ರಾಜ್ಕುಮಾರ್ ಬಿಟ್ರೆ ಹೆಚ್ಚು ಫ್ಯಾನ್ಸ್ ಇರೋದು ನಿಮಗೆ ಎಂದಾಗ ಗರಂ ಆದ ದರ್ಶನ್!
ಕ್ರಾಂತಿ ಚಿತ್ರ ಮುಂಬರುವ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಕಳೆದ ಮಾರ್ಚ್ ತಿಂಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ ಯಾವ ಚಿತ್ರಗಳೂ ಸಹ ಬಿಡುಗಡೆಯಾಗದ ಕಾರಣ ತಮ್ಮ ನೆಚ್ಚಿನ ನಟನ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸಂಭ್ರಮಿಸಲು ದರ್ಶನ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.
ಇನ್ನು ಕ್ರಾಂತಿ ಚಿತ್ರತಂಡ ಚಿತ್ರತಂಡ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಮೂಲಕ ಚಿತ್ರದ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದ್ದು, ಅತ್ತ ನಟ ದರ್ಶನ್ ಸ್ವತಃ ತಾವೇ ಕ್ಯಾಮೆರಾ ಮುಂದೆ ಬಂದು ಯುಟ್ಯೂಬ್ ಸಂದರ್ಶನಗಳಲ್ಲಿ ಮಾತನಾಡುವ ಮೂಲಕ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿಯೇ ನಡೆಸಿದ್ದಾರೆ. ಇನ್ನು ಈ ಸಂದರ್ಶನಗಳಲ್ಲಿ ಕೇವಲ ಕ್ರಾಂತಿ ಚಿತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಾತ್ರವಲ್ಲದೇ ಇತರೆ ಸಿನಿಮಾಗಳ ಕುರಿತೂ ಕೂಡ ದರ್ಶನ್ ಮುಕ್ತವಾಗಿ ಮಾತನಾಡಿದ್ದು, ಹಲವಾರು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅದರಲ್ಲಿಯೂ ದರ್ಶನ್ ಪ್ರತಿ ಸಂದರ್ಶನದಲ್ಲಿಯೂ ತಮ್ಮ ನೆಚ್ಚಿನ ಅಭಿಮಾನಿಗಳ ಕುರಿತು ವಿಶೇಷವಾಗಿ ಮಾತನಾಡಿದ್ದು, ತಮಗಿರುವ ಫ್ಯಾನ್ ಬೇಸ್ ಬಗ್ಗೆ ಹೆಮ್ಮೆ ಪಟ್ಟಿದ್ದರು. ಇನ್ನು ಸಿನಿಬಜ್ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಕ್ರಾಂತಿ ಸಂದರ್ಶನದಲ್ಲಿ ದರ್ಶನ್ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸಂದರ್ಶಕ ಡಾ. ರಾಜ್ಕುಮಾರ್ ಅವರು ಅತಿದೊಡ್ಡ ಫ್ಯಾನ್ ಬೇಸ್ ಹೊಂದಿದ್ದರು, ಅವರನ್ನು ಬಿಟ್ಟರೆ ಅತಿದೊಡ್ಡ ಫ್ಯಾನ್ ಬೇಸ್ ಹೊಂದಿರುವ ನಟನೆಂದರೆ ನೀವೇ ಎಂದು ಹೇಳಿದಾಗ ದರ್ಶನ್ ಈ ಕೆಳಕಂಡಂತೆ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ಹೇಳುತ್ತಿರುವುದು ತಪ್ಪು
ಹೀಗೆ ಸಂದರ್ಶಕ ರಾಜ್ಕುಮಾರ್ ಬಿಟ್ರೆ ನಿಮಗೆ ಅತಿದೊಡ್ಡ ಫ್ಯಾನ್ ಬೇಸ್ ಇದೆ ಎಂದು ಹೇಳುತ್ತಿದ್ದಂತೆ ಮಧ್ಯದಲ್ಲಿಯೇ ಮಾತು ಆರಂಭಿಸಿದ ದರ್ಶನ್ ಈ ವಿಚಾರ ಬೇಡ ಚೇಂಜ್ ಮಾಡೋಣ ಎಂದರು. ನೀವು ಹೇಳುತ್ತಿರುವುದೇ ತಪ್ಪು, ಎಲ್ಲಾ ನಟರಿಗೂ ಅಭಿಮಾನಿಗಳಿದ್ದಾರೆ, ಅದರಲ್ಲಿ ದೊಡ್ಡದು ಅಥವಾ ಚಿಕ್ಕದು ಎಂದೇನಿಲ್ಲ ಎಂದರು. ಈ ಮೂಲಕ ದರ್ಶನ್ ಅಭಿಮಾನಿಗಳನ್ನು ಹೋಲಿಸಿ ಅಳೆಯಬಾರದು ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ಕಷ್ಟಪಟ್ಟು ಸಂಪಾದಿಸಿದ್ದೇನೆ
ಇನ್ನೂ ಮುಂದುವರಿದು ಮಾತನಾಡಿದ ದರ್ಶನ್ ನನಗಂತೂ ದೊಡ್ಡ ಫ್ಯಾನ್ ಬೇಸ್ ಅಥವಾ ಚಿಕ್ಕ ಫ್ಯಾನ್ ಬೇಸ್ ಎಂದೇನಿಲ್ಲ, ಆದರೆ ನಾನೇನು ಸಂಪಾದಿಸಿದ್ದೇನೋ ಅದನ್ನು ಕಷ್ಟಪಟ್ಟು ಸಂಪಾದಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅಷ್ಟೇ ಅಲ್ಲದೇ ನಾನು ಇಂದಿಗೂ ಸಹ ನನ್ನ ಸೆಲೆಬ್ರಿಟಿಗಳ ಜತೆಯೇ ಇದ್ದೇನೆ, ಯಾರನ್ನು ಬೇಕಾದ್ರೂ ಬಿಡ್ತೇನೆ ಆದರೆ ನನ್ನ ಸೆಲೆಬ್ರಿಟಿಗಳನ್ನು ಮಾತ್ರ ಬಿಡುವುದಿಲ್ಲ ಎಂದು ದರ್ಶನ್ ಹೇಳಿದರು.

ಕತೆ ಆರಿಸುವವರು ಯಾರು?
ಇನ್ನು ತಾವು ನಟಿಸುವ ಚಿತ್ರಗಳ ಕತೆಯನ್ನು ಮೊದಲು ಯಾರು ಕೇಳಿ ಒಪ್ಪಿಗೆ ನೀಡಿದ ನಂತರ ನೀವು ನಟಿಸುತ್ತೀರ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ನಟ ದರ್ಶನ್ ಕತೆಯನ್ನು ಕೇಳಿ ಒಪ್ಪಿಕೊಳ್ಳುವುದು ನಾನು ಮಾತ್ರ, ಬೇರೆ ಯಾರೂ ಸಹ ಇದಕ್ಕೆ ತಲೆ ಹಾಕುವುದಿಲ್ಲ, ನನಗೆ ಕತೆ ಇಷ್ಟ ಆದರೆ ಚಿತ್ರದಲ್ಲಿ ನಟಿಸುವುದಷ್ಟೇ ಎಂದು ಹೇಳಿಕೆ ನೀಡಿದರು. ಹಾಗೂ ನಿರ್ದೇಶಕರಿಗೆ ನಮ್ಮ ಸುತ್ತ ಮುತ್ತ ನಡೆಯೋದನ್ನು ನೋಡ್ತಾ ಇರಿ, ಬೇರೆ ಎಲ್ಲಿಂದಾನೋ ಏನನ್ನೋ ತಂದು ಮಾಡ್ತೀನಿ ಅನ್ನೋದೆಲ್ಲ ಬೇಡ, ನಮ್ಮ ಸುತ್ತಮುತ್ತ ಏನು ಸಮಸ್ಯೆ ಇದೆಯೋ ಅದನ್ನು ತೋರಿಸುವಂತಹ ಕತೆ ತನ್ನಿ ಮಾಡೋಣ ಅಂತ ಹೇಳ್ತಾ ಇರ್ತೀನಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.


Click it and Unblock the Notifications











