ಆ ದಿನ ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನ ಬಿಚ್ಚಿಟ್ಟ ದೊಡ್ಡಣ್ಣ!
Recommended Video

ನಟ ಅಂಬರೀಶ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಆ ಕ್ಷಣಕ್ಕೆ ಯಾರಿಗೂ ನಂಬಲು ಆಗಿರಲಿಲ್ಲ. ಸಾಯುವ ಮುನ್ನ ಕೆಲವೇ ಗಂಟೆಗಳ ಹಿಂದೆ ಆರಾಮಾಗಿ ಇದ್ದ ವ್ಯಕ್ತಿಗೆ, ಇದ್ದಕ್ಕಿದ್ದ ಹಾಗೆ ಹೀಗಾದರೆ ಯಾರಿಗೆ ತಾನೇ ಶಾಕ್ ಆಗುವುದಿಲ್ಲ.
ನಟ ದೊಡ್ಡಣ್ಣ ಅವರಿಗೆ ಅಂಬರೀಶ್ ನಿಧನದ ವಾರ್ತೆ ದೊಡ್ಡ ಆಘಾತ ನೀಡಿದೆ. ಯಾವಾಗಲೂ ಅಂಬರೀಶ್ ಜೊತೆಗೆ ಇರುವ ದೊಡ್ಡಣ್ಣ, ಅಂಬಿ ವಿಧಿವಶರಾದ ದಿನವೂ ಅವರ ಜೊತೆಗೆ ಇದ್ದರು. ಅವರೇ ಕೇಳುವಂತೆ ಕೊನೆಯ ಘಳಿಗೆಯವರೆಗೂ ಅವರ ಹತ್ತಿರ ಇರುವ ಭಾಗ್ಯ ದೊಡ್ಡಣ್ಣ ಅವರದ್ದಾಗಿತ್ತು.
ಅಂಬರೀಶ್ ನಿಧನರಾದ ದಿನ ದೊಡ್ಡಣ್ಣ ಸಹ ಆಸ್ಪತ್ರೆಯಲ್ಲಿ ಇದ್ದರು. ಆ ಸಮಯಕ್ಕೆ ಅಲ್ಲಿ ಆದ ಘಟನೆಗಳು ಹಾಗೂ ಅಂಬರೀಶ್ ಅವರ ಜೊತೆಗಿನ ಕೊನೆಯ ಭೇಟಿ ಈ ಎರಡು ವಿಚಾರವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಹಿಂದಿನ ದಿನ ಭೇಟಿಯಾಗಿದ್ದರು
ಅಂಬರೀಶ್ ಅವರ ಆಪ್ತ ಸ್ನೇಹಿತ ಬಳಗದಲ್ಲಿ ಗುರುತಿಸಿಕೊಂಡವರಲ್ಲಿ ನಟ ದೊಡ್ಡಣ್ಣ ಪ್ರಮುಖರು. ಅಂಬರೀಶ್ ಸಾವಿನ ಹಿಂದಿನ ದಿನವೂ ದೊಡ್ಡಣ್ಣ ಅವರನ್ನು ಭೇಟಿ ಮಾಡಿದ್ದರಂತೆ. ಅವರ ಜೊತೆಗೆ ಕುಳಿತು ಊಟ ಮಾಡಿದ್ದರಂತೆ. ಆದರೆ, ಅದೇ ಅವರಿಬ್ಬರ ಜೊತೆಗಿನ ಕೊನೆಯ ಊಟವಾಗಿದೆ.

ರಾಕ್ ಲೈನ್, ದೊಡ್ಡಣ್ಣ, ಅಂಬರೀಶ್
ಆ ದಿನ ಮಧ್ಯಾಹ್ನ 2 ಗಂಟೆಗೆ ಅಂಬರೀಶ್ ಅವರ ಮನೆಯಲ್ಲಿ ರಾಕ್ ಲೈನ್ ವೆಂಕಟೇಶ್ ಇದ್ದರಂತೆ. ಜೊತೆಗೆ ಊಟ ಮಾಡೋಣ ಬಾ ಎಂದು ದೊಡ್ಡಣ್ಣ ಅವರಿಗೆ ಕರೆ ಮಾಡಿದರಂತೆ. ಮೂರು ಜನ ಕೂತು ಒಟ್ಟಿಗೆ ಊಟ ಮಾಡಿದ್ದಾರೆ. ಇಬ್ಬರಿಗೂ ಅದು ತಿನ್ನು... ಇದು ತಿನ್ನು ಅಂತ ಹೇಳಿ ಅಂಬಿಯೇ ಬಡಿಸುತ್ತಿದ್ದರಂತೆ.

ಕನ್ನಡ ರಾಜ್ಯೋತ್ಸವ ಮಾಡಬೇಕು
ಈ ವರ್ಷ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎನ್ನುವುದು ಅಂಬರೀಶ್ ಅವರ ಆಸೆಯಾಗಿತ್ತು. ಕಲಾವಿದ ಸಂಘದ ನಿರ್ಮಾಣ ಆದ ಮೇಲೆ ಮೊದಲ ಕನ್ನಡ ರಾಜ್ಯೋತ್ಸವ ಇದಾಗಿದ್ದು, ಹೋಗಿ ನೋಡಿಕೊಂಡು ಬನ್ನಿ ಎಂದು ರಾಕ್ ಲೈನ್ ಹಾಗೂ ದೊಡ್ಡಣ್ಣರಿಗೆ ಅಂಬಿ ಕಳುಹಿಸಿದ್ದರಂತೆ.

ಸಾಯುವ ಸಮಯ
ಅಂಬಿ ಅವರ ಮಾತಿನಂತೆ ಕಲಾವಿದ ಸಂಘಕ್ಕೆ ರಾಕ್ ಲೈನ್ ಹಾಗೂ ದೊಡ್ಡಣ್ಣ ಹೋಗಿದ್ದಾರೆ. ಅವರು ಅಲ್ಲಿಗೆ ಹೋದ ಅರ್ಧ ಗಂಟೆಗೆ ಒಂದು ಕರೆ ಬಂದಿದೆ. ಅಂಬರೀಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಬೇಗ ಬನ್ನಿ ಎಂದ ತಕ್ಷಣ ಅಲ್ಲಿಂದ ದೊಡ್ಡಣ್ಣ ಮತ್ತು ರಾಕ್ ಲೈನ್ ಇಬ್ಬರು ಆತುರದಲ್ಲಿ ಬಂದಿದ್ದಾರೆ.

ಆಸ್ಪತ್ರೆಯಲ್ಲಿ ನಡೆದ ಘಟನೆ
ಆಸ್ಪತ್ರೆಗೆ ಬಂದ ದೊಡ್ಡಣ್ಣರಿಗೆ ಒಂದು ಆಘಾತದ ಸುದ್ದಿ ಕಾದಿತ್ತು. ಡಾಕ್ಟರ್ 'Sorry ಅವರನ್ನ ಉಳಿಸಿಕೊಳ್ಳಲು ಆಗಲಿಲ್ಲ' ಎಂದರಂತೆ. ಆ ಮಾತು ಕೇಳಿದ ದೊಡ್ಡಣ್ಣರಿಗೆ ಸಿಡಿಲು ಬಡಿದಂತೆ ಆಗಿದೆ. ಆ ಕ್ಷಣಕ್ಕೆ ಏನು ಮಾಡಬೇಕು, ಏನು ಹೇಳಬೇಕು ಯಾವುದು ತಿಳಿಯದೆ ಕಣ್ಣೀರು ಹಾಕಿದರಂತೆ.


Click it and Unblock the Notifications











