ಚುನಾವಣೆ ಸೋತ ರಮ್ಯಾಗೆ ನಾಗತಿಹಳ್ಳಿ ಸಲಹೆ
ಜಿದ್ದಾಜಿದ್ದಿನ ಹೋರಾಟದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪರಾಜಯಗೊಂಡ ರಮ್ಯಾಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಲಹೆಯೊಂದನ್ನು ನೀಡಿದ್ದಾರೆ.
ರಮ್ಯಾ ಇನ್ನೂ ಸಿನಿಮಾದಲ್ಲಿ ನಟಿಸಬೇಕಾದವರು. ನಟನೆಯನ್ನು ಆಕೆ ಬಿಡಬಾರದು. ರಾಜಕೀಯ ಮತ್ತು ಸಿನಿಮಾ ರಂಗ ಎರಡನ್ನೂ ಬಿಡಬಾರದೆಂದು ನಾಗತಿಹಳ್ಳಿ ಹೇಳಿದ್ದಾರೆ.
ಸಿನಿಮಾ ಮತ್ತು ರಾಜಕೀಯ ರಂಗವನ್ನು ಬ್ಯಾಲನ್ಸ್ ಮಾಡಿಕೊಂಡು ಮುಂದುವರಿಯಬೇಕು. ಸೋಲು, ಗೆಲುವು ಮನುಷ್ಯನ ಬದುಕಿನಲ್ಲಿ ಸಹಜ. ಯಾವುದಕ್ಕೂ ಧೃತಿಗೆಡದೆ ಬದುಕಿನಲ್ಲಿ ಸೂಕ್ತ ಹೆಜ್ಜೆ ಇಡಬೇಕೆಂದು ನಾಗತಿಹಳ್ಳಿ, ರಮ್ಯಾಗೆ ಸಲಹೆ ನೀಡಿದ್ದಾರೆ.

ಸಿನಿಮಾ ರಂಗವೆಂದರೆ ಬಣ್ಣ ಹಚ್ಚುವುದು, ರಾಜಕೀಯ ರಂಗವೆಂದರೆ ಜನರ ಮಧ್ಯ ಇರಬೇಕಾಗಿರುವುದು. ಎರಡನ್ನೂ ಸಮದೂಗಿಸಿಕೊಂಡು ರಮ್ಯಾ ಮುಂದುವರಿಯಲಿ ಎನ್ನುವುದು ನನ್ನ ಸಲಹೆ ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ಅಮೃತಧಾರೆ ಚಿತ್ರದಲ್ಲಿ ರಮ್ಯಾ ಮನೋಜ್ಞ ಅಭಿನಯ ನೀಡಿದ್ದರು.
ಶಿವರಾಜ್ ಕುಮಾರ್, ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ ಆರ್ಯನ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ದಿಲ್ ಕಾ ರಾಜ ಮತ್ತು ಕೋಡಿರಾಮಕೃಷ್ಣ ನಿರ್ದೇಶನದ ಚಿತ್ರದಲ್ಲೂ ರಮ್ಯಾ ನಟಿಸುತ್ತಿದ್ದಾರೆ.


Click it and Unblock the Notifications











