ಮಲ್ಲಿಕಾ ಶೆರಾವತ್ಗೆ ಜೀವ ಬೆದರಿಕೆ ಫೋನ್ಕಾಲ್
ಭನವಾರಿ ದೇವಿ ಪ್ರಕರಣ ಭಾರೀ ವಿವಾದವನ್ನು ಎಬ್ಬಿಸಿದೆ. ರಾಜಸ್ತಾನದ ಜೋಧಪುರ ಜಿಲ್ಲೆಯ ಬಿಲಾರಾ ಪ್ರದೇಶದಿಂದ ಅಪಹರಣಕ್ಕೀಡಾಗಿದ್ದ 36 ವರ್ಷದ ನರ್ಸ್ ಭನವಾರಿ ದೇವಿ 2011ರಲ್ಲಿ ಭೀಕರವಾಗಿ ಹತ್ಯೆಗೀಡಾಗಿದ್ದರು. ರಾಜಕೀಯ ಒಳಸುಳಿಗಳಿರುವ ಈ ಪ್ರಕರಣದಲ್ಲಿ ರಾಜಸ್ತಾನದ ಸಚಿವ ಮಹಿಪಾಲ್ ಮಡೇರ್ನಾ ಅವರು ಸೇರಿದಂತೆ 17 ಜನರನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ.
ಭನವಾರಿ ದೇವಿ ಮತ್ತು ಮಹಿಪಾಲ್ ಅವರೊಂದಿಗೆ ಕಾಮಕ್ರೀಡೆ ನಡೆಸಿದ್ದ ಸಿಡಿಯನ್ನು ಬಳಸಿಕೊಂಡು ಮಹಿಪಾಲ್ ಅವರನ್ನು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಕಾಂಗ್ರೆಸ್ ನಾಯಕ ಮಲ್ಖನ್ ಸಿಂಗ್ ಅವರನ್ನು ಭನವಾರಿ ದೇವಿ ಬ್ಲಾಕ್ಮೇಲ್ ಮಾಡಿ, ಹಲವು ಕೋಟಿ ಡೀಲ್ ಮಾಡಿದ್ದಳು ಎನ್ನಲಾಗಿದೆ. ಈ ಸಿಡಿ ಪತ್ರಕರ್ತರಿಗೆ ಸಿಕ್ಕು ಭಾರೀ ಹಗರಣ ಉಂಟಾಗಿತ್ತು. ನಂತರ ಆಕೆ ಅಪಹರಣಕ್ಕೀಡಾಗಿ ಕೊಲೆಯಾಗಿದ್ದಳು.
ಭಾರೀ ವಿವಾದ ಎಬ್ಬಿಸಿದ್ದ ಈ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಕೆಸಿ ಬೋಕಾಡಿಯಾ ಅವರು ಮಲ್ಲಿಕಾ ಶೇರಾವತ್ ಅವರನ್ನು ಪ್ರಧಾನ ಪಾತ್ರಧಾರಿಯಾಗಿಟ್ಟುಕೊಂಡು 'ಡರ್ಟಿ ಪಾಲಿಟಿಕ್ಸ್' ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಬೋಕಾಡಿಯಾ ಅವರಿಗೆ ಕೂಡ ಅನೇಕ ಬೆದರಿಕೆ ಕರೆಗಳು ಬಂದಿವೆ.
ಕೊಲೆ ಬೆದರಿಕೆ ಕರೆ ಬಂದಿರುವುದನ್ನು ಒಪ್ಪಿಕೊಂಡಿರುವ ಮಲ್ಲಿಕಾ ಶೇರಾವತ್, "ಬೆದರಿಕೆ ಕರೆಯನ್ನು ನನ್ನ ಸಹೋದರ ಸ್ವೀಕರಿಸಿದ್ದರು. ಈ ಚಿತ್ರದಿಂದ ಹೊರಗುಳಿಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಇಂಥ ಬೆದರಿಕೆ ಕರೆಗಳಿಗೆ ಬಗ್ಗುವವಳು ನಾನಲ್ಲ" ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಫೂಲ್ ಬನೆ ಅಂಗಾರೆ, ಆಜ್ ಕಾ ಅರ್ಜುನ್, ಬೋಲ್ಡ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಕೆಸಿ ಬೋಕಾಡಿಯಾ ಅವರು, "ನನಗೆ ಕೂಡ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. ಒಬ್ಬ ಚಿತ್ರನಿರ್ಮಾಪಕನಾಗಿ ಏನು ಮಾಡಬೇಕೆಂದು ನನಗೆ ಗೊತ್ತಿದೆ. ಭನವಾರಿ ದೇವಿ ಪ್ರಕರಣ ನನನ್ನು ತುಂಬಾ ಸೆಳೆದಿದೆ. ನನಗೆ ತಿಳಿದಂತೆ ಚಿತ್ರ ನಿರ್ಮಿಸುತ್ತಿದ್ದೇನೆ. ಇದು ಯಾವುದೇ ವಿವಾದ ಒಳಗೊಂಡಿರದೆ ಅತ್ಯಂತ ಕ್ಲೀನ್ ಚಿತ್ರವಾಗಲಿದೆ. ಇದು ನನ್ನ ಜೀವಮಾನದ ಅತ್ಯುತ್ತಮ ಚಿತ್ರಗಳಲ್ಲೊಂದಾಗಿರಲಿದೆ" ಎಂದಿದ್ದಾರೆ.


Click it and Unblock the Notifications












