ಪುನೀತ ಪರ್ವ: ಖುದ್ದಾಗಿ ಮನೆಗೆ ಬಂದು ಆಹ್ವಾನ ಸ್ವೀಕರಿಸಿದ ಧ್ರುವ ಸರ್ಜಾಗೆ ರಾಘಣ್ಣ ಧನ್ಯವಾದ

ಇದೇ ತಿಂಗಳ 21ರಂದು ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ರಾಜ್ ಕುಟುಂಬ ಹಾಗೂ ಅಭಿಮಾನಿಗಳು ತೀರ್ಮಾನಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ 5.30ಕ್ಕೆ ಆರಂಭಗೊಳ್ಳಲಿರುವ ಈ ಕಾರ್ಯಕ್ರಮಕ್ಕೆ ಚಂದನವನ, ಟಾಲಿವುಡ್, ಕಾಲಿವುಡ್ ಹಾಗೂ ಭಾರತದ ಇತರೆ ಚಿತ್ರರಂಗಗಳ ಹಲವಾರು ಖ್ಯಾತ ನಟ ಹಾಗೂ ನಟಿಯರು ಆಗಮಿಸಲಿದ್ದು, ಈಗಾಗಲೇ ಬಹುತೇಕರಿಗೆ ರಾಜ್ ಕುಟುಂಬದ ಸದಸ್ಯರು ಖುದ್ದಾಗಿ ಭೇಟಿ ನೀಡಿ ವಿಶೇಷವಾದ ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದ್ದಾರೆ.
ಆದರೆ ಸ್ಯಾಂಡಲ್ ವುಡ್ ನಟ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾತ್ರ ರಾಘವೇಂದ್ರ ರಾಜ್ ಕುಮಾರ್ ನಿವಾಸಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ ಪುನೀತ ಪರ್ವ ಕಾರ್ಯಕ್ರಮದ ಆಮಂತ್ರಣವನ್ನು ಪಡೆದುಕೊಂಡಿದ್ದಾರೆ. ಈ ಕುರಿತಾಗಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಧ್ರುವ ಸರ್ಜಾ ಪುನೀತ ಪರ್ವ ಕಾರ್ಯಕ್ರಮದ ಆಮಂತ್ರಣವನ್ನು ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡು 'ಪ್ರೀತಿಯ ಧ್ರುವ, ಗಂಧದ ಗುಡಿ ಪೂರ್ವ ಬಿಡುಗಡೆಯ ಆಹ್ವಾನ ನೀಡಲು ಬರುತ್ತೇವೆ ಎಂದು ತಿಳಿಸಿದ್ದಕ್ಕೆ, ತಾವೇ ಖುದ್ದಾಗಿ ನಮ್ಮ ನಿವಾಸದಲ್ಲಿ ಭೇಟಿ ಮಾಡಿ ಪ್ರೀತಿಯಿಂದ ಸ್ವೀಕಾರ ಮಾಡಿದ್ದೀರಿ. ಅಪ್ಪಾಜಿ, ನಿಮ್ಮ ಈ ಪ್ರೀತಿ ಹಾಗೂ ಅಭಿಮಾನಕ್ಕೆ ನನ್ನ ನಮಸ್ಕಾರಗಳು. ಧನ್ಯವಾದಗಳು ಧ್ರುವ ಸರ್ಜಾ, ಜೈ ಆಂಜನೇಯ' ಎಂದು ಬರೆದುಕೊಂಡಿದ್ದಾರೆ.
ಇನ್ನು ನಟರಾದ ದರ್ಶನ್, ಸುದೀಪ್, ಯಶ್, ರಮೇಶ್, ಅರವಿಂದ್, ರವಿಚಂದ್ರನ್, ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ ಹಾಗೂ ಸಂಪೂರ್ಣ ಚಂದನವನದ ಕಲಾವಿದರಿಗೆ ಪುನೀತ ಪರ್ವ ಕಾರ್ಯಕ್ರಮದ ಆಹ್ವಾನವನ್ನು ನೀಡಿ ಸ್ವಾಗತಿಸಲಾಯಿತು. ಅತ್ತ ತೆಲುಗು ಹಾಗೂ ತಮಿಳು ಚಿತ್ರರಂಗದ ಘಟಾನುಘಟಿ ನಾಯಕರು ಸಹ ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಒಟ್ಟಿನಲ್ಲಿ ಪುನೀತ ಪರ್ವ ಕಾರ್ಯಕ್ರಮ ದಕ್ಷಿಣ ಭಾರತ ಚಿತ್ರರಂಗದ ಬೃಹತ್ ಕಾರ್ಯಕ್ರಮವಾಗುವುದಂತೂ ಖಚಿತ.


Click it and Unblock the Notifications











