ರಕ್ತದಾನ ಮಾಡಿ ಒಂದೊಳ್ಳೆ ಸಂದೇಶ ಕೊಟ್ಟ ನಟ ಡಾಲಿ ಧನಂಜಯ್
ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ನಟ ಡಾಲಿ ಧನಂಜಯ್ ಕೇವಲ ಚಿತ್ರಗಳಲ್ಲಿ ಮಾತ್ರವಲ್ಲದೇ ಒಳ್ಳೆಯ ಕೆಲಸಗಳನ್ನು ಮಾಡುವುದರಲ್ಲಿಯೂ ಎತ್ತಿದ ಕೈ. ಈಗಾಗಲೇ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಟ ಧನಂಜಯ್ ಇಂದು ( ಜನವರಿ 2 ) ರಕ್ತದಾನ ಮಾಡುವುದರ ಜತೆಗೆ ಒಂದೊಳ್ಳೆ ಸಂದೇಶವನ್ನು ರವಾನಿಸಿದ್ದಾರೆ.
"ರಕ್ತದಾನ ಮಾಡಿ. ಜೀವಗಳನ್ನು ಉಳಿಸಿ" ಎಂದು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಗಳಲ್ಲಿ ಬರೆದುಕೊಂಡಿರುವ ಧನಂಜಯ್ ತಾವು ರಕ್ತದಾನ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಹಿಂಬಾಲಕರಿಗೆ ರಕ್ತದಾನ ಮಾಡಿ ಜೀವಗಳನ್ನು ಉಳಿಸಿ ಎಂದು ಧನಂಜಯ್ ಕರೆ ಕೊಟ್ಟಿದ್ದಾರೆ. ಧನಂಜಯ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲರೂ ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸಂದೇಶ ಎಂದು ಕಾಮೆಂಟ್ ಮಾಡಿದ್ದಾರೆ ಹಾಗೂ ಇನ್ನೂ ಕೆಲವರು ತಾವೂ ಸಹ ಆಗಾಗ ರಕ್ತದಾನ ಮಾಡುತ್ತೇವೆ ಎಂದು ಫೋಟೊಗಳನ್ನು ಕಾಮೆಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಕಳೆದ ವರ್ಷ ಧನಂಜಯ್ ನಟನೆಯ ಆರು ಚಿತ್ರಗಳು ಬಿಡುಗಡೆಯಾದರೂ ಸಹ ಹೇಳಿಕೊಳ್ಳುವಂತ ಯಶಸ್ಸನ್ನು ಯಾವ ಚಿತ್ರವೂ ತಂದುಕೊಡಲಿಲ್ಲ. ವರ್ಷದ ಅಂತ್ಯದಲ್ಲಿ ಬಿಡುಗಡೆಯಾದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿದ್ದರೂ ಸಹ ಬಾಕ್ಸ್ ಆಫೀಸ್ ವಿಚಾರದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.

ಹೀಗೆ ಕಳೆದ ವರ್ಷ ದೊಡ್ಡ ಯಶಸ್ಸು ಸಿಗದೇ ಹಿನ್ನಡೆ ಅನುಭವಿಸಿರುವ ಡಾಲಿ ಧನಂಜಯ್ ನಟನೆಯ ಹೊಯ್ಸಳ ಚಿತ್ರ ಈ ವರ್ಷ ಬಿಡುಗಡೆಯಾಗಲಿದ್ದು, ಈ ಚಿತ್ರದ ಮೇಲೆ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಮಾರ್ಚ್ 30ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಕೊಳ್ಳುತ್ತಿದ್ದು, ಕೆಆರ್ಜಿ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ.
ಇನ್ನು ಉತ್ತರಕಾಂಡ ಎಂಬ ಚಿತ್ರ ಸಹ ಘೋಷಣೆಯಾಗಿದ್ದು, ಈ ಚಿತ್ರದಲ್ಲಿ ಧನಂಜಯ್ ನಾಯಕನಾದರೆ, ರಮ್ಯಾ ನಾಯಕಿಯಾಗಿದ್ದಾರೆ ಹಾಗೂ ಈ ಹಿಂದೆ 'ರತ್ನನ್ ಪ್ರಪಂಚ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಷ್ಟೇ ಅಲ್ಲದೇ ಇದೇ ತಿಂಗಳು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಳ್ಳಲಿರುವ 'ಆರ್ಕೆಸ್ಟ್ರಾ ಮೈಸೂರು' ಎಂಬ ಚಿತ್ರದ ಎಲ್ಲಾ ಹಾಡುಗಳನ್ನು ಡಾಲಿ ಬರೆದಿದ್ದು, ನಾಗಭೂಷಣ್ ಹಾಗೂ ಅಮೃತಾ ಪ್ರೇಮ್ ನಟನೆಯ 'ಟಗರು ಪಲ್ಯ' ಚಿತ್ರಕ್ಕೆ ಧನಂಜಯ್ ನಿರ್ಮಾಪಕನಾಗಿ ಬಂಡವಾಳ ಹೂಡಿದ್ದಾರೆ.


Click it and Unblock the Notifications











