ಹೊಸ ನಿರ್ದೇಶಕರ ಕನಸು ಭಗ್ನಗೊಳಿಸಿದ ನಟ ದರ್ಶನ್ ನಿರ್ಧಾರ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಚೊಚ್ಚಲ ಸಿನಿಮಾ ಮಾಡಿದ್ರೆ ಸಾಕು ಆ ಡೈರೆಕ್ಟರ್ಗೆ ಅದೃಷ್ಟ ಖುಲಾಯಿಸಿಬಿಡುತ್ತೆ ಎಂಬ ನಂಬಿಕೆ ಇಂಡಸ್ಟ್ರಿಯಲ್ಲಿದೆ. ಡಿ ಬಾಸ್ ಜೊತೆ ಒಂದು ಸಿನಿಮಾ ಮಾಡಬೇಕು ಎಂದು ಅದೇಷ್ಟೊ ನಿರ್ದೇಶಕರು ಕಥೆ ಸಿದ್ದಪಡಿಸಿ ಕಾಲ್ಶೀಟ್ಗಾಗಿ ಕಾಯುತ್ತಿದ್ದಾರೆ.
ಆದರೆ, ದರ್ಶನ್ ಅವರ ನಿರ್ಧಾರವೊಂದು ಹೊಸ ನಿರ್ದೇಶಕರ ಕನಸು ಭಗ್ನಗೊಳಿಸಿದೆ. ಡಿ ಬಾಸ್ ಜೊತೆ ಚೊಚ್ಚಲ ಸಿನಿಮಾ ಕನಸು ಕಾಣುತ್ತಿದ್ದವರಿಗೆ ನಿರಾಸೆ ಎದುರಾಗಿದೆ. ಏಕಂದ್ರೆ, ಹೊಸ ನಿರ್ದೇಶಕರ ವಿಚಾರದಲ್ಲಿ ದಾಸ ಬಹಳ ಕಟ್ಟುನಿಟ್ಟು ಹಾಗೂ ಖಡಕ್ ಆಗಿ ನಿರ್ಣಯ ಕೈಗೊಂಡಿದ್ದಾರೆ. ಹೊಸ ಡೈರೆಕ್ಟರ್ ಜೊತೆ ನಾನು ಕೆಲಸ ಮಾಡಲ್ಲ ಎಂದು ಬಹಿರಂಗವಾಗಿ ಹೇಳುವಷ್ಟು ಗಟ್ಟಿ ನಿರ್ಧಾರ ಘೋಷಿಸಿದ್ದಾರೆ. ಅಷ್ಟಕ್ಕೂ, ದರ್ಶನ್ ಅವರ ಈ ನಿರ್ಧಾರ ಹಿಂದಿರುವ ಕಾರಣವೇನು? ಮುಂದೆ ಓದಿ....

ಕೆಲಸ ನೋಡದೇ ನಾನು ಸಿನಿಮಾ ಮಾಡಲ್ಲ
''ಹೊಸ ನಿರ್ದೇಶಕನ ಜೊತೆ ಸಿನಿಮಾ ಮಾಡಬೇಕು ಅಂದ್ರೆ ನಾನು ಅವರ ಕೆಲಸ ನೋಡಿರಬೇಕು. ಒಂದು ಸಿನಿಮಾ ಆದರೂ ಮಾಡಿರಬೇಕು. ಅಥವಾ ನನ್ನದೇ ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ಅವರ ಕೆಲಸ ನನಗೆ ಸಮಾಧಾನ ತರಬೇಕು. ಹಾಗಿದ್ದಲ್ಲಿ ಮಾತ್ರ ನಾನು ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುತ್ತೇನೆ. ಇಲ್ಲಂದ್ರೆ ಹೊಸ ಡೈರೆಕ್ಟರ್ಗಳಿಗೆ ಕಾಲ್ಶೀಟ್ ಕೊಡಲ್ಲ'' ಎಂದು ನಟ ದರ್ಶನ್ ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಹೇಳಿದ್ದಾರೆ.

ಖಾಲಿ ಕೈಯಲ್ಲಿ ಬಂದ್ರೆ ನಾನು ಮಾಡಲ್ಲ
''ಹೊಸದಾಗಿ ಕಥೆ ಮಾಡಿದ್ದೀನಿ, ಅಲ್ಲಿ ಕೆಲಸ ಮಾಡಿದ್ದೀನಿ, ಇಲ್ಲಿ ಕೆಲಸ ಮಾಡಿದ್ದೀನಿ ಅಂತ ಹೇಳ್ಕೊಂಡು ಬಂದರೂ ನಾನು ಒಪ್ಪಲ್ಲ. ಅವರ ಕೆಲಸ ನಾನು ನೋಡಿರಬೇಕು. ನಮ್ಮ ತಂಡದಲ್ಲಿ ಅಥವಾ ನಾನು ಕೆಲಸ ಮಾಡಿರುವ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿರಬೇಕು'' ಎಂದು ಡಿ ಬಾಸ್ ತಿಳಿಸಿದ್ದಾರೆ.

ರಾಜಮೌಳಿ ಹತ್ರ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬ ಬಂದ
ಈ ಹಿಂದೆ ರಾಜಮೌಳಿ ಹತ್ರ ಕೆಲಸ ಮಾಡಿದ್ದೀನಿ ಎಂದು ಹೇಳಿಕೊಂಡು ಒಬ್ಬರು ಬಂದಿದ್ದರು. ಯಾವುದೋ ಒಂದು ಕಥೆ ಹೇಳಿದೆ. ಏನು ಕೆಲಸ ಮಾಡಿದ್ದೀಯಾ ಅಂದಿದ್ದಕ್ಕೆ ರಾಜಮೌಳಿ ಹತ್ರ ಕೆಲಸ ಮಾಡಿದ್ದೀನಿ ಎಂದ. ಸರಿ, ರಾಜಮೌಳಿಯಿಂದ ನನಗೊಂದು ಫೋನ್ ಮಾಡಿಸು, ನನ್ನ ಹತ್ರನೇ ಕೆಲಸ ಮಾಡ್ತಿದ್ದ ಅಂತ ಹೇಳಿಸು ಎಂದು ಹೇಳಿ ಕಳುಹಿಸಿದೆ ಎನ್ನುವ ವಿಚಾರವನ್ನು ದಾಸ ಹಂಚಿಕೊಂಡಿದ್ದಾರೆ.

ಸಮ್ಮನೆ ಕಥೆನೂ ಕೇಳಲ್ಲ
ನನಗೆ ನಿರ್ಮಾಪಕರಿಲ್ಲ, ಒಂದು ಕಥೆ ಇದೆ ಅಂತ ಹೊಸಬರು ಹೇಳಿದ್ರು ನಾನು ಕೇಳಲ್ಲ. ದಿನ ಹತ್ತಾರು ಕಥೆ ಕೇಳ್ತೇವೆ, ನಮ್ಮ ಬಾಯಲ್ಲಿ ಅದೇನೂ ಬಂದು, ಅದೆಲ್ಲೋ ಹೋಗಿ, ಆಮೇಲೆ ಅದು ನನ್ನ ಕಥೆ ಅಂತ ಬಂದು ಕಿತ್ತಾಡುವುದನ್ನು ನೋಡಿದ್ದೇನೆ. ಹಾಗಾಗಿ, ನಾನು ಯಾರ ಬಳಿಯೂ ಸುಮ್ಮನೆ ಸಹ ಕಥೆ ಕೇಳಲ್ಲ'' ಎಂದು ದರ್ಶನ್ ಹೇಳಿಕೊಂಡಿದ್ದಾರೆ.


Click it and Unblock the Notifications











