'ಕೆಟಿಎಂ' ಬೈಕ್ ಏರಿ ಮದುವೆಯಾಗಲು ಹೊರಟಿದ್ದಾರೆ 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ!
ಕಿರುತೆರೆಯ ಮೂಲಕ ಪರಿಚಿತರಾದ ದೀಕ್ಷಿತ್ ಶೆಟ್ಟಿ ಅವರ ಚಾರ್ಮ್ಅನ್ನು ಬದಲಿಸಿರುವುದು 'ದಿಯಾ' ಸಿನಿಮಾ. 'ನಾಗಣಿ' ಧಾರಾವಾಹಿಯಿಂದ ಮನೆಮಾತಾಗಿದ್ದ ಅವರೀಗ ಹಿರಿತೆರೆಯಲ್ಲಿಯೂ ಬೇಡಿಕೆ ನಟರಾಗಿದ್ದಾರೆ. ಕುಂದಾಪುರ ಮೂಲದ ಅವರು ವಕೀಲರಾಗಲು ಹೊರಟಿದ್ದವರು, ಈಗ ಸಿನಿಮಾ ಪಯಣದ ಸೊಬಗನ್ನು ಆನಂದಿಸುತ್ತಿದ್ದಾರೆ.
Recommended Video
'ದಿಯಾ' ಸಿನಿಮಾದ ಮೂಲಕ ಮೊದಲ ಬಾರಿಗೆ ಅವರು ನಾಯಕನಟನ ಪಾತ್ರಕ್ಕೆ ಬಣ್ಣಹಚ್ಚಿದರು. 'ನಾಗಿಣಿ' ಧಾರಾವಾಹಿಯ 'ಅರ್ಜುನ್' ಪಾತ್ರದಿಂದ ಅವರು ಹೆಸರಾಗಿದ್ದರು. ಈಗ ಅವರನ್ನು ರೋಹಿತ್ ಎಂದು ಜನರು ಗುರುತಿಸುತ್ತಿದ್ದಾರೆ. 'ದಿಯಾ' ಚಿತ್ರದಲ್ಲಿ ಮೂರು ಪಾತ್ರಗಳಿದ್ದು, ನಾಯಕಿ ಹಾಗೂ ಮತ್ತೊಬ್ಬ ನಾಯಕ ನಟ ಪೃಥ್ವಿ ಅಂಬರ್ ಪಾತ್ರಗಳಂತೆಯೇ ದೀಕ್ಷಿತ್ ಅವರ ಪಾತ್ರಕ್ಕೂ ಸಮಾನ ಪ್ರಾಮುಖ್ಯವಿತ್ತು.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ಒಂದರ ವಿನ್ನರ್ ಆಗಿರುವ ಅವರಿಗೀಗ ಚಿತ್ರರಂಗದ ಹಾದಿ ಸ್ಪಷ್ಟವಾಗುತ್ತಿದೆ. ಸಾಗುತ ದೂರ ದೂರ ಎಂಬ ಚಿತ್ರದಲ್ಲಿಯೂ ನಟಿಸಿರುವ ಅವರಿಗೆ ಅವಕಾಶಗಳು ಎದುರಾಗುತ್ತಿವೆ. ಮುಂದೆ ಓದಿ...

ಸಾಲು ಸಾಲು ಅವಕಾಶ
ದೀಕ್ಷಿತ್ ಅವರಿಗೆ 'ದಿಯಾ' ನಂತರ ಚಿತ್ರರಂಗದಿಂದ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ಚಿತ್ರರಂಗದಲ್ಲಿ ನೆಲೆಯೂರುವ ಅವಕಾಶಗಳನ್ನು ಬಾಚಿಕೊಳ್ಳುವ ಉತ್ಸಾಹದಲ್ಲಿರುವ ಅವರು, ಅದಕ್ಕಾಗಿ ದೇಹವನ್ನು ಹುರಿಗಟ್ಟಿಸಿಕೊಳ್ಳುವ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

ನಾಲ್ಕು ಛಾಯೆಯ ಕೆಟಿಎಂ
ಅರುಣ್ ಕುಮಾರ್ ನಿರ್ದೇಶನದ 'ಕೆಟಿಎಂ' ಎಂಬ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪ್ರೇಮಕಥೆಯ ಈ ಚಿತ್ರದಲ್ಲಿ ದೀಕ್ಷಿತ್ ಅವರಿಗೆ ತಮ್ಮ ನಟನಾ ಕೌಶಲ ಪ್ರದರ್ಶಿಸಲು ಸಾಕಷ್ಟು ಅವಕಾಶವಿರಲಿದೆ. ಇದರಲ್ಲಿ ನಾಲ್ಕು ಛಾಯೆಗಳುಳ್ಳ ಪಾತ್ರದಲ್ಲಿ ಅವರು ನಟಿಸುತ್ತಿರುವುದು ವಿಶೇಷ.

ತೂಕ ಇಳಿಸಿಕೊಂಡು, ಹೆಚ್ಚಿಸಿಕೊಳ್ಳುವ ಸಾಹಸ
ಈ ಪಾತ್ರಕ್ಕಾಗಿ ಸಾಕಷ್ಟು ಕಸರತ್ತು ನಡೆಸುವ ಜವಾಬ್ದಾರಿ ಅವರ ಮೇಲಿದೆ. ಹತ್ತು ಕೆ.ಜಿ. ತೂಕ ಇಳಿಸಿಕೊಳ್ಳಬೇಕಿದ್ದು, ಮತ್ತೆ ಸಿನಿಮಾಕ್ಕಾಗಿ ಹತ್ತು ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳಬೇಕಿದೆ. ಇದಕ್ಕಾಗಿ ಅವರು ಬಹಳ ಕಸರತ್ತು ನಡೆಸುತ್ತಿದ್ದಾರೆ. ಈ ಪಾತ್ರವನ್ನು ತಮ್ಮ ನಟನಾ ಸಾಮರ್ಥ್ಯಕ್ಕೆ ಸವಾಲು ಒಡ್ಡುವ ಪಾತ್ರ ಎಂದು ಪರಿಗಣಿಸಿದ್ದಾರೆ.

ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು
'ದಿಯಾ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರವೀಣ್ ಎಂಬುವವರು ಆಕ್ಷನ್ ಕಟ್ ಹೇಳಲಿರುವ 'ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು' ಎಂಬ ಮತ್ತೊಂದು ಹೊಸ ಆಫರನ್ನು ಕೂಡ ದೀಕ್ಷಿತ್ ಒಪ್ಪಿಕೊಂಡಿದ್ದಾರೆ. ಇದು ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಹೇಳುವ ಕಥೆ.


Click it and Unblock the Notifications











