ನನ್ನ-ಗುರು ಜೋಡಿ ಕನ್ನಡಿಗರಿಗೆ ನಗುವಿನ ಹಬ್ಬ: ನವರಸನಾಯಕ ಜಗ್ಗೇಶ್
ಜಗ್ಗೇಶ್ ಮತ್ತು 'ಮಠ' ಗುರುಪ್ರಸಾದ್ ಜೋಡಿ ಕಚಗುಳಿ ಇಡಲು ಮತ್ತೆ ತಯಾರಿ ನಡೆಸಿದೆ. ಟೀಸರ್ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಕಾಂಬಿನೇಷನ್ನ ಮೂರನೇ ಚಿತ್ರ 'ರಂಗನಾಯಕ'ದ ಚಿತ್ರೀಕರಣ ಏಪ್ರಿಲ್ 2ರಿಂದ ಆರಂಭವಾಗಲಿದೆ.
ಜಗ್ಗೇಶ್ ಇದ್ದಲ್ಲಿ ನಗುವಿನ ರಸದೌತಣ ಖಾತರಿ. ಇನ್ನು ಅವರ ಜತೆಗೆ ನಿರ್ದೇಶಕ ಗುರುಪ್ರಸಾದ್ ಸೇರಿದರೆ? ಅದು ಹೇಗಿರುತ್ತದೆ ಎಂಬುದನ್ನು 'ಮಠ' ಮತ್ತು 'ಎದ್ದೇಳು ಮಂಜುನಾಥ' ಚಿತ್ರಗಳೇ ತೋರಿಸಿಕೊಟ್ಟಿವೆ. ದೀರ್ಘಕಾಲದ ಬಳಿಕ ಇಬ್ಬರೂ ತಮ್ಮ ಮನಸ್ತಾಪಗಳನ್ನು ಬದಿಗಿಟ್ಟು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸಲು ಬರುತ್ತಿದ್ದಾರೆ ಎಂದರೆ ನಿರೀಕ್ಷೆ ದುಪ್ಪಟ್ಟಾಗುವುದು ಸಹಜ. ಇದು ಗುರುಪ್ರಸಾದ್ ಅವರ ನಿರ್ದೇಶನದಲ್ಲಿಯೇ ಅತಿ ಅದ್ದೂರಿ ಸಿನಿಮಾ ಎಂದು ಹೇಳಲಾಗಿದೆ.
ವಿವಿಧ ಕಾರಣಗಳಿಂದ ವಿಳಂಬವಾಗಿದ್ದ ಸಿನಿಮಾ ಚಿತ್ರೀಕರಣ ಆರಂಭವಾಗಲು ಸಕಲ ಸಿದ್ಧತೆ ನಡೆದಿದೆ ಎಂಬ ಮಾಹಿತಿಯನ್ನು ನಟ ಜಗ್ಗೇಶ್ ನೀಡಿದ್ದಾರೆ.

ಪೂರ್ವಭಾವಿ ತಯಾರಿ ಮುಕ್ತಾಯ
'ರಂಗನಾಯಕ' ಬಹಳ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಚಿತ್ರ ಎಂಬ ಸುಳಿವನ್ನು ಜಗ್ಗೇಶ್ ಬಿಟ್ಟುಕೊಟ್ಟಿದ್ದಾರೆ. ದೊಡ್ಡ ಸಿನಿಮಾಗಳು ಚಿತ್ರೀಕರಣ ಆರಂಭಿಸುವ ಮುನ್ನ ಸಾಕಷ್ಟು ಪೂರ್ವ ತಯಾರಿ ಅಗತ್ಯ. ಈ ಸಿನಿಮಾಕ್ಕೂ ದೊಡ್ಡ ಮಟ್ಟದಲ್ಲಿ ಪೂರ್ವಭಾವಿ ತಯಾರಿ ನಡೆಯುತ್ತಿತ್ತು. ಈಗ ಅದೆಲ್ಲವೂ ಮುಗಿದಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

ಒಂದು ಕೋಟಿ ವೆಚ್ಚದ ಸೆಟ್
ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ವೆಚ್ಚದ ಸೆಟ್ ನಿರ್ಮಿಸಿ ಅಲ್ಲಿ ಚಿತ್ರೀಕರಣ ನಡೆಸಲು ಯೋಜನೆ ನಡೆಸಲಾಗುತ್ತಿದೆ. ಬೃಹತ್ ಅರಮನೆಯ ಸೆಟ್ ರೂಪಿಸಲಾಗುತ್ತಿದೆ. ಈ ಸೆಟ್ಗೇ ಒಂದು ಕೋಟಿ ರೂ. ವೆಚ್ಚ ತಗುಲಬಹುದು ಎಂದು ಜಗ್ಗೇಶ್ ಅಂದಾಜಿಸಿದ್ದಾರೆ.

ಕನ್ನಡಿಗರಿಗೆ ನಗುವಿನ ಹಬ್ಬ
'ರಂಗನಾಯಕ'ದ ಮೂಲಕ ಕನ್ನಡಕ್ಕೆ ಅದ್ಭುತವಾದ ಚಿತ್ರ ನೀಡಲು ಶ್ರಮಪಡುತ್ತಿದ್ದೇವೆ ಎಂದಿರುವ ನವರಸನಾಯಕ, 'ನನ್ನ ಮತ್ತು ಗುರು ಜೋಡಿ ಕನ್ನಡಿಗರಿಗೆ ನಗುವಿನ ಹಬ್ಬ' ಎನ್ನುವ ಮೂಲಕ ಚಿತ್ರದಲ್ಲಿ ಭರ್ಜರಿ ನಗು ಸಿಗಲಿದೆ ಎಂದು ತಿಳಿಸಿದ್ದಾರೆ.

ಬಾಲ್ ಬೌಂಡರಿ ತಲುಪಿಸುವೆ
"ನವರಸನಾಯಕನ ರಂಗನಾಯಕ ಮಾಡಲು ಹೊರಟ ಗುರುಪ್ರಸಾದ್. ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ. ಹತ್ತು ಹೆರುವುದಕ್ಕಿಂತ ಮುತ್ತಿನಂತ ಒಂದು ಹೆರುವಂತೆ. ನನಗೆ ನೂರಾರು ಚಿತ್ರಕ್ಕಿಂತ ಮುತ್ತಿನಂತ ಕೆಲ ಚಿತ್ರ ಸಾಕು ಕನ್ನಡಿಗರ ಖುಷಿಪಡಿಸಲು. ಧನ್ಯವಾದಗಳು" ಎಂದ ಜಗ್ಗೇಶ್ ಸಿನಿಮಾ ಘೋಷಣೆಯಾದಾಗ ಹೇಳಿಕೊಂಡಿದ್ದರು.


Click it and Unblock the Notifications











