ರಚಿತಾ ಬಗ್ಗೆ ಮಾತನಾಡುತ್ತಲೇ ಸುದೀಪ್ ದೊಡ್ಡ ನಟ ಎಂದು ಹೇಳಿದ ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ದಚ್ಚು, ಚಿನ್ನ ಎಂದು ಮಾತನಾಡುವಂತಹ ಗಟ್ಟಿಯಾದ ಸ್ನೇಹವನ್ನು ಹೊಂದಿದ್ದ ಈ ಇಬ್ಬರನ್ನು ಕಂಡು ಚಂದನವನದಲ್ಲಿ ಅಂದು ಅಂಬರೀಶ್ ಹಾಗೂ ವಿಷ್ಣುವರ್ಧನ್ ರೀತಿ ಈಗ ದರ್ಶನ್ ಹಾಗೂ ಸುದೀಪ್ ಒಳ್ಳೆಯ ಸ್ನೇಹಿತರು ಎಂದು ಸಿನಿ ರಸಿಕರು ಹೋಲಿಸಿ ಮಾತನಾಡುತ್ತಿದ್ದರು.
ಈ ಇಬ್ಬರ ನಡುವೆ ನಂಬರ್ ಗೇಮ್ ಇರಲಿಲ್ಲ, ಒಬ್ಬರ ಕುರಿತು ಇನ್ನೊಬ್ಬರು ಮಾತನಾಡುವಾಗ ಹೊಗಳಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಇನ್ನು ಇಬ್ಬರ ಅಭಿಮಾನಿಗಳದ್ದೂ ಸಹ ಇದೇ ಹಾದಿ. ತಮ್ಮ ನೆಚ್ಚಿನ ನಟರಂತೆ ತಾವೂ ಸಹ ಸಾಮಾಜಿಕ ಜಾಲತಾಣದಲ್ಲಿ ದೋಸ್ತಿಗಳಾಗಿದ್ದರು. ದರ್ಶನ್ ಅಭಿಮಾನಿಗಳು ಸುದೀಪ್ ಅವರನ್ನು ಬೆಂಬಲಿಸುತ್ತಿದ್ರು ಹಾಗೂ ಸುದೀಪ್ ಅಭಿಮಾನಿಗಳು ದರ್ಶನ್ ಅವರನ್ನು ಬೆಂಬಲಿಸುತ್ತಿದ್ರು.
ಆದರೆ ಮೆಜೆಸ್ಟಿಕ್ ಚಿತ್ರದ ಕುರಿತಾಗಿ ನಡೆದ ಚರ್ಚೆಗಳಿಂದಾಗಿ ಇಬ್ಬರ ನಡುವೆ ಇದ್ದ ಸ್ನೇಹಕ್ಕೆ ಕೊಳ್ಳಿ ಬಿದ್ದಿತ್ತು. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮೆಜೆಸ್ಟಿಕ್ ಚಿತ್ರವನ್ನು ಮಾಡಿ ಎಂದು ಹೇಳಿದ್ದೆ ಎಂಬ ಸುದೀಪ್ ಹೇಳಿಕೆ ದರ್ಶನ್ ಅವರನ್ನು ಕೆರಳಿಸಿತ್ತು. ಹೀಗಾಗಿಯೇ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಪೋಸ್ಟ್ ಹಾಕಿದ ದರ್ಶನ್ 'ಸುದೀಪ್ ಹಾಗೂ ನಾನು ಚಂದನವನದ ನಟರಷ್ಟೇ, ನನಗೂ ಆತನಿಗೂ ಯಾವುದೇ ರೀತಿಯ ಸ್ನೇಹ ಇಲ್ಲ' ಎಂದು ಬರೆದುಕೊಂಡು ಸುದೀಪ್ರಿಂದ ದೂರಾದರು. ಹೀಗೆ ಇಬ್ಬರೂ ದೂರಾದ ನಂತರ ಇಬ್ಬರ ಅಭಿಮಾನಿಗಳೂ ಸಹ ದೂರಾದರು. ಇದಾದ ಬಳಿಕ ಇಬ್ಬರನ್ನು ಮೊದಲಿನ ಹಾಗೆ ಯಾವಾಗ ನೋಡುತ್ತೇವೆ ಎಂದು ಸಿನಿ ರಸಿಕರು ಕಾಯುತ್ತಿದ್ದಾರೆ. ಹೀಗೆ ವಿವಾದದ ಬಳಿಕ ಸುದೀಪ್ ಕುರಿತು ಒಮ್ಮೆಯೂ ಮಾತನಾಡದ ದರ್ಶನ್ ಇದೀಗ ಮೊದಲ ಬಾರಿಗೆ ಸುದೀಪ್ ಹೆಸರನ್ನು ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದಾರೆ.

ರಚಿತಾ ಬಗ್ಗೆ ಮಾತನಾಡುತ್ತಾ ಸುದೀಪ್ ಹೆಸರು ಹೇಳಿದ ದರ್ಶನ್
ಕ್ರಾಂತಿ ಬಿಡುಗಡೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಕನ್ನಡ ಪಿಕ್ಚರ್ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ದರ್ಶನ್ ರಚಿತಾ ರಾಮ್ ಕನ್ನಡ ಚಲನಚಿತ್ರರಂಗದಲ್ಲಿ ಹತ್ತು ವರ್ಷಗಳನ್ನು ಪೂರೈಸಿದ್ದರ ಬಗ್ಗೆಯೂ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇಂಡಸ್ಟ್ರಿಯಲ್ಲಿ ಓರ್ವ ನಟಿ ಹತ್ತು ವರ್ಷಗಳನ್ನು ಪೂರೈಸುವುದು ಸುಲಭದ ಮಾತಲ್ಲ, ಅದರಲ್ಲಿಯೂ ಪುನೀತ್ ರಾಜ್ಕುಮಾರ್ ಅವ್ರು, ಸುದೀಪ್ ಅವ್ರು ಹಾಗೂ ಶಿವಣ್ಣ ಅವರಂತಹ ದೊಡ್ಡ ನಟರ ಚಿತ್ರಗಳಲ್ಲಿ ನಟಿಸಿರುವುದು ದೊಡ್ಡ ವಿಷಯ ಎಂದು ದರ್ಶನ್ ತಿಳಿಸಿದರು. ಈ ಮೂಲಕ ದೂರಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಸುದೀಪ್ ಹೆಸರನ್ನು ಹೇಳಿದರು.

ಇಬ್ಬರ ಫ್ಯಾನ್ಸ್ ಫುಲ್ ಖುಷ್
ಇನ್ನು ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಹಲವು ದಿನಗಳ ಬಳಿಕ ಬಂದದ್ದನ್ನು ಕಂಡ ಇಬ್ಬರ ಅಭಿಮಾನಿಗಳೂ ಸಹ ಖುಷಿಪಟ್ಟಿದ್ದಾರೆ. ಇಬ್ಬರೂ ಒಂದಾಗಿ ಮೊದಲಿನಂತೆ ಸ್ನೇಹದಿಂದ ಇದ್ದರೆ ಎಷ್ಟು ಚಂದ ಎಂದು ಹಳೆಯ ದಿನಗಳನ್ನು ನೆನೆದಿದ್ದಾರೆ. ಇನ್ನು ಹಲವು ಸಿನಿ ರಸಿಕರು ಈ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮತ್ತೆ ಈ ಇಬ್ಬರೂ ಒಂದಾಗಲಿ ಎಂದು ಆಶಿಸಿದ್ದಾರೆ.

ಕ್ರಾಂತಿ ಹಾಡು ಯಶಸ್ಸು
ಇನ್ನು ಇತ್ತ ದರ್ಶನ್ ಸಂದರ್ಶನಗಳಲ್ಲಿ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿದ್ದರೆ, ಅತ್ತ ಕ್ರಾಂತಿ ಚಿತ್ರದ ಮೊದಲ ಹಾಡು ಧರಣಿ ಕೂಡ ಬಿಡುಗಡೆಯಾಗಿ ವೈರಲ್ ಆಗಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಕ್ರಾಂತಿ ಥೀಮ್ ಹಾಡು ಬಿಡುಗಡೆಗೊಂಡಿದೆ. ಇದಾದ ಬಳಿಕ ಚಿತ್ರದ ಎರಡನೇ ಹಾಡನ್ನು ಡಿಸೆಂಬರ್ 18ರ ಭಾನುವಾರದಂದು ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರತಂಡ ಬಿಡುಗಡೆಗೊಳಿಸಲಿದೆ.


Click it and Unblock the Notifications











