'ಲೂಸಿಯಾ' ಪವನ್ ಕಂಡಂತೆ ಭಟ್ಟರ 'ವಾಸ್ತುಪ್ರಕಾರ'
''ವಾಸ್ತುಪ್ರಕಾರ' ಸಿನಿಮಾ ಚೆನ್ನಾಗಿಲ್ಲ. ಕಥೆ ಇಲ್ಲದ ಚಿತ್ರವನ್ನ ಭಟ್ರು ಮಾಡಿದ್ದಾರೆ. ಸಿನಿಮಾ ಬೋರಿಂಗ್ ಆಗಿದೆ'' ಅಂತ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಿನಿ ಪ್ರಿಯರು ಜಾಡಿಸುತ್ತಿದ್ದಾರೆ. ಇನ್ನೂ ವಿಮರ್ಶಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೆಲ್ಲಾ ನೋಡಿ ತಲೆಗೆ ಹುಳ ಬಿಟ್ಟುಕೊಂಡಿದ್ದ ನಿರ್ದೇಶಕ ಪವನ್ ಕುಮಾರ್, 'ವಾಸ್ತುಪ್ರಕಾರ' ಚಿತ್ರವನ್ನ ಕುಟುಂಬದೊಂದಿಗೆ ನೋಡಿಕೊಂಡು ಬಂದಿದ್ದಾರೆ. ಬಂದಮೇಲೆ ಸುಮ್ಮನೆ ಕೂತಿಲ್ಲ, ಒಂದು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಾಕಿದ್ದಾರೆ. ['ವಾಸ್ತುಪ್ರಕಾರ' ಪತ್ರಿಕೆಗಳ ವಿಮರ್ಶಾ ನೋಟ]
ಬಹುನಿರೀಕ್ಷೆಯ ಚಿತ್ರಗಳು ತೆರೆಗೆ ಬಂದಾಗ, ಅದನ್ನೆಲ್ಲಾ ನೋಡಿ ವಿಮರ್ಶೆ ಮಾಡುವ ಹವ್ಯಾಸ ಇಟ್ಟುಕೊಂಡಿರುವ ಪವನ್ ಕುಮಾರ್, ತಮ್ಮ ಗುರು ಯೋಗರಾಜ್ ಭಟ್ ನಿರ್ದೇಶನದ 'ವಾಸ್ತುಪ್ರಕಾರ' ಚಿತ್ರದ ಬಗ್ಗೆ ವಿಮರ್ಶೆ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ....
''ನಾನು ವಾಸ್ತು ಪ್ರಕಾರ ಚಿತ್ರವನ್ನ ನೋಡ್ದೆ. ಎಲ್ಲರೂ ಹೇಳಿದ ಹಾಗೆ, ನನಗೆ ಇರಿಟೇಟ್ ಆಗ್ಲಿಲ್ಲ. ಎಲ್ಲಾ ಕಡೆಯಿಂದ ಫೀಡ್ ಬ್ಯಾಕ್ ಬಂದ ಹಾಗೆ ಇರ್ಲಿಲ್ಲ. ಕೊನೆಯವರೆಗೂ ಇಂಟ್ರೆಸ್ಟಿಂಗ್ ಆಗಿತ್ತು. ನನಗೆ ಸಿನಿಮಾ ಇಷ್ಟ ಆಯ್ತು. ಭಟ್ಟರ ಎಲ್ಲಾ ಚಿತ್ರಕ್ಕಿಂತಲೂ ನನಗೆ ಇದು ತುಂಬಾ ಇಷ್ಟ ಆಯ್ತು. ಸಿನಿಮಾ ಮುಗಿದ್ಮೇಲೆ ನನಗೆ ಜಾಸ್ತಿ ಕಿಕ್ ಸಿಕ್ತು.'' ['ವಾಸ್ತುಪ್ರಕಾರ' ಭಟ್ರಿಗೆ 'ಬಂಪರ್' ಕಲೆಕ್ಷನ್]
''ನೆಗೆಟಿವ್ ಕಾಮೆಂಟ್ಸ್ ಯಾಕೆ ಬಂತು ಅಂತ ಅರ್ಥ ಆಗ್ಲಿಲ್ಲ. ನಾನು ನೋಡಿದ ಸಿನೆಪೊಲೀಸ್ ನಲ್ಲಿ ಜನ ತುಂಬಿದ್ರು. ಎಲ್ಲರೂ ಎಂಜಾಯ್ ಮಾಡ್ತಿದ್ರು. 'ವಾಸ್ತು' ಕಾನ್ಸೆಪ್ಟ್ ಬಗ್ಗೆ ಭಟ್ಟರು ಹ್ಯಾಂಡಲ್ ಮಾಡಿರುವ ರೀತಿ ನನಗೆ ಇಷ್ಟ ಆಯ್ತು. ಜಗ್ಗೇಶ್ ಮತ್ತು ಅನಂತ್ ನಾಗ್ ಪಾತ್ರಗಳು ಚೆನ್ನಾಗಿವೆ. ಅಪ್ಪ-ಮಗಳ ಸಂಬಂಧವನ್ನ ಅಚ್ಚುಕಟ್ಟಾಗಿ ತೋರಿಸಿದ್ದಾರೆ.''

''ನನಗೆ ಮದುವೆ-ಮಗು ಆಗಿರುವುದರಿಂದ ಸಿನಿಮಾ ನನಗೆ ಕನೆಕ್ಟ್ ಆಗಿರಬಹುದು. ಯುವಕರಿಗೆ ಬಹುಶಃ ಈ ಕಾರಣದಿಂದ ಇಷ್ಟ ಆಗ್ಲಿಲ್ಲ ಅನ್ಸುತ್ತೆ. ಆದ್ರೆ, ಸಿನಿಮಾ ಚೆನ್ನಾಗಿಲ್ಲ ಅನ್ನೋ ತರಹ ಇಲ್ಲ. ಎಲ್ಲರೂ ಖಂಡಿತ ಸಿನಿಮಾ ನೋಡಲೇಬೇಕು.'' ['ವಾಸ್ತು ಪ್ರಕಾರ' ಭಟ್ಟರ ಜೋಳಿಗೆ ತುಂಬಿಸಿದ್ದು ಹೇಗೆ?]
''ನಾನು ಇದನ್ನ ಸಿನಿಮಾ ಪ್ರಚಾರಕ್ಕಂತ ಹೇಳ್ತಿಲ್ಲ. ಭಟ್ಟರ ಜೊತೆ 'ಮನಸಾರೆ', 'ಪಂಚರಂಗಿ' ಸಿನಿಮಾ ಮಾಡಿದ್ದೀನಿ. ನನಗೆ ಅವರು ಗುರುಗಳು. ಆದ್ರೂ, ಅವರ 'ಡ್ರಾಮಾ' ಇಷ್ಟ ಆಗ್ಲಿಲ್ಲ. ಆದ್ರೆ, 'ವಾಸ್ತು ಪ್ರಕಾರ' ಚೆನ್ನಾಗಿದೆ. ಇದರಲ್ಲಿ ಲಾಜಿಕ್ ಇದೆ'' ಅಂತ ವಿಡಿಯೋದಲ್ಲಿ ಪವನ್ ಕುಮಾರ್ ಹೇಳಿದ್ದಾರೆ.
ಪ್ರಮೋಷನ್ ಗಾಗಿ ವಿಡಿಯೋ ಮಾಡದೇ ಇದ್ದರೂ, ಯೂಟ್ಯೂಬ್ ನಲ್ಲಿ ಪವನ್ ಕುಮಾರ್ ವಿಮರ್ಶೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಭಟ್ರ ಯೋಗಾಯೋಗ ಮತ್ತಷ್ಟು ಖುಲಾಯಿಸಬಹುದು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












