ದರ್ಶನ್ ಮೇಲೆ ಚಪ್ಪಲಿ ಎಸೆತ: ಡಿ ಬಾಸ್ ವಿರುದ್ಧ ಪಿತೂರಿ ನಡೆಸಿದ್ದಾರೆ, ಕರ್ಮ ಬಿಡಲ್ಲ ಎಂದ ಧನ್ವೀರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರದ ಎರಡನೇ ಹಾಡು 'ಬೊಂಬೆ ಬೊಂಬೆ'ಯನ್ನು ಬಳ್ಳಾರಿಯ ಹೊಸಪೇಟೆ ಪಟ್ಟಣದಲ್ಲಿ ಬಿಡುಗಡೆ ಮಾಡಲಾಯಿತು. ಅಲ್ಲಿನ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಆರಂಭವಾಗುವ ಮುನ್ನವೇ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿತ್ತು. ಕ್ರಾಂತಿ ಹಾಡು ಬಿಡುಗಡೆ ಸಮಾರಂಭದಲ್ಲಿ ಜಮಾಯಿಸಿದ್ದ ಪುನೀತ್ ಫ್ಯಾನ್ಸ್ ಅಪ್ಪು ಕಟ್ ಔಟ್ ಹಿಡಿದು ಅಪ್ಪುಗೆ ಜೈಕಾರ ಹಾಕಿ ವೇದಿಕೆ ಏರಿದ್ದರು.
ಹೀಗೆ ಪುನೀತ್ ರಾಜ್ ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ಫ್ಯಾನ್ ವಾರ್ ಮತ್ತೊಂದು ಹಂತ ಎಂದು ಪ್ರವೇಶಿಸಿತ್ತು. ಈ ಫ್ಯಾನ್ ವಾರ್ ಮತ್ಯಾವ ಹಂತಕ್ಕೆ ತಲುಪುತ್ತದೆಯೋ ಎನ್ನುವಷ್ಟರಲ್ಲಿ ಹೊಸಪೇಟೆಯಲ್ಲಿನ ಅಪ್ಪು ಪುತ್ಥಳಿಗೆ ದರ್ಶನ್ ಮಾಲಾರ್ಪಣೆ ಮಾಡಿದರು. ಇದರಿಂದ ಫ್ಯಾನ್ ವಾರ್ ಕಡಿಮೆ ಆಯಿತು ಹಾಗೂ ದರ್ಶನ್ ಹಾಡು ಬಿಡುಗಡೆ ಮಾಡಲು ಅಭಿಮಾನಿಗಳ ಸಮ್ಮುಖದಲ್ಲಿ ವೇದಿಕೆ ಏರಿದ್ದರು. ವೇದಿಕೆ ಮೇಲೆ ರಚಿತಾ ರಾಮ್ ಚಿತ್ರದ ಕುರಿತು ಹಾಗೂ ಹಾಡಿನ ಕುರಿತು ರಚಿತಾ ರಾಮ್ ಮಾತನಾಡುತ್ತಿದ್ದಾಗ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕುರಿತು ಇದೀಗ ನಟ ಹಾಗೂ ದರ್ಶನ್ ಅಭಿಮಾನಿ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.

ನೋವುಂಟು ಮಾಡಿದೆ, ಪಿತೂರಿ ನಡೆದಿದೆ
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದದ್ದರ ಕುರಿತು ಸ್ಟೋರಿ ಬರೆದುಕೊಂಡಿರುವ ಧನ್ವೀರ್ 'ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ, ನಿಮ್ಮ ಮೇಲೆ ನಡೆದ ಪಿತೂರಿ ಖಂಡನೀಯ' ಎಂದು ಆರಂಭಿಸಿ ಸುಮಾರು ಏಳೆಂಟು ಸಾಲುಗಳನ್ನು ಬರೆದುಕೊಂಡು ಅಸಾಮಾಧಾನದಿಂದ ನೋವನ್ನು ಹೊರಹಾಕಿದ್ದಾರೆ. ಕೊನೆಯಲ್ಲಿ ನಿಮ್ಮೊಂದಿಗೆ ಸದಾ ನಾವು ಎಂದು ಬರೆದುಕೊಂಡು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ.

ಧನ್ವೀರ್ ಪೂರ್ತಿ ಸ್ಟೋರಿ ಹೀಗಿದೆ
ಧನ್ವೀರ್ ಬರೆದುಕೊಂಡಿರುವ ಇನ್ಸ್ಟಾಗ್ರಾಮ್ನ ಸಂಪೂರ್ಣ ಸ್ಟೋರಿ ಹೀಗಿದೆ: "ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ. ನಿಮ್ಮ ಮೇಲೆ ನಡೆದಿರುವ ಪಿತೂರಿ ಖಂಡನೀಯ. ನಿಮ್ಮ ಸಹಸ್ರ ಅಭಿಮಾನಿಗಳಲ್ಲಿ ಒಬ್ಬನಾಗಿ ಸಾಯೋವರೆಗೂ ನಿಮ್ಮ ಮೇಲಿನ ಅಭಿಮಾನ ದುಪ್ಪಟ್ಟಾಗುತ್ತೋ ಹೊರತು ಕಡಿಮೆಯಾಗುವುದಿಲ್ಲ. ಈ ಘಟನೆಗೆ ಕಾರಣರಾದವರಿಗೆ ಭಗವಂತ ಒಳ್ಳೆಯದೇ ಮಾಡಲಿ. ಕೆಟ್ಟದು ಬಯಸಿದವರಿಗೂ ಒಳ್ಳೆದು ಮಾಡಿ ಎಂದು ಹೇಳಿಕೊಟ್ಟಿದ್ದಿರಾ ಬಾಸ್. ಕರ್ಮ ಎನ್ನುವುದು ಯಾರಿಗೂ ಬಿಟ್ಟಿರುವುದಿಲ್ಲ, ಕರ್ಮ ತಿರುಗುತ್ತೆ. ಚಪ್ಪಲಿ ಎಸೆದ ವ್ಯಕ್ತಿಗೂ, ಅವನ ಮನಸ್ಥಿತಿಗೂ ಮತ್ತು ಪ್ರಚೋದಿಸಿದರವರಿಗೂ ನೆಮ್ಮದಿ ಸಿಗಲಿ. ನಿಮ್ಮ ಸೆಲೆಬ್ರಿಟಿ ಅಭಿಮಾನಿಗಳ ಮುಂದೆ ಈ ಘಟನೆಗಳು ಸಾಸಿವೆ ಕಾಳಿಗೆ ಸಮ. ನಿಮ್ಮ ಮೇಲಿನ ಅಭಿಮಾನದೊಂದಿಗೆ.. ಧನ್ವೀರ್, ನಿಮ್ಮೊಂದಿಗೆ ಸದಾ ನಾವು"

ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ ದರ್ಶನ್ ಫ್ಯಾನ್ಸ್
ಇನ್ನು ತಮ್ಮ ನೆಚ್ಚಿನ ನಟನ ಮೇಲೆ ಚಪ್ಪಲಿ ಎಸೆದದ್ದರ ಕುರಿತು ಪ್ರತಿಕ್ರಿಯಿಸಿರುವ ದರ್ಶನ್ ಅಭಿಮಾನಿಗಳು ಬೇಸರ ಹಾಗೂ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಘಟನೆಯನ್ನು ನಾವು ಸುಮ್ಮನೆ ಮರೆಯುವುದಿಲ್ಲ, ಸೇಡು ತೀರಿಸಿಕೊಳ್ಳುತ್ತೇವೆ ಎಂದು ಕಿಡಿಕಾರಿದ್ದಾರೆ ಹಾಗೂ ನೆಚ್ಚಿನ ನಟನಿಗೆ ಹೀಗಾಯ್ತಲ್ಲ ಎಂದು ನೋವಿಗೆ ಒಳಗಾಗಿದ್ದಾರೆ.


Click it and Unblock the Notifications











