ಯಾರೇ ಕೂಗಾಡಲಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಬೇಡ: ರಾಘಣ್ಣ

ಇದೊಂದು ತಮಿಳು ರಿಮೇಕ್ ಚಿತ್ರ. ಪ್ರೇಕ್ಷಕರಿಗೆ ಎರಡೂವರೆ ಗಂಟೆ ಉತ್ತಮ ಮನೋರಂಜನೆ ಕೊಡುವ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ ಎಂದು ರಾಘಣ್ಣ ಹೇಳಿದ್ದಾರೆ.
ಯಾವತ್ತೂ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಂದರೆ ಚಿತ್ರದ ಒಂದಲ್ಲಾ ಒಂದು ಅಂಶಗಳಿಂದ ಪ್ರೇಕ್ಷಕನಿಗೆ ಅಸಮಾಧಾನವಾಗಿರುತ್ತದೆ. ಹಾಗಾಗಿ ಏನೂ ನಿರೀಕ್ಷೆ ಇಟ್ಟುಕೊಳ್ಳದೆ ಚಿತ್ರಮಂದಿರಕ್ಕೆ ಬನ್ನಿ. ನಿಮಗೊಂದು ಉತ್ತಮ ಚಿತ್ರ ನೋಡಿದ ಅನುಭವಾಗುತ್ತದೆ ಎಂದು ರಾಘವೇಂದ್ರ ರಾಜಕುಮಾರ್ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಉತ್ತಮ ಕಥೆಯ ಜೊತೆಗೆ ಬಿಗಿ ನಿರೂಪಣೆ ಚಿತ್ರದಲ್ಲಿದೆ. ತಮಿಳಿನ ನಿರ್ದೇಶಕ ಸಮುದ್ರಕನಿ ನಮ್ಮ ನೆಟಿವಿಟಿಗೆ ತಕ್ಕಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದಾರೆ.
ಮೂಲ ಚಿತ್ರದಲ್ಲಿ ತಮಿಳು ನಟ ಶಶಿಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಪುನೀತ್ ಹಾಗೂ ಅಲ್ಲರಿ ನರೇಶ್ ಪಾತ್ರವನ್ನು ಯೋಗೇಶ್ ಮಾಡಿದ್ದಾರೆ. ಸಾಧು ಕೋಕಿಲಾ ಅವರ ಪಂಚಿಂಗ್ ಕಾಮಿಡಿ ಡೈಲಾಗುಗಳಿವೆ ಎಂದು ರಾಘಣ್ಣ ಹೇಳಿದ್ದಾರೆ.
ಚಾರ್ಮಿಯವರ ಐಟಂ ಹಾಡೊಂದು ಚಿತ್ರದಲ್ಲಿದೆ. ಡಾ. ಗಿರೀಶ್ ಕಾರ್ನಾಡ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಕೆಲವೊಂದು ಸಾಹಸ ದೃಶ್ಯಗಳಿಗೆ ಕತ್ತರಿ ಹಾಕಲು ಆಗಲಿಲ್ಲ. ಸೆನ್ಸಾರ್ ಮಂಡಳಿ ಯಾರೇ ಕೂಗಾಡಲಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್.
ಈ ಹಿಂದೆ ತಮ್ಮ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ 'ಅಣ್ಣಾಬಾಂಡ್' ಚಿತ್ರ ಬಿಡುಗಡೆಯ ಸಮಯದಲ್ಲೂ ರಾಘವೇಂದ್ರ ರಾಜಕುಮಾರ್ ಮತ್ತು ನಿರ್ದೇಶಕ ಸೂರಿ ಅಣ್ಣಾಬಾಂಡ್ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಬೇಡ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಯಾರೇ ಕೂಗಾಡಲಿ ಚಿತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ


Click it and Unblock the Notifications











