ಹೊಸಪೇಟೆಯಲ್ಲಿ 'ಕ್ರಾಂತಿ' ಬುಕಿಂಗ್ಸ್ ಸ್ಥಗಿತ; ಚಿತ್ರ ಬಿಡುಗಡೆಯಾಗುತ್ತಾ, ಇಲ್ವಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್ನ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ನಾಳೆ ( ಜನವರಿ 26 ) ಬಿಡುಗಡೆಯಾಗಲಿದ್ದು, ಸಿನಿಮಾ ವೀಕ್ಷಿಸಲು ದರ್ಶನ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾತರರಾಗಿದ್ದಾರೆ. ಇನ್ನು 2021ರಲ್ಲಿ ತೆರೆಕಂಡಿದ್ದ ರಾಬರ್ಟ್ ಬಳಿಕ ಬರೋಬ್ಬರಿ 22 ತಿಂಗಳ ಅಂತರದಲ್ಲಿ ಬಿಡುಗಡೆಗೊಳ್ಳುತ್ತಿರುವ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಇದಾಗಿದ್ದು ಕ್ರೇಜ್ ದುಪ್ಪಟ್ಟಾಗಿದೆ.
ಇನ್ನು ಈ ಕ್ರಾಂತಿ ಚಿತ್ರ ದರ್ಶನ್ ಅಭಿಮಾನಿಗಳ ಪಾಲಿಗೆ ಹಾಗೂ ಕನ್ನಡ ಸಿನಿಮಾ ಇತಿಹಾಸದ ಪಾಲಿಗೆ ವಿಶೇಷ ಸಿನಿಮಾ ಎಂದೇ ಹೇಳಬಹುದು. ಸುದ್ದಿ ವಾಹಿನಿಗಳು ಆರಂಭವಾದಾಗಿನಿಂದ ಇಲ್ಲಿಯವರೆಗೂ ಸುದ್ದಿ ವಾಹಿನಿಗಳ ಸಹಾಯವಿಲ್ಲದೇ ಬಿಡುಗಡೆಯಾಗುತ್ತಿರುವ ಚಿತ್ರ ಎಂಬ ವಿಶೇಷತೆಗೆ ಕ್ರಾಂತಿ ಪಾತ್ರವಾಗಿದೆ. ಹೀಗೆ ದೊಡ್ಡ ಮಟ್ಟದ ವಿರೋಧದ ನಡುವೆಯೂ ಕ್ರಾಂತಿ ಚಿತ್ರ ಬೃಹತ್ ಪ್ರಚಾರವನ್ನು ಪಡೆದುಕೊಳ್ಳುವಂತೆ ಮಾಡಿದ್ದಾರೆ ದರ್ಶನ್ ಅಭಿಮಾನಿಗಳು.
ಹೀಗೆ ಮೊದಲಿನಿಂದಲೂ ಅಡೆತಡೆಗಳನ್ನು ಎದುರಿಸುತ್ತಾ ಬಂದಿರುವ ಕ್ರಾಂತಿ ಚಿತ್ರತಂಡಕ್ಕೆ ಬಿಡುಗಡೆ ಸಮೀಪದಲ್ಲಿಯೂ ಪಿತೂರಿ ನಡೆದಿವೆ ಎಂಬುದನ್ನು ಸ್ವತಃ ಕ್ರಾಂತಿ ಚಿತ್ರತಂಡದ ಸದಸ್ಯರೇ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಕ್ರಾಂತಿ ಚಿತ್ರತಂಡ ಹಿನ್ನಡೆ ಅನುಭವಿಸಿದ ಅಂಶಗಳಲ್ಲಿ ಹೊಸಪೇಟೆ ಘಟನೆಯೂ ಸಹ ಒಂದು. ಹೌದು, ಹೊಸಪೇಟೆಯಲ್ಲಿ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ನಡೆದಾಗ ನಡೆದ ಫ್ಯಾನ್ ವಾರ್ ಹಾಗೂ ಘಟನೆಗಳ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಈ ಫ್ಯಾನ್ ವಾರ್ ವೇಳೆ ದರ್ಶನ್ ಅಭಿಮಾನಿಗಳು ಇದೇ ಹೊಸಪೇಟೆಯಲ್ಲಿ ಕ್ರಾಂತಿ ಎರಡ್ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತೆ ಎಂದು ಸವಾಲು ಹಾಕಿದ್ದರು. ಆದರೆ ಈಗ ಚಿತ್ರ ಹೊಸಪೇಟೆಯಲ್ಲಿ ಬಿಡುಗಡೆಯಾಗುವುದೂ ಸಹ ಅನುಮಾನವಾಗಿದೆ.

ಹೊಸಪೇಟೆಯ ಬುಕಿಂಗ್ ಕ್ಯಾನ್ಸಲ್
ಇನ್ನು ಕ್ರಾಂತಿ ಚಿತ್ರವನ್ನು ಹೊಸಪೇಟೆ ನಗರದ ಮೀರ್ ಆಲಂ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಎಲ್ಲಾ ಊರುಗಳಂತೆ ಹೊಸಪೇಟೆಯಲ್ಲೂ ಚಿತ್ರದ ಬುಕಿಂಗ್ ಅನ್ನು ಆರಂಭಿಸಲಾಗಿತ್ತು. ಆದರೆ ಈಗ ಚಿತ್ರ ಇನ್ನೇನು ನಾಳೆ ತೆರೆ ಕಾಣಲಿದೆ ಎನ್ನುವಾಗ ಬುಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಬುಕ್ ಮೈ ಶೋ ತಿಳಿಸಿದೆ. ಸಂಪರ್ಕ ಸಮಸ್ಯೆಯಿಂದ ಟಿಕೆಟ್ ಬುಕಿಂಗ್ ಸಾಧ್ಯವಿಲ್ಲ, ಬೇರೆ ಚಿತ್ರಮಂದಿರಗಳಲ್ಲಿ ಟಿಕೆಟ್ ಖರೀದಿಸಿ ಎಂಬ ಸಂದೇಶವನ್ನು ಬುಕ್ ಮೈ ಶೋ ತಿಳಿಸಿದ್ದು, ಇದ್ದ ಒಂದು ಚಿತ್ರಮಂದಿರದ ಬುಕಿಂಗ್ ಸಹ ಸ್ಥಗಿತಗೊಂಡಿರುವುದು ಹೊಸಪೇಟೆ ದರ್ಶನ್ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಸದ್ಯ ಸ್ಥಗಿತಗೊಂಡಿರುವ ಬುಕಿಂಗ್ ಶೀಘ್ರದಲ್ಲಿಯೇ ಆರಂಭಗೊಳ್ಳುತ್ತಾ ಅಥವಾ ಚಿತ್ರ ಬಿಡುಗಡೆ ಆಗುವುದೇ ಇಲ್ವಾ ಎಂಬ ಅನುಮಾನ ಈಗ ಸಿನಿ ರಸಿಕರಲ್ಲಿ ಮೂಡಿದೆ. ಸದ್ಯ ಯಾವುದೋ ಸಂಪರ್ಕ ಸಮಸ್ಯೆ ತಲೆದೋರಿದಂತಿದ್ದು, ಬುಕಿಂಗ್ ಪುನಃ ಆರಂಭಗೊಳ್ಳುವ ಸಾಧ್ಯತೆ ಇದೆ.

ಬುಕಿಂಗ್ ನಿರೀಕ್ಷಿಸಿದಷ್ಟು ಇರಲಿಲ್ಲ
ಇನ್ನು ಬಿಡುಗಡೆಯ ದಿನ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಐದು ಪ್ರದರ್ಶನಗಳ ಬುಕಿಂಗ್ ಅನ್ನು ಹೊಸಪೇಟೆಯ ಮೀರ್ ಆಲಂ ಚಿತ್ರಮಂದಿರದಲ್ಲಿ ಆರಂಭಿಸಲಾಗಿತ್ತು. ಇಂದು ( ಜನವರಿ 25 ) ಮಧ್ಯಾಹ್ನದವರೆಗೂ ಈ ಐದು ಪ್ರದರ್ಶನಗಳ ಪೈಕಿ ಯಾವೊಂದು ಪ್ರದರ್ಶನವೂ ಸಹ ಸೋಲ್ಡ್ ಔಟ್ ಆಗಿರಲಿಲ್ಲ. ಒಟ್ಟಾರೆಯಾಗಿ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಬುಕಿಂಗ್ ನೀರಸವಾಗಿತ್ತು ಎಂದೇ ಹೇಳಬಹುದು.

ಬಳ್ಳಾರಿ ಬುಕಿಂಗ್ ಸಮಾಧಾನಕರ
ಇನ್ನು ಹೊಸಪೇಟೆ ರೀತಿಯೇ ಹೆಚ್ಚು ತೆಲುಗು ಸಿನಿಮಾ ರಸಿಕರನ್ನು ಹೊಂದಿರುವ ಬಳ್ಳಾರಿಯಲ್ಲೂ ಸಹ ಕ್ರಾಂತಿ ಚಿತ್ರದ ಬುಕಿಂಗ್ ಸಾಮಾನ್ಯವಾಗಿದೆ. ಇಲ್ಲಿನ ಗಂಗಾ ಚಿತ್ರಮಂದಿರದಲ್ಲಿ ಮಾತ್ರ ಕ್ರಾಂತಿ ಚಿತ್ರ ಬಿಡುಗಡೆಯಾಗುತ್ತಿದ್ದು, ಮೊದಲ ದಿನ ನಾಲ್ಕು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಈ ನಾಲ್ಕು ಪ್ರದರ್ಶನಗಳ ಬುಕಿಂಗ್ ಆರಂಭಗೊಂಡಿದ್ದು, ಬೆಳಗಿನ ಪ್ರದರ್ಶನ ಸೋಲ್ಡ್ ಔಟ್ ಆಗಿದ್ದರೆ, ಮಧ್ಯಾಹ್ನದ ಪ್ರದರ್ಶನ ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಉಳಿದೆರಡು ಪ್ರದರ್ಶನಗಳ ಬುಕಿಂಗ್ ಅತಿ ಸಾಮಾನ್ಯವಾಗಿದೆ. ಈ ಎರಡು ನಗರಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ನಗರ ಹಾಗೂ ಪಟ್ಟಣಗಳಲ್ಲಿ ಕ್ರಾಂತಿ ಚಿತ್ರದ ಬುಕಿಂಗ್ ಭರ್ಜರಿಯಾಗಿದೆ.


Click it and Unblock the Notifications











