'ಸ್ಟಾರ್' ಇಲ್ಲದೆ ಸಕ್ಸಸ್ ಕಂಡ ವರ್ಷದ 'ಡೀಸೆಂಟ್' ಚಿತ್ರಗಳು
ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಹೊಸಬರ ಹಾಗೂ ಪ್ರಯೋಗಾತ್ಮಕ ಚಿತ್ರಗಳು ಕಣ್ಮರೆಯಾಗುತ್ತೆ. ಸಿನಿಮಾ ಎಷ್ಟೇ ಚೆನ್ನಾಗಿದ್ದರೂ, ಅದಕ್ಕೆ ಸಿಗಬೇಕಾದ ಮನ್ನಣೆ ಸಿಗುವುದಿಲ್ಲ. ಆದ್ರೂ, ಜನರ ಚಪ್ಪಾಳೆ, ಶಿಳ್ಳೆ, ಗಿಟ್ಟಿಸಿಕೊಳ್ಳುವಲ್ಲಿ ಈ ಚಿತ್ರಗಳು ಯಶಸ್ಸು ಕಾಣುತ್ತೆ.
ಇಂತಹ ಚಿತ್ರಗಳ ಪೈಕಿ ಕೆಲವೊಂದು ಚಿತ್ರಗಳನ್ನ ನಾವು ಪಟ್ಟಿ ಮಾಡಿದ್ದೇವೆ. ಈ ಚಿತ್ರಗಳು ಮಾಸ್ ಪ್ರೇಕ್ಷಕರನ್ನ ಹೊರತು ಪಡಿಸಿದ ಚಿತ್ರಗಳು. ಕಥೆ-ಚಿತ್ರಕಥೆ-ಅಭಿನಯದ ಮೂಲಕ ಗಮನ ಸೆಳೆದಿರುವ ವಿಭಿನ್ನ ಸಿನಿಮಾಗಳು.
ಈ ಚಿತ್ರಗಳಿಗೆ ಸ್ಟಾರ್ ನಿರ್ದೇಶಕ, ಸ್ಟಾರ್ ನಟ, ಸ್ಟಾರ್ ನಟಿ ಎಂಬ ಟ್ಯಾಗ್ ಇಲ್ಲ. ಆದ್ರೆ, ಬಿಡುಗಡೆಯಾದ ನಂತರ 'ಸ್ಟಾರ್' ಪಟ್ಟ ಹುಡುಕಿಕೊಂಡು ಬಂದಿವೆ. ಈ ಚಿತ್ರಗಳಲ್ಲಿ ನಿಮಗೆ ಹೆಚ್ಚು ಇಷ್ಟವಾದ ಚಿತ್ರ ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ. ಆ ಚಿತ್ರಗಳು ಯಾವುದು ಎಂಬ ವಿವರ ಮುಂದೆ ಓದಿ.....

ಪ್ರೇಮ 'ರಾಗ'
'ರಾಗ' ಚಿತ್ರಕ್ಕೆ ಹಾಸ್ಯನಟ ಮಿತ್ರ ನಾಯಕ. ಭಾಮಾ ನಾಯಕಿ. ಸ್ಟಾರ್ ನಟ ಎಂಬ ಟ್ಯಾಗ್ ಇಲ್ಲದೇ, ಅಭಿನಯ ಹಾಗೂ ಸ್ಕ್ರಿಪ್ಟ್ ಮೂಲಕ ಯಶಸ್ಸು ಕಂಡ ಸಿನಿಮಾ. ಕಾಮಿಡಿ, ಲವ್, ಜೊತೆಗೆ ಅದ್ಭುತವಾದ ಸಂದೇಶ ಈ ಚಿತ್ರದಲ್ಲಿತ್ತು. ಪಿ.ಸಿ.ಶೇಖರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

ಒಂದು ಮೊಟ್ಟೆಯ ಕಥೆ
ಹೀರೋಗೆ ಸಿಕ್ಸ್ ಫ್ಯಾಕ್ ಇರ್ಬೇಕು, 6 ಅಡಿ ಹೈಟ್ ಇರ್ಬೇಕು ಎಂಬ ಕಾನ್ಸೆಪ್ಟ್ ಬ್ರೇಕ್ ಮಾಡಿದ ಸೂಪರ್ ಹಿಟ್ ಸಿನಿಮಾ 'ಒಂದು ಮೊಟ್ಟೆಯ ಕಥೆ'. ರಾಜ್ ಬಿ ಶೆಟ್ಟಿ ಈ ಚಿತ್ರವನ್ನ ನಿರ್ದೇಶನ ಮಾಡಿ ಸ್ವತಃ ನಾಯಕನಾಗಿ ನಟಿಸಿದ್ದರು. ಬೋಳು ತಲೆಯ ವ್ಯಕ್ತಿಗೆ ಹುಡುಗಿ ಸಿಗುವುದು ಎಷ್ಟು ಕಷ್ಟ ಎಂಬ ವಿಷ್ಯವನ್ನ ಕಾಮಿಡಿ ಮೂಲಕ ತೆರೆಮೇಲೆ ತಂದಿದ್ದರು.

ಹುಲಿರಾಯ
'ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ' ಎಂಬ ಮಾತಿದೆ. ಆ ಮಾತಿನ ಹಾಗೆ 'ಹುಲಿರಾಯ' ಚಿತ್ರದ ಕಥೆ ಇದೆ. ಚಂದದ ಕಥೆ, ಅಷ್ಟೆ ಚಂದದ ನಿರೂಪಣೆ ಸೇರಿಕೊಂಡಿರುವ 'ಹುಲಿರಾಯ' ಸಭ್ಯ ಸಿನಿಮಾ. ಅರವಿಂದ್ ಕೌಶಿಕ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಬಾಲು ನಾಗೇಂದ್ರ ನಾಯಕನಾಗಿ ಅಭಿನಯಿಸಿದ್ದರು.

ದಯವಿಟ್ಟು ಗಮನಿಸಿ
ರೋಹಿತ್ ಪದಕಿ ನಿರ್ದೇಶನ ಮಾಡಿದ್ದ 'ದಯವಿಟ್ಟು ಗಮನಿಸಿ' ಚಿತ್ರಕಥೆಯ ಮೂಲಕ ಗಮನ ಸೆಳೆದಿತ್ತು. ನಾಲ್ಕು ವಿಭಿನ್ನ ಕಥೆಗಳ ಮೂಲಕ ನೀತಿ ಪಾಠ ಹೇಳಿದ ಕಥೆ ಒಳ್ಳೆ ಮನರಂಜನೆ ನೀಡಿತ್ತು. ಸುಂದರವಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಹಾಗೂ ಕಲಾವಿದರ ಅಭಿನಯದ ಮೂಲಕ ಮೋಡಿ ಮಾಡಿತು. ರಘು ಮುಖರ್ಜಿ, ವಸಿಷ್ಠ ಸಿಂಹ, ರಾಜೇಶ್ ನಟರಂಗ, ಭಾವನಾ ರಾವ್, ಸಂಗೀತ ಭಟ್, ಸಂಯುಕ್ತ ಹೊರನಾಡು ಸೇರಿದಂತೆ ಹಲವರು ಅಭಿನಯಿಸಿದ್ದರು.

ಕಟಕ
'ಉಗ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನ ಮಾಡಿದ್ದ ಚಿತ್ರ ಕಟಕ. ಹಾರರ್ ಥ್ರಿಲ್ಲಿಂಗ್ ಸಿನಿಮಾ ಇದಾಗಿದ್ದು, ಪ್ರೇಕ್ಷಕರನ್ನ ಸಖತ್ ಆಗಿ ಭಯ ಪಡಿಸಿದ್ದಾರೆ. ವಾಮಚಾರದ ಸುತ್ತ ಕಥೆ ಎಣೆಯಲಾಗಿದ್ದು, ಶ್ಲಾಘಾ ಸಾಲಿಗ್ರಾಮ, ಅಶೋಕ್ ರಾಜ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ಉರ್ವಿ
ಹೆಣ್ಣು ಕೇವಲ ಭೋಗದ ವಸ್ತುವಲ್ಲ. ಹೆಣ್ಣು ಎಂದರೇ 'ಶಕ್ತಿ', ಹೆಣ್ಣು ಎಂದರೇ 'ಯುಕ್ತಿ', ಹೆಣ್ಣು ಎಂದರೇ 'ಭಕ್ತಿ'. ಹೆಣ್ಣು ಮನಸ್ಸು ಮಾಡಿದರೇ ಸಾಧನೆಯೂ ಆಗುತ್ತೆ, ಸರ್ವನಾಶವೂ ಆಗುತ್ತೆ. ಇಂತಹ ವಿಭಿನ್ನ ಕಥಾವಸ್ತುವಿನಿಂದ ತೆರೆಮೇಲೆ ಬಂದ ಸಿನಿಮಾ ಉರ್ವಿ. ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ನಟಿಸಿದ್ದ ಈ ಚಿತ್ರವನ್ನ ಪ್ರದೀಪ್ ವರ್ಮ ನಿರ್ದೇಶನ ಮಾಡಿದ್ದರು.

ಶುದ್ಧಿ
ದೆಹಲಿ ಗ್ಯಾಪ್ ರೇಪ್ ಪ್ರಕರಣ, ಮಂಗಳೂರಿನಲ್ಲಿ ಪಬ್ ಗಳ ಮೇಲೆ ನಡೆದ ದಾಳಿ ಪ್ರಕರಣದ ಪ್ರೇರಣೆಯಿಂದ ತಯಾರಾದ ಸಿನಿಮಾ 'ಶುದ್ಧಿ'. ಸಮಾಜದ ಸಮಸ್ಯೆಗಳ ಸುತ್ತ ಶುದ್ಧಿಯ ಚಿತ್ರಕಥೆ ಮಾಡಿದ್ದು, ಆದರ್ಶ್ ಎಚ್.ಈಶ್ವರಪ್ಪ ನಿರ್ದೇಶಿಸಿದ್ದರು. ನಿವೇದಿತಾ, ಲಾರೆನ್ ಸ್ಪಾರ್ಟನೊ, ಅಮೃತಾ ಕರಗದ, ಸುಧಾ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

ಎರಡನೇ ಸಲ
'ಮಠ' ಗುರು ಪ್ರಸಾದ್ ನಿರ್ದೇಶನ ಮಾಡಿದ್ದ ರೊಮ್ಯಾಂಟಿಕ್ ಸಿನಿಮಾ. ಧನಂಜಯ್ ಮತ್ತು ಸಂಗೀತಾ ಭಟ್ ಅಭಿನಯಿಸಿದ್ದರು. ಡಬ್ಬಲ್ ಮೀನಿಂಗ್ ಡೈಲಾಗ್ ಗಳು, ಹಾಟ್ ದೃಶ್ಯಗಳು, ಸಾಮಾನ್ಯ ಕಥೆ ಎಲ್ಲವೂ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಯಾವುದೇ ಅತಿರೇಕವೆನಿಸಿದೆ ಒಂದೊಳ್ಳೆ ಮನರಂಜನೆ ನೀಡಿದ್ದರು.

ಅಲ್ಲಮ
12ನೇ ಶತಮಾನದ ವಚನಕಾರರ ಪೈಕಿ ಪ್ರಮುಖರಾಗಿದ್ದ 'ಅಲ್ಲಮ'ರ ಜೀವನಚರಿತ್ರೆಯೇ ಅಲ್ಲಮ ಸಿನಿಮಾ. ಮದ್ದಳೆ ಬಾರಿಸುವ ಬಾಲಕನಿಂದ ಹಿಡಿದು ಬಸವ ಕಲ್ಯಾಣದ ಅನುಭವ ಮಂಟಪದ ಶೂನ್ಯ ಸಿಂಹಾಸನ ಏರುವವರೆಗೂ 'ಅಲ್ಲಮ'ನ ಜೀವನವನ್ನ ಚಿತ್ರದಲ್ಲಿ ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ. ಟಿ.ಎಸ್ ನಾಗಭರಣ ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಮೇಕಿಂಗ್ ಮಾಡಲಾಗಿತ್ತು. ಧನಂಜಯ್ ಮತ್ತು ಮೇಘನಾ ರಾಜ್ ಅಭಿನಯಿಸಿದ್ದರು.

ಅಮರಾವತಿ
'ಜಟ್ಟ', 'ಮೈತ್ರಿ' ಅಂತಹ ಸಿನಿಮಾಗಳು ನಂತರ ಬಿ.ಎಂ.ಗಿರಿರಾಜ್ ನಿರ್ದೇಶನ ಮಾಡಿರುವ 'ಅಮರಾವತಿ' ಚಿತ್ರಕ್ಕೆ ಪ್ರೇಕ್ಷಕರಿಂದ ಶಬ್ಬಾಶ್ ಗಿರಿ ಪಡೆದುಕೊಂಡಿತ್ತು. ಪೌರಕಾರ್ಮಿಕನ ಜೀವನದ ಸುತ್ತ ನಡೆಯುವ ಕಥೆಗೆ ಅಚ್ಯುತ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇವರ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ.

ಮಾರಿಕೊಂಡವರು
2015ನೇ ಸಾಲಿನಲ್ಲಿ ಅತ್ಯುತ್ತುಮ ಎರಡನೇ ಚಿತ್ರ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು. ದೇವನೂರ ಮಹಾದೇವ ಅವರು 70-80ರ ದಶಕದಲ್ಲಿ ಬರೆದ ಕಥೆಗಳನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಕೆ.ಶಿವರುದ್ರಯ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

ಇವುಗಳಲ್ಲಿ ಯಾವುದು ಹೆಚ್ಚು ಇಷ್ಟ?
ಈ ಎಲ್ಲ ಚಿತ್ರಗಳು ಕಥೆ, ಚಿತ್ರಕಥೆ, ಅಭಿನಯದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದವು. ದೊಡ್ಡ ಹಿಟ್ ಆಗದಿದ್ದರೂ, ಡಿಸೆಂಟ್ ಹಿಟ್ ಎನಿಸಿಕೊಂಡಿವೆ. ಮಾಸ್ ಪ್ರೇಕ್ಷಕರನ್ನ ಹೊರತು ಪಡಿಸಿ ಕ್ಲಾಸ್ ಆಡಿಯೆನ್ಸ್ ಗಳ ಮನಗೆದ್ದಿವೆ. ಈ ಚಿತ್ರಗಳಲ್ಲಿ ನಿಮಗೆ ಹೆಚ್ಚು ಇಷ್ಟವಾಗಿದ್ದ ಚಿತ್ರ ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ...


Click it and Unblock the Notifications











