾಚ್ ಶುರುವಾಗಿದೆ. ಹೊಯ್ಸಳ ಲಯನ್ಸ್ ತಂಡಕ್ಕೆ ನಟ ಶಿವರಾಜ್ ಕುಮಾರ್ ಆಡುತ್ತಿದ್ದು, ವಿಜಯನಗರ ಈಗಲ್ಸ್ ತಂಡದಲ್ಲಿ ನಟ ಸುದೀಪ್ ಆಡುತ್ತಿದ್ದಾರೆ. ಮೊದಲನೆಯ ಪಂದ್ಯವೇ ಸುದೀಪ್ ಹಾಗೂ ಶಿವಣ್ಣ ನಡುವೆ ನಡೆಯುತ್ತಿದ್ದು ಸಖತ್ ರೋಚಕತೆಯಿಂದ ಕೂಡಿದೆ.
ಅಂದಹಾಗೆ, ಕೆಸಿಸಿ ಕಪ್ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ''ಸುದೀಪ್ ಮತ್ತು ಶಿವರಾಜ್ ಕುಮಾರ್ ಬಾಲ್ಯದಿಂದಲೂ ಕ್ರಿಕೆಟ್ ಆಡುತ್ತಿದ್ದವರು. ನಾವೆಲ್ಲ ಕಬ್ಬಡ್ಡಿ ಆಡ್ತಿದ್ವಿ. ಕ್ರೀಡೆಗೆ ಯಾವುದೇ ಜಾತಿ ಧರ್ಮ ಇರಲ್ಲ, ಜಾತ್ಯಾತೀತವಾಗಿ ಬೆಳೆಯ ಬೇಕಾದರೆ ಕ್ರೀಡಾಪಟು ಆಗಿರಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡಿ. ಎಲ್ಲರಿಗೂ ಒಳ್ಳೆದಾಗಲಿ'' ಎಂದು ಶುಭಕೋರಿದರು.

ಕನ್ನಡ ಚಿತ್ರರಂಗದ ಕಲಾವಿದರು ಮತ್ತು ಪತ್ರಕರ್ತರ ನಡುವೆ ಈ ಪಂದ್ಯಗಳು ನಡೆಯುತ್ತದೆ. ಒಟ್ಟು ಆರು ತಂಡಗಳು ಈ ಟೂರ್ನಿ ಯಲ್ಲಿ ಭಾಗಿಯಾಗಲಿದ್ದು, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ನಿರ್ದೇಶಕ ನಂದಕಿಶೋರ್, ಇಂದ್ರಜೀತ್ ಲಂಕೇಶ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದು 'ಟಿ 10' ಪಂದ್ಯವಾಗಿದ್ದು, ಪ್ರತಿ ತಂಡಕ್ಕೆ 10 ಓವರ್ ನೀಡಲಾಗುವುದು.


Click it and Unblock the Notifications











