ಕೋರ್ಟ್ ತಡೆ ನಿವಾರಣೆ: ಆರ್ಯನ್ ರಾಜ್ಯಾದ್ಯಂತ ಬಿಡುಗಡೆ
ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳೂ ಸೇರಿದಂತೆ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಆರ್ಯನ್' ಚಿತ್ರ ರಾಜ್ಯಾದ್ಯಂತ ಶುಕ್ರವಾರ ( ಆ 1) ಬಿಡುಗಡೆಯಾಗುತ್ತಿದೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರ ಬಿಡಗಡೆಯ ವಿರುದ್ದ ಎಂ ನಾಗರಾಜ್ ಎನ್ನುವವರು ಕೋರ್ಟ್ ಮೊರೆ ಹೋಗಿದ್ದರಿಂದ ಮೂರು ಜಿಲ್ಲೆಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದೆಂದು ನ್ಯಾಯಾಲಯ ಆದೇಶ ನೀಡಿತ್ತು. (230 ಚಿತ್ರಮಂದಿರದಲ್ಲಿ ಆರ್ಯನ್ ಬಿಡುಗಡೆ)
ಆರ್ಯನ್ ಚಿತ್ರದ ನಿರ್ಮಾಪಕರು ಮತ್ತು ಹಂಚಿಕೆದಾರರೂ ಆಗಿರುವ ಡಿ ಕಮರ್, ನಾಗರಾಜು ಎನ್ನುವವರಿಂದ 28 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ವಿತರಣೆ ಹಕ್ಕು ಕೊಡುವುದಾಗಿ ಹೇಳಿದ್ದರು.

ಈ ಸಂಬಂಧ ಅಗ್ರೀಮೆಂಟ್ ಕೂಡಾ ಆಗಿತ್ತು. ಆದರೆ, ಕಮರ್ ಹಣವೂ ಹಿಂದಿರುಗಿಸದೇ, ವಿತರಣೆ ಹಕ್ಕನ್ನೂ ನೀಡದೇ ಇದ್ದುದ್ದರಿಂದ ನಾಗರಾಜ್ ಕೋರ್ಟ್ ಮೆಟ್ಟಲೇರಿದ್ದರು. ಮೂರು ಜಿಲ್ಲೆಗಳಲ್ಲಿ ಆಗಸ್ಟ್ ಎಂಟರವರೆಗೆ ಚಿತ್ರ ಬಿಡುಗಡೆ ಮಾಡದಂತೆ ದಾವಣಗೆರೆ ಸಿವಿಲ್ ಕೋರ್ಟ್ ಆದೇಶ ನೀಡಿತ್ತು.
ಈ ಸಂಬಂಧ ಆರ್ಯನ್ ಚಿತ್ರದ ಕರ್ನಾಟಕ ವಿತರಕರಾಗಿರುವ ಡ್ರೀಮ್ ವೀವರ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಜೊತೆ ಒನ್ ಇಂಡಿಯಾ ಸಂಪರ್ಕಿಸಿದಾಗ ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಯಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ. UFO ಕ್ಲಿಯರೆನ್ಸ್ ಪತ್ರವನ್ನು ಈ ಮೂರು ಜಿಲ್ಲೆಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರವನ್ನು ಸಂಪರ್ಕಿಸಿದಾಗ, ಇನ್ನು ಸ್ವಲ್ಪ ಹೊತ್ತಿನಲ್ಲೇ ಆರ್ಯನ್ ಬೆಳಗ್ಗಿನ ಶೋ ಆರಂಭವಾಗಲಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲ ನಿವಾರಣೆಯಾಗಿದೆ ಎಂದು ಚಿತ್ರಮಂದಿರದ ಸಿಬ್ಬಂದಿ ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











