''ದರ್ಶನ್ ನನ್ನ ಕಪಾಳಕ್ಕೆ ಹೊಡೆದ್ರು'' - ಸಹ ಕಲಾವಿದ ಶಿವಶಂಕರ್ ಆರೋಪ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ತಾವರೆಕೆರೆ ಬಳಿಯ ಖಾಸಗಿ ಸ್ಟುಡಿಯೋ ಒಂದರಲ್ಲಿ ಕಳೆದ ಎರಡ್ಮೂರು ದಿನಗಳಿಂದ 'ಯಜಮಾನ' ಚಿತ್ರದ ಸಾಂಗ್ ಶೂಟಿಂಗ್ ನಡೆಯುತ್ತಿದೆ.
ಇಂದು ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಹ ಕಲಾವಿದರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದರು ಎಂಬ ಕಾರಣಕ್ಕೆ ಸಹ ಕಲಾವಿದರನ್ನು ಸೆಟ್ ಗೆ ಕರ್ಕೊಂಡು ಬಂದಿದ್ದ ಶಿವಶಂಕರ್ ಮೇಲೆ 'ದಾಸ' ದರ್ಶನ್ ಹಲ್ಲೆ ಮಾಡಿದರಂತೆ. ಹಾಗಂತ ಸ್ವತಃ ಶಿವಶಂಕರ್ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದಾರೆ.
''ಏನನ್ನೂ ವಿಚಾರಿಸದೇ ದರ್ಶನ್ ಸರ್ ನನ್ನ ಕಪಾಳಕ್ಕೆ ಹೊಡೆದರು'' ಎಂದು ಶಿವಶಂಕರ್ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.
ಶಿವಶಂಕರ್ ಮೇಲೆ ದರ್ಶನ್ ಹಲ್ಲೆ ಮಾಡಿದ್ಮೇಲೆ, ಸಹ ಕಲಾವಿದರೆಲ್ಲಾ ಒಗ್ಗಟ್ಟು ಪ್ರದರ್ಶಿಸಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಿಂದ ಹೊರಗೆ ಬಂದಿದ್ದಾರೆ. ಎಲ್ಲರೂ ತಾವರೆಕೆರೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ.
ಮಾಧ್ಯಮಗಳ ಮುಂದೆ ಸಹ ಕಲಾವಿದರನ್ನು 'ಯಜಮಾನ' ಸೆಟ್ ಗೆ ಕರ್ಕೊಂಡು ಬಂದಿದ್ದ ಶಿವಶಂಕರ್ ಹೇಳಿದ್ದೇನು ಎಂಬುದನ್ನ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

ನನಗೇನೂ ಗೊತ್ತಿಲ್ಲ.!
''ಮೂರು ದಿನಗಳಿಂದ 'ಯಜಮಾನ' ಶೂಟಿಂಗ್ ನಡೆಯುತ್ತಿದೆ. ಸಾಂಗ್ ಶೂಟಿಂಗ್ ನಲ್ಲಿ ನಾವು ನೂರು ಜನ ಸಹ ಕಲಾವಿದರು ಭಾಗವಹಿಸಿದ್ವಿ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಯಾರೋ ಫೋಟೋ ತೆಗೆದರು ಅಂತ ಗೊತ್ತಾಯ್ತು. ಅದು ಯಾರು ಅಂತ ನನಗೆ ಗೊತ್ತಿಲ್ಲ'' ಅಂತಾರೆ ಶಿವಶಂಕರ್.

ಏಕಾಏಕಿ ನನ್ನ ಮೇಲೆ ಕೈ ಮಾಡಿದರು
''ಸಹ ಕಲಾವಿದರನ್ನ ಕರ್ಕೊಂಡು ಬಂದವರನ್ನ ಕರೆಯಿರಿ ಅಂತ ಹೇಳಿದರು. ನಾನು ಒಳಗೆ ಹೋದೆ. ದರ್ಶನ್ ಸರ್ ಏಕಾಏಕಿ ನನಗೆ ಹೊಡೆದು, ನನ್ನನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದರು'' ಎಂದು ಆರೋಪಿಸುತ್ತಾರೆ ಶಿವಶಂಕರ್.

ಏನ್ನನ್ನೂ ವಿಚಾರಿಸಲಿಲ್ಲ.!
''ಫೋಟೋ ತೆಗೆದವರು ಯಾರು.? ಅವರನ್ನ ಹೊರಗೆ ಕಳುಹಿಸಿ ಅಂತ ದರ್ಶನ್ ಸರ್ ನನಗೆ ಹೇಳಬಹುದಿತ್ತು. ಆದ್ರೆ, ಏನ್ನನ್ನೂ ವಿಚಾರಿಸದೆ ಏಕಾಏಕಿ ನನ್ನ ಮೇಲೆ ಕೈ ಮಾಡಿದ್ದಾರೆ'' - ಶಿವಶಂಕರ್, ಜ್ಯೂನಿಯರ್ ಆರ್ಟಿಸ್ಟ್ ಸಪ್ಲೈಯರ್

ಇನ್ಮೇಲೆ ಈ ಸಿನಿಮಾ ಮಾಡಲ್ಲ.!
''ನಮ್ಮದೇ ಆದ ಸಹ ಕಲಾವಿದರ ಸಂಘ ಇದೆ. ಇನ್ಮೇಲೆ ನಾವು ಈ ಸಿನಿಮಾ ಮಾಡಲ್ಲ. ನಮ್ಮ ಸಂಘಕ್ಕೆ ನಾನು ದೂರು ನೀಡಿರುವೆ. ಯಾರು ಫೋಟೋ/ವಿಡಿಯೋ ತೆಗೆದಿದ್ದು ಅಂತ ನನಗೆ ಗೊತ್ತಿಲ್ಲ. ಅದನ್ನ ವಿಚಾರಿಸದೇ ದರ್ಶನ್ ಸರ್ ನನಗೆ ಹೊಡೆದರು'' - ಶಿವಶಂಕರ್, ಜ್ಯೂನಿಯರ್ ಆರ್ಟಿಸ್ಟ್ ಸಪ್ಲೈಯರ್

ಹದಿನೈದು ದಿನಗಳ ಹಿಂದೆ ಹೀಗೇ ಆಗಿದೆ
''ಹದಿನೈದು ದಿನಗಳ ಹಿಂದೆ ಕೂಡ ಹೀಗೇ ಆಗಿದೆ. ಸಹ ಕಲಾವಿದರನ್ನು ಕರ್ಕೊಂಡು ಬಂದವರ ಮೇಲೆ ಇದೇ ರೀತಿ ಆಗಿದೆ. ದರ್ಶನ್ ಸರ್ ಸಿನಿಮಾ ಅಂದ್ರೆ ನಾವು ಖುಷಿಯಿಂದ ಬರ್ತೀವಿ. ಆದ್ರೆ, ಈ ತರಹ ಆದರೆ ನಮಗೆ ಕೆಲಸ ಮಾಡಲು ಇಂಟ್ರೆಸ್ಟ್ ಇರಲ್ಲ'' - ಶಿವಶಂಕರ್, ಜ್ಯೂನಿಯರ್ ಆರ್ಟಿಸ್ಟ್ ಸಪ್ಲೈಯರ್


Click it and Unblock the Notifications











