ದಯವಿಟ್ಟು ಗಂಧದಗುಡಿ ನೋಡಿ, ಅಶ್ವಿನಿ ಅತ್ತಿಗೆಗೆ ಆಲ್ ದ ಬೆಸ್ಟ್ ಎಂದ ಕ್ರಿಕೆಟಿಗ ಅಮಿತ್ ಮಿಶ್ರಾ
ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರ ನಾಳೆ ( ಅಕ್ಟೋಬರ್ 28 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿದೆ. ಇನ್ನು ಇಂದು ಸಂಜೆಯಿಂದಲೇ ಗಂಧದಗುಡಿ ಚಿತ್ರದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರವಾಗಿರುವ ಕಾರಣ ಗಂಧದಗುಡಿ ಚಿತ್ರ ವೀಕ್ಷಿಸಲು ಕನ್ನಡ ಸಿನಿ ರಸಿಕರು ಹಾಗೂ ಅಪ್ಪು ಅಭಿಮಾನಿಗಳು ಕಾತರರಾಗಿದ್ದಾರೆ. ನೆಚ್ಚಿನ ನಟನ ಹೊಸ ಚಿತ್ರ ಮತ್ತೆ ಬಿಡುಗಡೆಯಾಗುವುದಿಲ್ಲ ಎಂಬ ನೋವಿನಲ್ಲಿಯೇ ಟಿಕೆಟ್ ಖರೀದಿಸಿರುವ ಅಪ್ಪು ಅಭಿಮಾನಿಗಳು ಕೊನೆಯ ಬಾರಿಗೆ ಅಪ್ಪು ಅವರನ್ನು ಸಂಭ್ರಮಿಸಲು ಅಬ್ಬರದ ತಯಾರಿಯನ್ನು ಸಹ ಮಾಡಿಕೊಂಡಿದ್ದಾರೆ.
ಇನ್ನು ಅಪ್ಪು ಸಿನಿಮಾ ಕಲಾವಿದನಾಗಿದ್ದರೂ ಸಹ ಇತರೆ ಕ್ಷೇತ್ರಗಳಲ್ಲಿ ಹಲವಾರು ಸ್ನೇಹಿತರನ್ನು ಹೊಂದಿದ್ದರು. ಅಪ್ಪು ನಿಧನ ಹೊಂದಿದ ಸಂದರ್ಭದಲ್ಲಿ ಚಿತ್ರರಂಗ, ರಾಜಕೀಯ, ಕ್ರೀಡೆ, ವ್ಯವಹಾರ ಸೇರಿದಂತೆ ಹಲವಾರು ಕ್ಷೇತ್ರಗಳ ಅನೇಕ ಸಾಧಕರು ಅಪ್ಪು ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಕಂಬನಿ ಮಿಡಿದಿದ್ದರು. ಇನ್ನು ಗಂಧದ ಗುಡಿ ಚಿತ್ರದ ಬಗ್ಗೆ ಟ್ರೈಲರ್ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿ ಹೊಗಳಿದ್ದರು. ಇದೀಗ ಈ ಸಾಲಿಗೆ ಕ್ರಿಕೆಟಿಗರಾದ ಅಮಿತ್ ಮಿಶ್ರಾ ಹಾಗೂ ವಿವಿಎಸ್ ಲಕ್ಷ್ಮಣ್ ಸಹ ಸೇರಿಕೊಂಡಿದ್ದಾರೆ.

ಅಪ್ಪು ಅಣ್ಣ ಎಲ್ಲರ ಮನದಲ್ಲಿದ್ದಾರೆ, ಅತ್ತಿಗೆಗೆ ಶುಭವಾಗಲಿ
ತಾವು ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಜತೆಗಿರುವ ಫೋಟೋವೊಂದನ್ನು ಟ್ವೀಟ್ ಮಾಡಿರುವ ಅಮಿತ್ ಮಿಶ್ರಾ 'ಅಪ್ಪು ಅಣ್ಣಾ ಅವರ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ. ನನ್ನಣ್ಣ, ನನ್ನ ಸ್ನೇಹಿತ ಹಾಗೂ ಯಾವಾಗಲೂ ಬೆಂಬಲ ನೀಡುತ್ತಿದ್ದಂತಹ ವ್ಯಕ್ತಿ. ಗಂಧದಗುಡಿ ಬಿಡುಗಡೆಯಾಗುತ್ತಿದ್ದು ದಯವಿಟ್ಟು ಎಲ್ಲರೂ ಹತ್ತಿರದ ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನು ವೀಕ್ಷಿಸಿ. ಅಪ್ಪು ಅವರ ಪರಂಪರೆ ಮುಂದುವರಿಯಬೇಕು. ಅಶ್ವಿನಿ ಅತ್ತಿಗೆಗೆ ಶುಭವಾಗಲಿ' ಎಂದು ಬರೆದುಕೊಂಡಿದ್ದಾರೆ.

ಇದು ಅಪ್ಪುವನ್ನು ಅಪ್ಪಿಕೊಳ್ಳುವ ಸಮಯ ಎಂದ ಲಕ್ಷ್ಮಣ್
ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಕೂಡ ಗಂಧದಗುಡಿ ಚಿತ್ರದ ಕುರಿತು ಟ್ವೀಟ್ ಮಾಡಿದ್ದು ನಮಗೆ ಲೆಕ್ಕವಿಲ್ಲದಷ್ಟು ಪ್ರೀತಿ ನೀಡಿದ ಪುನೀತ್ ರಾಜ್ ಕುಮಾರ್ ಅವರನ್ನು ಅಪ್ಪಿಕೊಳ್ಳಬೇಕಾದ ಸಮಯವಿದು ಎಂದು ಬರೆದುಕೊಂಡಿದ್ದಾರೆ. ಗಂಧದ ಗುಡಿ ಕರ್ನಾಟಕದ ವನ್ಯಸಂಪತ್ತಿಗೆ ಹಾಗೂ ಸಂಸ್ಕೃತಿಗೆ ಕೊಡುವ ಗೌರವವಾಗಿದ್ದು ಚಿತ್ರ ಇದೇ 28ಕ್ಕೆ ಬಿಡುಗಡೆಯಾಗುತ್ತಿದೆ, ಚಿತ್ರತಂಡಕ್ಕೆ ಶುಭವಾಗಲಿ ಎಂದು ವಿವಿಎಸ್ ಲಕ್ಷ್ಮಣ್ ಹಾರೈಸಿದ್ದಾರೆ.

ಪ್ರೀಮಿಯರ್ ಶೋನಲ್ಲಿ ದಾಖಲೆ ಬರೆದ ಗಂಧದ ಗುಡಿ
ಗಂಧದಗುಡಿ ಬಿಡುಗಡೆಗೂ ಹಿಂದಿನ ದಿನವೇ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಪ್ರೀಮಿಯರ್ ಪ್ರದರ್ಶನಗಳನ್ನು ಕಾಣುತ್ತಿದೆ. ರಾಜ್ಯಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಪ್ರದರ್ಶನವನ್ನು ಆಯೋಜಿಸಲಾಗಿದ್ದು ಬೆಂಗಳೂರು, ಮೈಸೂರು, ಶಿವಮೊಗ್ಗ ನಗರಗಳ ಎಲ್ಲಾ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಈ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಪೆಯ್ಡ್ ಪ್ರೀಮಿಯರ್ ಶೋ ಕಂಡ ಹಾಗೂ ಅತಿಹೆಚ್ಚು ಪೇಯ್ಡ್ ಪ್ರೀಮಿಯರ್ ಶೋ ಸೋಲ್ಡ್ ಔಟ್ ಆದ ಚಿತ್ರ ಎಂಬ ದಾಖಲೆಯನ್ನು ಗಂಧದಗುಡಿ ಬರೆದಿದೆ.


Click it and Unblock the Notifications











