'ಒಳ್ಳೆ ಹುಡುಗ'ನ ಹುಚ್ಚಾಟ ಬಿಚ್ಚಿಟ್ಟ 'MLA' ಚಿತ್ರದ ಸಹ ನಿರ್ದೇಶಕ.!
'ಬಿಗ್ ಬಾಸ್' ಪ್ರಥಮ್ ಸದ್ಯ, ವಿವಾದಗಳಿಂದ ದೂರವಾಗಿ ಸಿನಿಮಾದಲ್ಲಿ ಬಿಜಿಯಾಗಿದ್ದರು. ಆದ್ರೆ, ಸಿನಿಮಾ ಸೆಟ್ ನಲ್ಲಿ ಈಗ ವಿವಾದ ಮಾಡಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.
ಹೌದು, 'ಒಳ್ಳೆ ಹುಡುಗ' ಎಂದು ಗುರುತಿಸಿಕೊಳ್ಳುತ್ತಿದ್ದ ಪ್ರಥಮ್ ಅವರನ್ನ ''ಗೋಮುಖ ವ್ಯಾಘ್ರ'' ಎಂದು ಸಹ ನಿರ್ದೇಶಕ ರಾಮಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'MLA' ಚಿತ್ರದ ಚಿತ್ರೀಕರಣದ ವೇಳೆ ನನ್ನನ್ನು ನಿಂದಿಸಿ ಅವಮಾನ ಮಾಡಿದ್ದಲ್ಲದೇ, ನಿರ್ದೇಶಕ ಮತ್ತು ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಫೇಸ್ ಬುಕ್ ಲೈವ್ ನಲ್ಲಿ ಪ್ರಥಮ್ ವಿರುದ್ಧ ಸಹ ನಿರ್ದೇಶಕ ರಾಮಚಂದ್ರ ಆರೋಪಿಸಿದ್ದಾರೆ.
ಮುಂದೆ ಓದಿ....

ಮೈಸೂರಿನ ಚಿತ್ರೀಕರಣದಲ್ಲಿ ನಡೆದ ಘಟನೆ ಏನು?
''ಮೈಸೂರಿನ ಮಾನಸ ಗಂಗೋತ್ರಿಯಲ್ಲಿ 'MLA' ಚಿತ್ರೀಕರಣ ನಡೆಯುತ್ತಿತ್ತು. ಸುಡು ಬಿಸಿಲಿನಲ್ಲಿ ಯಾವುದೇ ಬ್ರೇಕ್ ಇಲ್ಲದೇ ತಾಂತ್ರಿಕ ತಂಡ, ಜೂನಿಯರ್ ಕಲಾವಿದರು ಶೂಟಿಂಗ್ ಮಾಡುತ್ತಿದ್ದೇವೆ. ಈ ವೇಳೆ ಪ್ರಥಮ್ ಸುಮಾರು 8 ಟೇಕ್ ತೆಗೆದುಕೊಂಡರೂ ಶಾಟ್ ಮುಗಿಸಲಿಲ್ಲ. ಈ ಮಧ್ಯೆ ಅಲ್ಲಿಗೆ ಬಂದಿದ್ದ ಹುಡುಗರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಶೂಟಿಂಗ್ ಸ್ಥಳದಿಂದ ಹೇಳದೆ ಕೇಳದೆ ಹೊರಟು ಹೋದರು'' - ರಾಮಚಂದ್ರ, ಸಹ ನಿರ್ದೇಶಕ

ಕೈಹಿಡಿದು ಎಳೆದು ಕರೆತರಬೇಕಾಯಿತು
''ನಿರ್ದೇಶಕರು ಕರೆಯುತ್ತಿದ್ದರು ಬೆಲೆ ಕೊಡದೆ ಪ್ರಥಮ್ ಹೋದರು. ಸುಮಾರು ಹೊತ್ತು ಕಳೆದರೂ ಪ್ರಥಮ್ ಶೂಟಿಂಗ್ ಸ್ಪಾಟ್ ಗೆ ಬರಲಿಲ್ಲ. ಈ ವೇಳೆ ನಾನು ಪ್ರಥಮ್ ಇದ್ದಲ್ಲಿಗೆ ಹೋಗಿ, ಅಚಾನಕ್ ಆಗಿ ಕೈ ಹಿಡಿದು ಎಳೆದು ಕರೆತರಲಾಯಿತು. ಆದ್ರೆ, ಯಾವುದೇ ಕಾರಣಕ್ಕೂ ಅವರಿಗೆ ನೋಯಿಸಿಲ್ಲ'' - ರಾಮಚಂದ್ರ, ಸಹ ನಿರ್ದೇಶಕ

ಕೆಟ್ಟ ಪದಗಳಿಂದ ನಿಂದಿಸಿದ ಪ್ರಥಮ್
''ಪ್ರಥಮ್ ಎಳೆದುಕೊಂಡು ಬಂದ ಕಾರಣಕ್ಕೆ ಎಲ್ಲರ ಮುಂದೆ ಕೆಟ್ಟ ಪದಗಳನ್ನ ಉಪಯೋಗಿಸಿ ನಿಂದಿಸಿದ್ದಾರೆ. ಬಾಯಿಂದ ಹೇಳಲಾಗದಂತಹ ಪದಗಳನ್ನ ಬಳಸಿ ಬೈಯ್ದಿದ್ದಾರೆ. ನಟಿ ರೇಖಾ, ಕುರಿ ಪ್ರತಾಪ್ ಅವರಂತಹ ಹಿರಿಯ ಕಲಾವಿದರು ಸ್ಥಳದಲ್ಲಿದ್ದರೂ ಅವರಿಗೂ ಬೆಲೆ ಕೊಡದೆ ನನ್ನನ್ನು ಅವಮಾನಿಸಿದ್ದಾನೆ'' - ರಾಮಚಂದ್ರ, ಸಹ ನಿರ್ದೇಶಕ

ಬ್ಲ್ಯಾಕ್ ಮೇಲ್ ಮಾಡಿರುವ ಪ್ರಥಮ್
''ಇಷ್ಟೆಲ್ಲಾ ಆದ್ಮೇಲೆ ಮುಂದಿನ ದಿನ ಚಿತ್ರೀಕರಣ ಬರಲ್ಲವೆಂದು ನಿರ್ಮಾಪಕರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ರಾಮಚಂದ್ರ ಶೂಟಿಂಗ್ ಗೆ ಬಂದ್ರೆ, ನಾನು ಸಿನಿಮಾ ಮಾಡಲ್ಲವೆಂದು ನಿರ್ದೇಶಕರಿಗೆ ಭಯಪಡಿಸಿದ್ದಾನೆ. ಇದನ್ನ ನಿರ್ದೇಶಕರು ನನ್ನ ಗಮನಕ್ಕೆ ತಂದರು. ಒಂದು ಸಿನಿಮಾ ನಿಲ್ಲಬಾರದು ಎಂಬ ಕಾರಣಕ್ಕೆ ನಾನು ಈ ಚಿತ್ರದಿಂದ ಹೊರಬಂದಿದ್ದೇನೆ'' - ರಾಮಚಂದ್ರ, ಸಹ ನಿರ್ದೇಶಕ

ನೀವು ಅಂದುಕೊಂಡಷ್ಟು ಒಳ್ಳೆಯವನಲ್ಲ.!
''ಪ್ರಥಮ್ ನೀವು ಅಂದುಕೊಂಡಷ್ಟು ಒಳ್ಳೆಯವನಲ್ಲ. ಅವನಿಗೆ ಬೇಕಾಗುವಂತಹ ಕಾಸ್ಟ್ಯೂಮ್ಸ್ ತರಬೇಕು, ಅವನು ಕೇಳುವ ಚಪ್ಪಲಿ, ಬಟ್ಟೆ ತರಬೇಕು. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಯೋಚಿಸಿದ್ದರೇ, ಅವರಿಂದ ದೂರವಿರಿ'' - ರಾಮಚಂದ್ರ, ಸಹ ನಿರ್ದೇಶಕ

ಶೂಟಿಂಗ್ ಸೆಟ್ ಗೂ ಲೇಟ್
''ಶೂಟಿಂಗ್ ಬರೋದೇ ಲೇಟು. ಬಂದ ಮೇಲೆ ಆ ಡೈಲಾಗ್ ಹೇಳಲ್ಲ, ಈ ಡೈಲಾಗ್ ಹೇಳಲ್ಲ ಅಂತ ರಗಳೆ ಮಾಡ್ತಾರೆ. ನಿಮ್ಮ ಕಥೆಗೆ ಮತ್ತು ನಿಮ್ಮ ಸಿನಿಮಾಗೆ ನ್ಯಾಯ ಒದಗಿಸಲ್ಲ. ಪ್ರತಿಯೊಂದು ಸಲವೂ ನನ್ನನ್ನ ಸೆಟ್ ನಲ್ಲಿ ರೇಗಿಸುತ್ತಿದ್ದ. ದಯವಿಟ್ಟು ಅವನನ್ನ ದೂರವಿಡಿ'' - ರಾಮಚಂದ್ರ, ಸಹ ನಿರ್ದೇಶಕ

ಯಾರು ಈ ರಾಮಚಂದ್ರ?
ಅಂದ್ಹಾಗೆ, ರಾಮಚಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ಸುಮಾರು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಓಂ ಸಾಯಿ ಪ್ರಕಾಶ್ ಅವರ ಬಳಿ 9 ವರ್ಷದಿಂದ ಕೆಲಸ ಮಾಡುತ್ತಿದ್ದರು. ಈಗ ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈ ಚಿತ್ರವನ್ನ ಮೌರ್ಯ ಮಂಜುನಾಥ್ ನಿರ್ದೇಶನ ಮಾಡುತ್ತಿದ್ದಾರೆ.
(ಸಹ ನಿರ್ದೇಶಕ ರಾಮಚಂದ್ರ ಅವರು ಫೇಸ್ ಬುಕ್ ಲೈವ್ ನಲ್ಲಿ ಹೇಳಿರುವ ಆರೋಪಗಳನ್ನ ಯಥಾವತ್ತಾಗಿ ಬರೆಯಲಾಗಿದೆ)


Click it and Unblock the Notifications











