2018 ರ ರಾಜ್ಯ ಸಿನಿಮಾ ಪ್ರಶಸ್ತಿ ವಿತರಿಸದಿರಲು ಹೈಕೋರ್ಟ್ ಆದೇಶ
ಆಯ್ಕೆ ಸಮಿತಿಯು ನಿಯಮಗಳನ್ನು ಪಾಲಿಸಿಲ್ಲವಾದ್ದರಿಂದ 2018 ರ ರಾಜ್ಯ ಸಿನಿಮಾ ಪ್ರಶಸ್ತಿಗಳನ್ನು ವಿತರಿಸದಿರುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿರುವ ರಾಜ್ಯ ಹೈಕೋರ್ಟ್, ಮುಂದಿನ ಆದೇಶದ ವರೆಗೆ ಪ್ರಶಸ್ತಿ ವಿತರಣೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
2018 ರಲ್ಲಿ 'ರಾಮನ ಸವಾರಿ'ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿತ್ತು. ಆದರೆ ಈ ಸಿನಿಮಾ ಪ್ರಶಸ್ತಿಗೆ ಸ್ಪರ್ಧೆಯನ್ನೇ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ 'ದೇವಕಿ' ಸಿನಿಮಾದ ಕುಮಾರ್ ಎಸ್ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು.

'ರಾಮನ ಸವಾರಿ' ಸಿನಿಮಾವನ್ನು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ನೋಡಿಯೇ ಇಲ್ಲ, ಆದರೂ ಅದಕ್ಕೆ ಪ್ರಶಸ್ತಿ ಘೋಷಿಸಿದ್ದಾರೆ. ದಯಾಳ್ ಪದ್ಮನಾಭ್ ನಿರ್ದೇಶನದ 'ಆ ಕರಾಳ ರಾತ್ರಿ' ಸಿನಿಮಾ ರೀಮೇಕ್ ಆಗಿತ್ತು. ಹಾಗಿದ್ದರೂ ಅದಕ್ಕೆ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಮಿತಿಯು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ' ಎಂದು ಕುಮಾರ್ ಆರೋಪಿಸಿದ್ದಾರೆ.
ಪ್ರಶಸ್ತಿಗಾಗಿ 'ಪ್ರೊಡಕ್ಷನ್ ಮ್ಯಾನೇಜರ್' ಹೆಸರಿನ ಹೊಸ ವಿಭಾಗವನ್ನೇ ಆಯ್ಕೆ ಸಮಿತಿ ಸೃಷ್ಟಿಸಿದೆ. ಸಮಿತಿಯ ಮುಖ್ಯಸ್ಥರ ಸ್ವಜನಪಕ್ಷಪಾತ ಪ್ರಶಸ್ತಿ ಆಯ್ಕೆಯಲ್ಲಿ ಢಾಳಾಗಿ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದರು. 2018 ರಲ್ಲಿ ಜೋ ಸಿಮನ್ ಅವರ ನೇತೃತ್ವದ ಸಮಿತಿಯು ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.
'ಪ್ರೊಡಕ್ಷನ್ ಮ್ಯಾನೇಜರ್ ರ ಕೆಲಸವೇ ಬೇರೆ ಇರುತ್ತದೆ. ಅವರ ಕೆಲಸ ಸಿನಿಮಾದ 'ಕಲೆ' ಗೆ ಸಂಬಂಧಿಸಿರುವುದಿಲ್ಲ. ನಟ, ತಂತ್ರಜ್ಞರ ಕೆಲಸಕ್ಕಿಂತಲೂ ಬಹಳ ಭಿನ್ನವಾದ ಕೆಲಸ ಅದಾಗಿರುತ್ತದೆ. ಸಿನಿಮಾ ಕೃತಿಗೆ ಅವರ ಕಾಣ್ಕೆ ಇರುವುದಿಲ್ಲ, ಅಂಥಹಾ ವಿಭಾಗವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ನಿರ್ಮಾಪಕ ಕೃಷ್ಣೇಗೌಡ ಹೇಳಿದ್ದಾರೆ.
2018 ರಲ್ಲಿ ದಯಾಳ್ ಪದ್ಮನಾಭ್ ನಿರ್ದೇಶಿಸಿದ್ದ 'ಆ ಕರಾಳ ರಾತ್ರಿ' ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಎರಡನೇ ಸ್ಥಾನ 'ರಾಮನ ಸವಾರಿ', ಮೂರನೇ ಸ್ಥಾನ 'ಒಂದಲ್ಲ ಎರಡಲ್ಲ' ಸಿನಿಮಾಕ್ಕೆ ನೀಡಲಾಗಿದೆ. ಅದೇ ವರ್ಷ ಅತ್ಯುತ್ತಮ ನಟ ಪ್ರಶಸ್ತಿಗೆ 'ಅಮ್ಮನ ಮನೆ' ಸಿನಿಮಾದಲ್ಲಿ ನಟಿಸಿದ್ದ ರಾಘವೇಂದ್ರ ರಾಜ್ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ನಟಿ ಪ್ರಶಸ್ತಿಗೆ 'ಇರುವುದೆಲ್ಲವು ಬಿಟ್ಟು' ಸಿನಿಮಾದ ನಟನೆಗೆ ಮೇಘನಾ ರಾಜ್ ಅವರನ್ನು ಆರಿಸಲಾಗಿತ್ತು. ನಟ ಶ್ರೀನಿವಾಸ ಮೂರ್ತಿ ಅವರಿಗೆ ರಾಜ್ಕುಮಾರ್ ಪ್ರಶಸ್ತಿ, ಪುಟ್ಟಣ ಕಣಗಾಲ್ ಪ್ರಶಸ್ತಿಯನ್ನು ಪಿ ಶೇಷಾದ್ರಿ ಅವರಿಗೆ ಘೊಷಿಸಲಾಗಿತ್ತು.


Click it and Unblock the Notifications











