ಸಿನಿಮಾ ತಂಡಗಳಿಂದ ಕೊರೊನಾ ನಿಯಮ ಉಲ್ಲಂಘನೆ: ದಂಡ ವಿವರ ಕೇಳಿದ ಕೋರ್ಟ್
ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾವು ಏಪ್ರಿಲ್ 1 ರಂದು ಬಿಡುಗಡೆ ಆಗಲಿದ್ದು, ರಾಜ್ಯದ ಹಲವು ಜಿಲ್ಲೆಗಳಿಗೆ ಪುನೀತ್ ಅವರು ಖುದ್ದಾಗಿ ತೆರಳಿ ಪ್ರಚಾರ ಮಾಡಿದ್ದಾರೆ.
ಬೆಳಗಾವಿ, ಕಲಬುರ್ಗಿ, ತುಮಕೂರು, ಮೈಸೂರು, ಮಂಡ್ಯ ಇನ್ನೂ ಅನೇಕ ಜಿಲ್ಲಾಕೇಂದ್ರಗಳಿಗೆ ತೆರಳಿದ್ದ ಪುನೀತ್ ರಾಜ್ಕುಮಾರ್ ಹಾಗೂ ಸಿನಿಮಾ ತಂಡ 'ಯುವರತ್ನ' ಸಿನಿಮಾ ಪ್ರಚಾರ ಮಾಡಿದೆ. ಪುನೀತ್ ಹೋದಲ್ಲೆಲ್ಲಾ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆ ಆಗಿದ್ದಾರೆ. 'ಯುವರತ್ನ' ಮಾತ್ರವೇ ಅಲ್ಲದೆ ಅದಕ್ಕೆ ಮುನ್ನಾ ಬಿಡುಗಡೆ ಆದ ಸಿನಿಮಾಗಳಿಗೂ ಇದೇ ಮಾದರಿಯಲ್ಲಿ ಪ್ರಚಾರ ಮಾಡಲಾಗಿದ್ದು, ಪ್ರಚಾರ ಸಮಯ ಭಾರಿ ಸಂಖ್ಯೆಯ ಜನ ಜಮಾವಣೆ ಆಗಿ ಕೊರೊನಾ ನಿಯಮ ಉಲ್ಲಂಘನೆ ಆಗಿದೆ. ಈ ಬಗ್ಗೆ ಈಗಾಗಲೇ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಣ್ಯರಿಂದ ಕೊರೊನಾ ನಿಯಮ ಉಲ್ಲಂಘನೆ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಯಚೂರು ಬಿಜೆಪಿ ಸಮಾವೇಶದಲ್ಲಿ ಹಾಗೂ 'ಯುವರತ್ನ' ಸಿನಿಮಾದ ಪ್ರಚಾರದ ವೇಳೆ ಕೊರೊನಾ ನಿಯಮ ಉಲ್ಲಂಘನೆ ಆಗಿದ್ದು ಈ ಉಲ್ಲಂಘನೆಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಏಪ್ರಿಲ್ 8 ರ ಒಳಗಾಗಿ ವಿವರ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಈಗ 'ಯುವರತ್ನ' ಇದಕ್ಕೆ ಮುನ್ನಾ 'ರಾಬರ್ಟ್' ಅದಕ್ಕೂ ಮುನ್ನಾ 'ಪೊಗರು' ಸಿನಿಮಾಗಳ ಪ್ರಚಾರ ಕಾರ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆ ಆಗಿದ್ದರು. ಆಗೆಲ್ಲಾ ಕೊರೊನಾ ನಿಯಮದ ಸ್ಪಷ್ಟ ಉಲ್ಲಂಘನೆ ಆಗಿತ್ತು.
Recommended Video
ಸಿನಿಮಾ ಪ್ರಚಾರ ಸಮಾರಂಭಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆ ಬಗ್ಗೆ ನಿನ್ನೆ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, 'ಚಿತ್ರ ತಾರೆಯರಿಗೆ ನಾನು ಮನವಿ ಮಾಡುತ್ತೇನೆ. ಸಾವಿರಾರು ಜನರು ಸೇರಿ ಸಿನಿಮಾಗಳನ್ನು ಪ್ರಮೋಟ್ ಮಾಡುತ್ತಿರುವುದು ನನ್ನ ಗಮನಕ್ಕೆ ಬರುತ್ತಿದೆ. ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣದಲ್ಲಿ ತಮ್ಮ ಪಾತ್ರ ಕೂಡ ಸರ್ಕಾರಕ್ಕೆ ಮುಖ್ಯ. ತಾವು ಮಾಸ್ಕ್ ಧರಿಸಿ, ಅಭಿಮಾನಿಗಳಿಗೂ ಹೇಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದು ಎಲ್ಲಾ ಚಿತ್ರ ತಾರೆಯರಿಗೂ ನನ್ನ ಕಳಕಳಿಯ ಮನವಿ' ಎಂದು ಹೇಳಿದ್ದಾರೆ.


Click it and Unblock the Notifications











