ಹೀರೋ ಆಗಲು ಮುಂಬೈಗೆ ಹೋಗಿದ್ದೆ, ಆದರೆ...: ಹಳೆ ನೆನಪಿಗೆ ಜಾರಿದ ಜಮೀರ್ ಅಹ್ಮದ್
ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ 'ಬನಾರಸ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 22) ಅದ್ಧೂರಿಯಾಗಿ ನಡೆದಿದೆ.
ದರ್ಶನ್, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ಸಹ ಹಾಜರಿದ್ದು, ಮಗನ ಮೊದಲ ಸಿನಿಮಾಕ್ಕೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹ್ಮದ್, ''ಡಿ ಬಾಸ್ ದರ್ಶನ್ ನನ್ನ ಹೃದಯದಲ್ಲಿದ್ದಾರೆ. ಅವರು ನನ್ನ ಮಗನಿಗೆ ಪ್ರೋತ್ಸಾಹ ನೀಡುತ್ತಿರುವುದು ಅವನ ಅದೃಷ್ಟ. ನನ್ನ ಮಗ ಝೈದ್ ಖಾನ್ಗೆ ಸಣ್ಣ ವಯಸ್ಸಿನಿಂದಲೂ ಸಿನಿಮಾಗಳ ಬಗ್ಗೆ ಆಸಕ್ತಿ ಹೆಚ್ಚು. ಸಿನಿಮಾ ರಂಗ ಬೇಡ ಎಂದು ಹೇಳಿದ್ದೆ ಆದರೂ ಅವನು ಬಂದಿದ್ದಾನೆ. ಕಲೆ ಎಂಬುದು ದೇವರು ಕೊಡುವುದು. ಅವನಿಗೆ ಹಾಗೂ ಇಡೀ 'ಬನಾರಸ್' ತಂಡಕ್ಕೆ ಒಳ್ಳೆಯದಾಗಲಿ'' ಎಂದರು.

ಅಣ್ಣಾವ್ರ ಸಿನಿಮಾ ನೋಡುತ್ತಿದ್ದೆ: ಜಮೀರ್
''ರಾಜಕೀಯ ಕ್ಷೇತ್ರದಲ್ಲಿ ಸಮಯ ಸಿಕ್ಕುವುದೇ ಕಡಿಮೆ. ಹಾಗಾಗಿ ಹೆಚ್ಚು ಸಿನಿಮಾ ನೋಡುವುದಿಲ್ಲ. ಮೊದಲಿಗೆ ಅಣ್ಣಾವ್ರ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೆ. ಡಿ ಬಾಸ್ ಪರಿಚಯ ಆದ ಬಳಿಕ ದರ್ಶನ್ ಅವರ ಸಿನಿಮಾಗಳನ್ನು ನೋಡಲು ಪ್ರಾರಂಭಿಸಿದೆ. ಅವರ ಸಿನಿಮಾಗಳನ್ನು ಎಷ್ಟು ಬಾರಿ ನೋಡಿದರೂ ಬೇಸರ ಆಗುವುದಿಲ್ಲ'' ಎಂದರು ಜಮೀರ್ ಅಹ್ಮದ್.

ಪುನೀತ್ ರಾಜ್ಕುಮಾರ್ ನೆನಪು ಮಾಡಿಕೊಂಡ ಜಮೀರ್
ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡ ಜಮೀರ್ ಅಹ್ಮದ್, ''ಪುನೀತ್ ಹಾಗೂ ನನ್ನ ಮಗ ಝೈದ್ ಖಾನ್ಗೂ ಒಳ್ಳೆಯ ಗೆಳೆತನ ಇತ್ತು. ಅವರು ಇದ್ದಿದ್ದರೆ ಈ ಕಾರ್ಯಕ್ರಮಕ್ಕೆ ಅವರೂ ಬಂದಿರುತ್ತಿದ್ದರು'' ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ವಿನೋದ್ ಪ್ರಭಾಕರ್ಗೆ ಹಾಗೂ ಸಿನಿಮಾದ ನಿರ್ದೇಶಕ ಜಯತೀರ್ಥ ಅವರಿಗೆ ವಿಶೇಷ ಧನ್ಯವಾದ ಹೇಳಿದರು.

ಹೀರೋ ಆಗಲು ಹೋಗಿದ್ದ ಜಮೀರ್!
ಈ ಸಂದರ್ಭದಲ್ಲಿ ತಾವು ಹಿಂದೊಮ್ಮೆ ಸಿನಿಮಾ ಹೀರೋ ಆಗಲು ಯತ್ನಿಸಿದ್ದ ಆಸಕ್ತಿಕರ ಘಟನೆಯನ್ನು ಹಂಚಿಕೊಂಡರು, ''ಸಿನಿಮಾ ಮಾಡುವ ಆಸಕ್ತಿ ನನಗೂ ಇತ್ತು, ಹದಿನೆಂಟು ವರ್ಷ ಇದ್ದಾಗಲೇ ಹೀರೋ ಆಗಲು ಬಾಂಬೆಗೆ ಹೋಗಿದ್ದೆ. ಅಲ್ಲಿ-ಇಲ್ಲಿ ಓಡಾಡಿದೆ ಆದರೆ ನನಗೆ ಅದೃಷ್ಟ ಇರಲಿಲ್ಲ. ಈಗ ನನ್ನ ಮಗ ಹೀರೋ ಆಗಿದ್ದಾನೆ. ನಾನು ಸಿನಿಮಾಕ್ಕೆ ಬಂದಿದ್ದರೆ ಇನ್ನೊಬ್ಬ ದ್ವಾರಕೇಶ್ ಆಗ್ತಿದ್ದೆನೋ ಏನೋ? ಹೀರೋ ಅಂತೂ ಆಗುತ್ತಿರಲಿಲ್ಲ'' ಎಂದು ನಕ್ಕರು ಜಮೀರ್.

ದರ್ಶನ್ ಹೇಳಿದಂತೆ ಕೇಳು ಎಂದಿದ್ದೇನೆ: ಜಮೀರ್
''ನಾನು ರಾಜಕಾರಣಿ, ನನಗೆ ಸಿನಿಮಾ ರಂಗದ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ನಾನು ನನ್ನ ಮಗನಿಗೆ ಆ ವಿಷಯದಲ್ಲಿ ಏನೂ ಸಲಹೆ ಕೊಡಲು ಸಹ ಆಗುವುದಿಲ್ಲ. ಹಾಗಾಗಿ, ನಿನಗೆ ಏನೇ ಮಾಡಬೇಕೆಂದರು ದರ್ಶನ್ ಅವರನ್ನು ಕೇಳಿ ಮುಂದುವರಿ, ಅವರ ಮಾರ್ಗದರ್ಶನದಲ್ಲಿ ನಡೆ ಎಂದು ಹೇಳಿದ್ದೀನಿ. ನವೆಂಬರ್ ನಾಲ್ಕರಂದು ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ನಾಡಿನ ಜನ, ದರ್ಶನ್ ಅಭಿಮಾನಿಗಳು ಅವನ ಕೈ ಹಿಡಿಯಬೇಕು'' ಎಂದು ಜಮೀರ್ ಹೇಳಿದರು.


Click it and Unblock the Notifications











