ಆಗಸ್ಟ್ 16 ರಿಂದ 'ಒಡೆಯರ್' ದರ್ಬಾರ್: ಸಂಭ್ರಮದಲ್ಲಿ ದರ್ಶನ್ ಫ್ಯಾನ್ಸ್.!
ಅಭಿಮಾನಿಗಳ ಪ್ರೀತಿಯ 'ದಾಸ' ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಕೆಲವೇ ದಿನಗಳಲ್ಲಿ 'ಕುರುಕ್ಷೇತ್ರ' ಆಡಿಯೋ ರಿಲೀಸ್ ಆಗಲಿದ್ದು, ಅದಾದ ಬಳಿಕ ಸಿನಿಮಾ ನಿಮ್ಮೆಲ್ಲರ ಮುಂದೆ ಬರಲಿದೆ.
'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಮುಗಿದ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಶೂಟಿಂಗ್ ನಲ್ಲಿ ಪಾಲ್ಗೊಂಡರು. ಇನ್ನೇನು 'ಯಜಮಾನ' ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಟೈಮ್ ಹತ್ತಿರ ಬಂದಿದೆ. ಹೀಗಾಗಿ, 52ನೇ ಸಿನಿಮಾಗೆ ದರ್ಶನ್ ಚಾಲನೆ ಕೊಡಲಿದ್ದಾರೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಸಂಭ್ರಮ ಪಡುವ ಸುದ್ದಿಯೊಂದನ್ನ ನಾವು ಹೊತ್ತು ತಂದಿದ್ದೇವೆ. ಮುಂದಿನ ತಿಂಗಳಲ್ಲಿ ದರ್ಶನ್ ರವರ 52ನೇ ಸಿನಿಮಾದ ಮುಹೂರ್ತ ನಡೆಯಲಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿರಿ...

ಆಗಸ್ಟ್ 16 ರಂದು 'ಒಡೆಯರ್' ಮುಹೂರ್ತ
ಆಗಸ್ಟ್ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 52ನೇ ಸಿನಿಮಾ 'ಒಡೆಯರ್' ಮುಹೂರ್ತ ಸಮಾರಂಭ ನಡೆಯಲಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನಡೆಯಲಿದೆ. ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ.

ಆಗಸ್ಟ್ 16 ರ ಸ್ಪೆಷಲ್
'ಒಡೆಯರ್' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ನಿರ್ಮಾಪಕ ಸಂದೇಶ್ ನಾಗರಾಜ್. ಇವರ ಜನ್ಮದಿನ ಆಗಸ್ಟ್ 16 ರಂದು. ಹೀಗಾಗಿ, ಅಂದೇ ಸಿನಿಮಾದ ಮುಹೂರ್ತ ಸಮಾರಂಭ ನಡೆಸಲು ಸಂದೇಶ್ ನಾಗರಾಜ್ ನಿರ್ಧರಿಸಿದ್ದಾರೆ.

ರೀಮೇಕ್ ಸಿನಿಮಾ
ಅಂದ್ಹಾಗೆ, 'ವೀರಂ' ಚಿತ್ರದ ರೀಮೇಕ್ ಈ 'ಒಡೆಯರ್' ಸಿನಿಮಾ. 'ವೀರಂ' ಚಿತ್ರವನ್ನ ಕನ್ನಡದ ನೇಟಿವಿಟಿಗೆ ತಕ್ಕ ಹಾಗೆ ಬದಲಾವಣೆ ಮಾಡಿಕೊಂಡಿದ್ದಾರೆ ನಿರ್ದೇಶಕ ಎಂ.ಡಿ.ಶ್ರೀಧರ್. ಈಗಾಗಲೇ, 'ಒಡೆಯರ್' ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದೆ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಬಾಕಿ ತಾರಾಗಣ ಇನ್ನೂ ಫೈನಲ್ ಆಗಿಲ್ಲ.

ಯಶಸ್ವಿ ಜೋಡಿ
ಅಷ್ಟಕ್ಕೂ, ದರ್ಶನ್ ಗಾಗಿ 'ಪೊರ್ಕಿ' ಹಾಗೂ 'ಬುಲ್ ಬುಲ್' ಚಿತ್ರವನ್ನ ನಿರ್ದೇಶನ ಮಾಡಿದವರು ಎಂ.ಡಿ.ಶ್ರೀಧರ್. ಈ ಎರಡೂ ಚಿತ್ರಗಳು ಹಿಟ್ ಆಗಿವೆ. ಎರಡು ಸೂಪರ್ ಹಿಟ್ ಗಳನ್ನು ಕೊಟ್ಟಿರುವ ಈ ಜೋಡಿ ಇದೀಗ 'ಒಡೆಯರ್' ಮೂಲಕ ಹ್ಯಾಟ್ರಿಕ್ ಬಾರಿಸುತ್ತಾರಾ.? ನೋಡಬೇಕು.


Click it and Unblock the Notifications











