ರಾಜೀವ್ ಗಾಂಧಿ ಹತ್ಯೆ ತನಿಖೆಯಲ್ಲಿ ದರ್ಶನ್ ಕೈವಾಡ ಇಲ್ವಂತೆ
ಕಾಡುಗಳ್ಳ ವೀರಪ್ಪನ್ ನಿಜ ಜೀವನಾಧರಿತ ಕಥೆಯನ್ನು 'ಅಟ್ಟಹಾಸ' ಎಂಬ ಸಿನಿಮಾದ ಮೂಲಕ ತೋರಿಸಿದ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು 'ಗೇಮ್' ಸಿನಿಮಾ ಮಾಡಿ ಕೈ ಸುಟ್ಟುಕೊಂಡರು. ತದನಂತರ ಅದನ್ನು ಕೆಟ್ಟ ಕನಸು ಎಂದು ಮರೆತ ನಿರ್ದೇಶಕ ಇದೀಗ ಹೊಸ ಯೋಜನೆಗೆ ಸಿದ್ಧವಾಗಿದ್ದಾರೆ.
ಹೌದು ರಾಜೀವ್ ಗಾಂಧಿ ಹತ್ಯೆ ಮತ್ತು ತನಿಖೆಯಾಧರಿತ ಕಥೆಯನ್ನು ಹೊಂದಿರುವ 'ಅಸ್ಫೋಟ' ಎಂಬ ಚಿತ್ರವನ್ನು ತೆರೆಯ ಮೇಲೆ ತರಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.['ಗೇಮ್' ವಿಮರ್ಶೆ; ಕುಡಿದು ಗಾಡಿ ಓಡಿಸುವ ಎಲ್ರೂ ನೋಡ್ಲೇಬೇಕ್!]

ರಾಜೀವ್ ಗಾಂಧಿ ಹತ್ಯೆ-ತನಿಖೆಯುಳ್ಳ ಕಥೆಯನ್ನು ಆಧರಿಸಿ ಈಗಾಗಲೇ 'ಸೈನೈಡ್' ಮತ್ತು 'ಮದ್ರಾಸ್ ಕೆಫೆ' ಎಂಬ ಸಿನಿಮಾ ಬಂದು ಹೋಗಿದೆ. ಇದೀಗ ರಮೇಶ್ ಅವರು ಯಾವ ರೀತಿ ತೋರಿಸುತ್ತಾರೆ ಮತ್ತು ಈ ಚಿತ್ರಗಳ ಮುಂದುವರಿದ ಭಾಗ ತೋರಿಸುತ್ತಾರಾ? ಅನ್ನೋದು ಸದ್ಯಕ್ಕಿರುವ ಕುತೂಹಲ.
ರಾಜೀವ್ ಗಾಂಧಿ ಜನ್ಮದಿನವಾದ ಆಗಸ್ಟ್ 20 ರಿಂದ 'ಅಸ್ಫೋಟ' ಚಿತ್ರದ ಚಿತ್ರೀಕರಣ ನಡೆಸಲು ನಿರ್ದೇಶಕ ರಮೇಶ್ ಅವರು ತಯಾರಿ ನಡೆಸುತ್ತಿದ್ದು, ರಾಜೀವ್ ಗಾಂಧಿ ಹತ್ಯೆಯಾದ ಮೇ 21ರಂದು (ಮುಂದಿನ ವರ್ಷ) ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.[ಅಟ್ಟಹಾಸ : ನಿಸ್ಸಂದೇಹವಾಗಿ ಒಳ್ಳೆ ಸಿನಿಮಾ]

ರಾಜೀವ್ ಗಾಂಧಿ ಹತ್ಯೆಗಾಗಿ ನಡೆದ ಸುಮಾರು 110 ದಿನಗಳ ಸಂಚನ್ನು ನಿರ್ದೇಶಕ ರಮೇಶ್ ಅವರು ತಮ್ಮ ಚಿತ್ರದಲ್ಲಿ ಸೆರೆ ಹಿಡಿಯಲಿದ್ದಾರಂತೆ, 1991 ಮೇ 1 ರಂದು ಹಂತಕರು ಭಾರತಕ್ಕೆ ಬಂದಿಳಿಯುತ್ತಾರೆ. ಮೇ 21 ರಂದು ರಾಜೀವ್ ಗಾಂಧಿ ಹತ್ಯೆ ಆಗುತ್ತದೆ. ಮೂರು ತಿಂಗಳ ಒಳಗೆ ಆರೋಪಿಗಳು ಬಂಧನ ಆಗುತ್ತಾರೆ. ತದನಂತರ ಮುಂದೇನಾಗುತ್ತದೆ ಅನ್ನೋದನ್ನ 'ಅಸ್ಫೋಟ' ಸಿನಿಮಾದಲ್ಲಿ ತೋರಿಸಲಾಗುತ್ತದೆ.
ಈ ಸಿನಿಮಾವನ್ನು 4 ಭಾಷೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವ ನಿರ್ದೇಶಕ ಎಲ್ಲಾ ಭಾಷೆಯಲ್ಲೂ ಸ್ಟಾರ್ ನಟರನ್ನೇ ಹಾಕಿಕೊಂಡು ಸಿನಿಮಾ ಮಾಡಲಿದ್ದಾರೆ. ಶಿವರಾಸನ್ ಪಾತ್ರಕ್ಕೆ ರವಿಕಾಳೆ ಆಯ್ಕೆ ಆಗಿದ್ದು, ಮುಂದಿನ ಪಾತ್ರಗಳಿಗೆ ನಟರ ಆಯ್ಕೆಯಲ್ಲಿ ನಿರ್ದೇಶಕರು ತೊಡಗಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರ 'ಆಸ್ಫೋಟ']

ಅಂದಹಾಗೆ ಈ ಮೊದಲು ಹತ್ಯೆಯ ತನಿಖಾಧಿಕಾರಿ ಕಾರ್ತಿಕೇಯನ್ ಅವರ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಣಿಸಿಕೊಳ್ಳಲಿದ್ದಾರೆ ಅಂತ ಸುದ್ದಿಯಾಗಿತ್ತು. ಆದರೆ ದರ್ಶನ್ ಅವರಿಗೆ ಡೇಟ್ ಸಮಸ್ಯೆ ಇರುವುದರಿಂದ ಆ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಅಂತ ಮುಂದಿನ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications











