ಅಭಿಮಾನಿಗಳಿಂದ 'ಅಭಿಮಾನ'ದಲ್ಲೇ ಭದ್ರವಾದ ವಿಷ್ಣು ನೆಲೆ!
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಗೊಂದಲದ ಗೂಡಾಗಿದೆ. ಸ್ಮಾರಕ ಶಿಫ್ಟ್ ಬಗ್ಗೆ ಭಾರತಿ ವಿಷ್ಣುವರ್ಧನ್ ನೀಡಿದ ಹೇಳಿಕೆ ವಿಷ್ಣು ಅಭಿಮಾನಿಗಳಿಗೆ ಬೇಸರ ತರಿಸಿದೆ. ಕೊನೆ ಅಭಿಮಾನಿಗಳೇ ಈಗ ವಿಷ್ಣು ಸ್ಮಾರಕವನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಡಾ. ಭಾರತಿ ಅವರ ಮನ ಓಲೈಸಿದ್ದಾರೆ.
ವಿಷ್ಣು ಸಮಾಧಿ ವಿಚಾರದಲ್ಲಿ ಅವನ ಕುಟುಂಬದ ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತಿ ನಿರ್ಧಾರವೇ ಅಂತಿಮ. ಅವರು ಹೇಗೆ ಹೇಳುತ್ತಾರೋ ಹಾಗೆ ಎಂದು ಅಂಬರೀಷ್ ಕೂಡಾ ಈ ವಿಷಯದಲ್ಲಿ ಮುತುವರ್ಜಿ ತೋರದೆ ಕೈಚೆಲ್ಲಿದರು. ಈಗ ವಿಷ್ಣು ಅಭಿಮಾನಿಗಳಾದ ನಿರ್ಮಾಪಕ ಕೊಬ್ರಿ ಮಂಜು, ಬಿ ವಿಜಯಕುಮಾರ್ ಹಾಗೂ ವಿಷ್ಣು ಫ್ಯಾನ್ಸ್ ಅಸೋಸಿಯೇಷನ್ಸ್ ಸದಸ್ಯರು ಈಗ ವಿಷ್ಣು ಸ್ಮಾರಕದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.[ಬದುಕಿದ್ದಾಗ, ಸತ್ತಮೇಲೂ ವಿಷ್ಣುಗೆ ಅನ್ಯಾಯ: ಅಂಬಿ]
ವಿಷ್ಣು ಸ್ಮರಣೆ:ಡಾ.ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ. ಮೊಟ್ಟ ಮೊದಲು ಬಾಲನಟರಾಗಿ ವಂಶವೃಕ್ಷ ದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ನಂತರ ನಾಗರಹಾವು ಚಿತ್ರದ ಮೂಲಕ ನಾಯಕ ನಟರಾದರು. ಆಪ್ತರಕ್ಷಕ ಚಿತ್ರದವರೆಗೂ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ ಹಿರಿಮೆ ಇವರದು.
ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ ಹೆಗ್ಗಳಿಕೆ ಇವರದು. ಈ ಮಹಾನ್ ಕಲಾವಿದ ಕನ್ನಡ ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಯ ಕುರುಹಾಗಿ ಕರ್ನಾಟಕ ಸರ್ಕಾರವು ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುತ್ತಿದೆ.

ಬೆಂಗಳೂರಲ್ಲಿ ವಿಷ್ಣು ಸ್ಮಾರಕ ಎಲ್ಲಿದೆ?
ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮ (ಸರ್ವೆ ನಂ.22)ದಲ್ಲಿ 108 ಎಕರೆಗೂ ಅಧಿಕ ವಿಸ್ತೀರ್ಣದ ಜಾಗವಿದೆ. ಸರಕಾರದ ಆದೇಶದಂತೆ 1935ರ ಡಿ.14ರಂದು ಸರಕಾರಿ ಮುಫತ್ ಕಾವಲಿಗೆ 78 ಎಕರೆ, 18 ಗುಂಟೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಉಳಿದ 29 ಎಕರೆ ಪ್ರದೇಶ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ. ಈ ಪೈಕಿ ಎರಡು ಎಕರೆ ಭೂಮಿಯನ್ನು ಡಾ. ವಿಷ್ಣು ಸ್ಮಾರಕ ನಿರ್ಮಾಣಕ್ಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ.

ಮೈಸೂರಲ್ಲೂ ವಿಷ್ಣು ನೆನಪಿನಲ್ಲಿ ಸ್ಮಾರಕ
ಬೆಂಗಳೂರಿನ ವಿಷ್ಣು ಸ್ಮಾರಕ ಪ್ರದೇಶದಲ್ಲಿ ಸಭಾಂಗಣ, ಗ್ರಂಥಾಲಯ ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸ್ಮಾರಕ ನಿರ್ಮಾಣಕ್ಕೆ ಬಜೆಟ್ನಲ್ಲಿ ರು.11 ಕೋಟಿ ಅನುದಾನ ಮೀಸಲಿಡಲಾಗಿದೆ. ಇದೇ ರೀತಿ ಮೈಸೂರಿನಲ್ಲೂ ವಿಷ್ಣು ಹೆಸರಿನಲ್ಲಿ ಫಿಲಂ ಇನ್ಸ್ಟಿಟ್ಯೂಟ್ ಸ್ಥಾಪಿಸಲು ಅಭಿಮಾನಿ ನಿರ್ಮಾಪಕರುಗಳು ಮುಂದಾಗಿದ್ದಾರೆ ಇದರಿಂದ ಭಾರತಿ ಅವರು ಮನಸ್ಸು ಬದಲಾಯಿಸಿದ್ದಾರೆ.

ಅಭಿಮಾನ್ ಸ್ಟುಡಿಯೋ ಕಾನೂನಿನ ತೊಡಕಿದೆ
ಅಭಿಮಾನ್ ಸ್ಟುಡಿಯೋಕ್ಕೆ ಸಂಬಂಧ ಪಟ್ಟ ಜಾಗ ತಕರಾರಿನಲ್ಲಿದೆ, ವಿಷ್ಣುವರ್ಧನ್ ಸಮಾಧಿ ಜೊತೆಗೆ ಧ್ಯಾನಮಂದಿರ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಜಾಗ ಸಿಕ್ಕಿಲ್ಲ. ಕಾನೂನಿನ ತೊಡಕು ಪರಿಹಾರ ಸಿಗಬೇಕಾದರೆ ಸರ್ಕಾರವೇ ಮುತುವರ್ಜಿ ವಹಿಸಿ ಏನಾದರೂ ಮಾಡಬೇಕು ಎಂದು ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಸನ್ನ ಹೇಳಿದ್ದಾರೆ.

ನಿರ್ಮಾಪಕ ಕೆ . ಮಂಜು ಭರವಸೆ
ನಿರ್ಮಾಪಕ ಕೆ . ಮಂಜು, ಕೆಎಫ್ ಸಿಸಿ ಮಾಜಿ ಅಧ್ಯಕ್ಷ ಬಿ ವಿಜಯ್ ಕುಮಾರ್, ವಿಷ್ಣು ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಸನ್ನ ಅವರು ಸ್ಮಾರಕದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಧ್ಯಾನಮಂದಿರ, ಸಮಾಧಿ ಖರ್ಚು ವೆಚ್ಚ ವಹಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಫಿಲಂ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಿರ್ಮಿಸುತ್ತಿದ್ದಾರೆ. ವಿಷ್ಣು ಅಭಿಮಾನಿಗಳಿಗೆ ಈ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಿದ್ದಾರೆ.


Click it and Unblock the Notifications











