ಕಡಲ್ ಚಿತ್ರ ತೋಪು; ಮಣಿರತ್ನಂ ವಿರುದ್ಧ ಕಂಪ್ಲೇಂಟ್
ಕಡಲ್ ಚಿತ್ರದ ವಿತರಕರು ಮಣಿರತ್ನಂ ವಿರುದ್ಧ ಸಿಡಿದೆದ್ದಿದ್ದರು. ಈ ಚಿತ್ರದಿಂದ ತಮಗೆ ಭಾರಿ ನಷ್ಟವಾಗಿದೆ ಎಂದು ಆಗ್ರಹಿಸಿ ಅವರ ನಿವಾಸದ ಮುಂದೆ ಧರಣಿ ಮಾಡಿದ್ದರು. ಈಗ ಮನ್ನನ್ ಎಂಬ ವಿತರಕ ಚೆನ್ನೈ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ.
ಕಡಲ್ ಚಿತ್ರದ ವಿತರಣೆ ಹಕ್ಕುಗಳನ್ನು ರು.16 ಕೋಟಿ ಕೊಟ್ಟು ಖರೀದಿಸಿದ್ದೆವು. ಆದರೆ ಕಡೆಗೆ ತಮ್ಮ ಕೈಗೆ ಬಂದದ್ದು ಕೇವಲ ರು.3.2 ಕೋಟಿ. ಚಿತ್ರದ ಬಿಡುಗಡೆಗೂ ಮುನ್ನ ತಮಗೆ ಪ್ರದರ್ಶನ ಏರ್ಪಡಿಸುವಂತೆ ಕೋರಿದ್ದೆವು. ತಾಂತ್ರಿಕ ಕಾರಣಗಳಿಂದ ಚಿತ್ರ ಪ್ರದರ್ಶನ ಸಾಧ್ಯವಿಲ್ಲ ಎಂದು ಮಣಿರತ್ನಂ ಮ್ಯಾನೇಜರ್ ಸಬೂಬು ನೀಡಿದ್ದರು.
ಆದರೆ ಮಣಿರತ್ನಂ ಅವರ ನಿರ್ದೇಶನದ ಮೇಲಿನ ನಂಬಿಕೆ ಮೇಲೆ ಚಿತ್ರದ ವಿತರಣೆ ಹಕ್ಕುಗಳನ್ನು ಕೊಂಡೆವು. ಆದರೆ ಭರಿಸಲಾರದ ನಷ್ಟ ಉಂಟಾಯಿತು. ಈ ಬಗ್ಗೆ ಚರ್ಚಿಸಬೇಕು ಎಂದು ಹಲವು ಭಾರಿ ಪ್ರಯತ್ನಿಸಿದೆ. ಮಣಿರತ್ನಂ ಭೇಟಿ ಸಾಧ್ಯವಾಗಲಿಲ್ಲ.
ತಮಗಾಗಿರುವ ನಷ್ಟವನ್ನು ಕೊಡಿಸುವಂತೆ ದೂರಿನಲ್ಲಿ ಅವರು ತಿಳಿಸಿದ್ದಾರೆ. ಏತನ್ಮಧ್ಯೆ ಮಣಿರತ್ನಂ ಅವರ ಮನೆಗೆ ಪೊಲೀಸ್ ಭದ್ರತೆಯನ್ನೂ ಕಲ್ಪಿಸಲಾಗಿದೆ. ತಮಗೆ ವಿತರಕರಿಂದ ಜೀವ ಬೆದರಿಕೆ ಇದೆ. ಆದ ಕಾರಣ ಪೊಲೀಸ ಭದ್ರತೆ ನೀಡಬೇಕು ಎಂದು ಮದ್ರಾಸ್ ಹೈಕೋರ್ಟನ್ನು ಮಣಿರತ್ನಂ ಕೋರಿದ್ದರು.
ಮಾರ್ಚ್ 14ರವರೆಗೂ ಮಣಿರತ್ನಂ ಅವರ ಮನೆ ಹಾಗೂ ಕಚೇರಿಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ತಮ್ಮ ಕಡಲ್ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೂ ವಿತಕರ ವಲಯದಿಂದ ಇಲ್ಲಸಲ್ಲದ ಆರೋಪಗಳು ಎದುರಾಗುತ್ತಿವೆ ಎಂದಿದ್ದಾರೆ ಮಣಿರತ್ನಂ. (ಏಜೆನ್ಸೀಸ್)


Click it and Unblock the Notifications












