ಪರಭಾಷೆಯ ಹೀರೋಗಳಿಂದ ಹೊಡೆತ ತಿಂದು ಬರುವುದು ಬೇಡ: 'ಡಾಲಿ'ಗೆ ರವಿ ಶ್ರೀವತ್ಸ ಕಿವಿಮಾತು
ತೆಲುಗಿನ 'ಪುಷ್ಪ' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವಂತೆ ಕನ್ನಡ ಖ್ಯಾತ ನಟ 'ಡಾಲಿ' ಧನಂಜಯ್ ಅವರಿಗೆ ಆಹ್ವಾನ ಬಂದಿದೆ. ಅಲ್ಲು ಅರ್ಜುನ್ ನಾಯಕರಾಗಿರುವ ಸುಕುಮಾರ್ ನಿರ್ದೇಶನದ ಈ ಚಿತ್ರ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಹ ತಯಾರಾಗಲಿದೆ.
Recommended Video
'ಪುಷ್ಪ' ಚಿತ್ರತಂಡದಿಂದ ಡಾಲಿ ಧನಂಜಯ್ ಅವರಿಗೆ ಬಂದಿರುವ ಪಾತ್ರ ಯಾವ ರೀತಿಯದ್ದು ಎನ್ನುವುದು ಇನ್ನೂ ಖಾತರಿಯಾಗಿಲ್ಲ. ಹಾಗೆಯೇ ಧನಂಜಯ್ ಇನ್ನೂ ಈ ಚಿತ್ರಕ್ಕೆ ಸಹಿ ಹಾಕಿಲ್ಲ. ಲಾಕ್ಡೌನ್ಗೂ ಮುನ್ನ 'ಪುಷ್ಪ' ಚಿತ್ರತಂಡದಿಂದ ಅವರಿಗೆ ಕರೆ ಬಂದಿತ್ತು. ಪಾತ್ರದ ವಿಚಾರವಾಗಿ ಮಾತುಕತೆ ನಡೆದಿತ್ತು. ಆದರೆ ಇನ್ನೂ ಅದು ಅಂತಿಮಗೊಂಡಿಲ್ಲ ಎಂದು ಧನಂಜಯ್ ಹೇಳಿಕೊಂಡಿದ್ದರು. ಕನ್ನಡದಲ್ಲಿ ನಾಯಕರಾಗಿ, ಖಳನಾಯಕರಾಗಿ ಗುರುತಿಸಿಕೊಂಡಿರುವ ಧನಂಜಯ್, ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಭೈರವ ಗೀತಾ' ಚಿತ್ರದ ಮೂಲಕ ತೆಲುಗಿಗೂ ಪರಿಚಯವಾಗಿದ್ದಾರೆ. ಆದರೆ 'ಪುಷ್ಪ'ದಲ್ಲಿ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅದಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮುಂದೆ ಓದಿ...

ರವಿ ಶ್ರೀವತ್ಸ ಬೇಸರ
'ಡಾಲಿ' ಧನಂಜಯ್ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಖಳನಾಯಕನಾಗ ನಟಿಸುವುದಕ್ಕೆ ನಿರ್ದೇಶಕ ರವಿ ಶ್ರೀವತ್ಸ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಸಾಲು ಸಾಲು ಟ್ವೀಟ್ಗಳನ್ನು ಮಾಡಿದ್ದಾರೆ. ನೀವು ಪರಭಾಷೆಯ ಹೀರೋಗಳ ಹತ್ತಿರ ಪೆಟ್ಟು ತಿಂದು ಬರಬೇಕೇ? ಎಂದು ಬೇಸರದಿಂದ ಕೇಳಿದ್ದಾರೆ.

ಒದೆ ತಿಂದು ಬರಬೇಡಿ..
ಎಲ್ಲಾ ನನ್ನ ಹೀರೋಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ.. ಅಭಿನಯ, ಹೆಸರು, ಹಣ, ಕೀರ್ತಿ ಈ ಹಣೆಪಟ್ಟಿ ಹೊಡ್ಕೊಂಡು ದಯಮಾಡಿ ಹೊರ ಭಾಷೆಯಲ್ಲಿ ಅಭಿನಯಿಸಿ, ಅಲ್ಲಿನ ಹೀರೋಗಳ ಕೈಯಲ್ಲಿ ಒದೆ ತಿಂದು ಬರಬೇಡಿ! ಪ್ಲೀಸ್ ಎಂದು ಅವರು ಹೇಳಿದ್ದಾರೆ.

ಹೀರೋಗಳು ಕಾಣದ ದೇವರು...
ಧನಂಜಯ ಅವರೇ ನಿಮ್ಮನ್ನ ಜನ ಪೂಜಿಸ್ತಾರೆ, ಆರಾಧಿಸ್ತಾರೆ, ಪ್ರೀತಿಸ್ತಾರೆ ಅಂದರೆ ಅದರ ಅರ್ಥ ನೀವು ನಮ್ಮಗಳ ಪಾಲಿನ ಹೀರೋಗಳು ಕಾಣದ ದೇವರು ಅಂತ.. ನೀವೇನೆ ಅಭಿನಯಿಸಿ, ಎಷ್ಟೇ ಸ್ಕೋರ್ ಮಾಡಿ ಲಾಸ್ಟ್ climaxನಲ್ಲಿ ನಿಮ್ಮನ್ನ ಅಲ್ಲಿಯವ ಬೆಳ್ಳಿ ಪರದೆಯ ಮೇಲೆ ಏಟು ಹಾಕಿ ತದುಕ್ತಾನೆ ಅಷ್ಟೇತಾನೆ ಕಥೆ? ಎಂದು ಆಕ್ಷೇಪಿಸಿದ್ದಾರೆ.

ಅಲ್ಲೇ ನೂರು ಹೀರೋಗಳಿದ್ದಾರಲ್ಲ...
ನಿಮ್ಮನ್ನ ಪ್ರೀತ್ಸೋ ನಮಗೆ, ನಮ್ಮ ಮಂದಿಗೆ ಬೇಸರ ಆಗಲ್ವಾ? ಆ ಡೈರೆಕ್ಟರ್ಗೆ ಆ ಪಾತ್ರದ ಮೇಲೆ ಅಷ್ಟು ಅಭಿಮಾನ ನಂಬಿಕೆ ಇದ್ಯಾ..ಅಲ್ಲಿನ ಕಲಾವಿದರನ್ನು ಅಪ್ರೋಚ್ ಮಾಡ್ಲಿ! ಧಮ್ಮಿದ್ದಲ್ಲಿ ಓರ್ವ ಹೊಸಬನಿಗೆ ಜನುಮ ಕೊಟ್ಟು ಹುಟ್ಟುಹಾಕಲಿ. ಹೆಸರು ಮಾಡಿದವನೇ ಆ ಪಾತ್ರಕ್ಕೆ ಬೇಕಾ, ಅಲ್ಲೇ ನೂರು ಹೀರೋಗಳು ಇದ್ದಾರೆ ಮಾಡುಸ್ಕೊಳ್ಳಿ!! ಕನ್ನಡಿಗನ್ಯಾಕೆ? ಎಂದು ಕಿಡಿಕಾರಿದ್ದಾರೆ.

ಹೊಡಿಯೋದಾದ್ರೆ ಹೋಗಿ ಹೊಡೆದು ಬನ್ನಿ
ನೀವು ಭೈರವ ಗೀತ ಅಂತ ಸಿನಿಮಾ ಮಾಡಿ ಬಂದ್ರೀ ನಮಗೆ ಹೆಮ್ಮೆ.. ಕಾರಣ, ನೀವು ಹೀರೋ.. ಅಲ್ಲೂ ಇಲ್ಲೂ ಆ ಚಿತ್ರ ಬಿಡುಗಡೆಯಾದ ಎಲ್ಲ ಕಡೇ ನಮ್ಮ ಕನ್ನಡಿಗನೇ ಹೀರೋ.. ಆದರೆ ಇಲ್ಲಿ, ಅವನ್ಯಾರೋ ಹೀರೋ ಅಂತೆ ನಮ್ಮವ ಅವನ ಮುಂದೆ ಸರಿಸಾಟಿಯಾಗಿ ಅಭಿನಯಿಸ್ತಾನಂತೆ, ಅವನು ಹೊಡಿತಾನಂತೆ ನಮ್ಮವ ಹೊಡಿಸ್ಕೋಬೇಕಂತೇ! ಬೇಡಿ.. ಹೊಡಿಯೋದಾದ್ರೆ ಹೋಗಿ ಹೊಡೆದು ಬನ್ನಿ! ಎಂದಿದ್ದಾರೆ.

ನಮಗೇ ನೀವು ಹೊಡೆದುಬಿಡಿ
ಹೊಡೆಸ್ಕೊಳ್ಳೋದಾದ್ರೇ ನೀವು ನಮಗೆ ಹೊಡೆದುಬಿಡಿ. ಪ್ಲೀಸ್ ನಮ್ಮ ರಾಜ್ಯದ ಗೆರೆ ದಾಟೋ ಮುನ್ನ ನಿಮ್ಮನ್ನ ಪ್ರೀತ್ಸೋ ಲಕ್ಷಾಂತರ ಮನಸ್ಸುಗಳನ್ನ ಒಮ್ಮೆ ನೋಡಿ.. ಹಾಗೂ ಹೋಗ್ಲೇಬೇಕು ಅನ್ನೋದಾದ್ರೇ ಹೋಗ್ಬನ್ನಿ ಒಳಿತಾಗಲಿ, ನಿಮ್ಮೆಲ್ಲರನ್ನು ತುಂಬಾ ಪ್ರೀತ್ಸೋದ್ರಿಂದಾ ಬರೆದೆ ಕ್ಷಮೆ ಇರಲಿ ಎಂದು ರವಿ ಶ್ರೀವತ್ಸ ಹೇಳಿದ್ದಾರೆ.


Click it and Unblock the Notifications











