ಕೊಚ್ಚಿಕೊಳ್ಳುವ ಪರಭಾಷಿಗರಿಗೆ ಚಾಲೆಂಜಿಂಗ್ ಸ್ಟಾರ್ ದಿಟ್ಟ ಉತ್ತರ
ಪರಭಾಷೆಯ ಸಿನಿಮಾಗಳನ್ನ ನಮ್ಮ ನೆಲದಲ್ಲಿ ಹೊಗಳುವುದು, ಪ್ರಚಾರ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲು, ಕರ್ನಾಟಕದಲ್ಲಿ 'ಕಬಾಲಿ', 'ಬಾಹುಬಲಿ' ಅಂತಹ ಚಿತ್ರಗಳಿಗೆ ಸಿಕ್ಕ ಸ್ವಾಗತ ಯಾರೂ ಮರೆಯುವುದಿಲ್ಲ. ಇಂತಹ ಚಿತ್ರಗಳು ಕನ್ನಡದಲ್ಲೇಕೆ ನಿರ್ಮಾಣವಾಗುವುದಿಲ್ಲ ಎಂದು ಬೆರಳು ಮಾಡಿ ತೋರಿಸುವವರು ತುಂಬ ಜನ ಇದ್ದಾರೆ. ಇಂತವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಿಟ್ಟ ಉತ್ತರ ಕೊಟ್ಟಿದ್ದಾರೆ.
'ಕುರುಕ್ಷೇತ್ರ' ಎಂಬ ಪೌರಾಣಿಕ ಚಿತ್ರದಲ್ಲಿ ದುರ್ಯೋಧನ ಪಾತ್ರವನ್ನ ನಿರ್ವಹಿಸುತ್ತಿರುವ ದರ್ಶನ್, ತಮ್ಮ ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಮ್ಮಲ್ಲೂ ಅಂತಹ ಚಿತ್ರಗಳನ್ನ ಮಾಡುವವರು ಇದ್ದಾರೆ ಎಂದು ಎದೆತಟ್ಟಿ ಹೇಳುತ್ತಿದ್ದಾರೆ.

ಇತ್ತೀಚೆಗಷ್ಟೇ ಹೈದ್ರಾಬಾದ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದರ್ಶನ್, ''ನಾವೇಕೆ ಬೇರೆಯವರ ಮಟ್ಟವನ್ನ ಅಳೆಯೋಣ. ನಮಗೆ ನಮ್ಮ ಇಂಡಸ್ಟ್ರಿನೇ ದೊಡ್ಡದು. ಅವರು ಐದು ವರ್ಷ ಮಾಡಿದ್ರು, ಪ್ರಿಪರೇಷನ್ ಹೇಗಿತ್ತು ಅಂತಾರೆ. ನಾವು ಅದನ್ನ ಎರಡು ತಿಂಗಳಲ್ಲಿ ಮುಗಿಸಿದ್ದೀವಿ ಅಲ್ವಾ. 180/200 ಸೈಟ್ ನಲ್ಲಿ ಮಾಡಿರುವ ಚಿತ್ರ ಅದು. ಅವರಿಗೆ ಅವರ ಇಂಡಸ್ಟ್ರಿ ಹೇಗೋ, ನಮಗೆ ನಮ್ಮ ಇಂಡಸ್ಟ್ರಿಗೆ ಹಾಗೆ'' ಎಂದು ಖಡಕ್ ಆಗಿ ಮಾತನಾಡಿದ್ದಾರೆ.
ಕುರುಕ್ಷೇತ್ರದ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ದರ್ಶನ್ ಅವರ ಸಾಂಗ್ ಶೂಟಿಂಗ್ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಮಾರ್ಚ್ ಅಂತ್ಯಕ್ಕೆ ಕುರುಕ್ಷೇತ್ರವನ್ನ ತೆರೆಮೇಲೆ ನೋಡಬಹುದು. ಇನ್ನುಳಿದಂತೆ ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿದ್ದು, ಮುನಿರತ್ನ ಅವರ ಬಂಡವಾಳ ಹಾಕಿದ್ದಾರೆ. ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.


Click it and Unblock the Notifications











