ಪೂಜಾಗಾಂಧಿ ವಿರುದ್ಧ ಪೊಲೀಸ್ ಕಂಪ್ಲೇಂಟ್
ನಟಿ ಪೂಜಾಗಾಂಧಿ ಹಾಗೂ ಅವರ ತಂದೆ ಪವನ್ ಕುಮಾರ್ ಗಾಂಧಿ ವಿರುದ್ಧ ಜೀವ ಬೆದರಿಕೆ ದೂರನ್ನು ಡಾ.ಕಿರಣ್ ಎಂಬುವವರು ಬೆಂಗಳೂರು ಸುಬ್ರಹ್ಮಣ್ಯಪುರಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ (ಡಿಸೆಂಬರ್ 21) ದಾಖಲಿಸಿದ್ದಾರೆ. ಪ್ರಕರಣದ ಸಂಪೂರ್ಣ ವಿವರಗಳು ಹೀಗಿವೆ...
ರಿಯಲ್ ಎಸ್ಟೇಟ್ ಉದ್ಯಮಿ ಆನಂದಗೌಡ ಜೊತೆಗಿನ ತನ್ನ ಮದುವೆ ಸಂಬಂಧ ಮುರಿದುಬೀಳಲು ಡಾ.ಕಿರಣ್ ಅವರೇ ಕಾರಣ ಎಂದು ಪೂಜಾಗಾಂಧಿ ಆರೋಪಿಸಿ ತಮಗೆ ಬೆದರಿಕೆ ಕರೆ ಮಾಡಿದ್ದಾರೆ. ಅವರ ತಂದೆಯ ಮೊಬೈಲ್ ನಿಂದ ನನಗೆ 10 ರಿಂದ 20 ಬೆದರಿಕೆ ಕರೆಗಳು ಬಂದಿವೆ ಎಂದು ಡಾ.ಕಿರಣ್ ಆರೋಪಿಸಿದ್ದಾರೆ.

ಡಾ.ಕಿರಣ್ ಪರ ವಕೀಲರು ಏನು ಹೇಳುತ್ತಾರೆ?
ಡಾ.ಕಿರಣ್ ಪರ ವಕೀಲರಾದ ಆರ್.ಎಲ್.ಎನ್ ಮೂರ್ತಿ ಅವರು ಹೇಳುವುದೇನೆಂದರೆ...ಪೂಜಾಗಾಂಧಿ ಅವರ ಮದುವೆ ಕ್ಯಾನ್ಸಲ್ ಅದ ಬಳಿಕ ಅಂದೇ ಸಂಜೆ ಅವರು ಕಿರಣ್ ಗೆ ಕರೆ ಮಾಡಿ, ಇದರಲ್ಲಿ ನಿನ್ನ ಕೈವಾಡವಿದೆ ಎಂದು ಬೆದರಿಕೆ ಹಾಕಿದ್ದಾರೆ. ಅವರ ತಂದೆಯವರ ಮೊಬೈಲ್ ನಿಂದ "I Will Kill You" ಎಂದು ಎಸ್ಎಂಎಸ್ ಕೂಡ ಬಂದಿದೆ ಕಳುಹಿಸಿದ್ದಾರೆ ಎಂದಿದ್ದಾರೆ.

ಡಾ.ಕಿರಣ್ ಒಬ್ಬ ಸೈಕೋಪಾಥ್ ಎಂದ ಪೂಜಾ
ತಮ್ಮ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿರುವ ಡಾ.ಕಿರಣ್ ಎಂಬುವವರು ಯಾರು ಎಂಬುದು ನನಗೆ ಗೊತ್ತಿಲ್ಲ. ಸುಳ್ಳು ಹೇಳಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಕಿರಣ್. ಅವರು ಹೆಂಗಸಿನಂತೆ ವರ್ತಿಸುವುದನ್ನು ಬಿಟ್ಟು ಗಂಡಸಿನಂತೆ ನಡೆದುಕೊಳ್ಳಲಿ. ಕಿರಣ್ ಅವರಿಂದಲೇ ನನಗೆ ಬೆದರಿಕೆ ಕರೆ ಬಂದಿದೆ. ಮಹಿಳಾ ಸಂಘಟನೆಗಳು ಈತನಿಗೆ ಹೊಡೆಯಬೇಕು. ಈತ ಒಬ್ಬ ಸೈಕೋಪಾಥ್ ಎಂದಿದ್ದಾರೆ ಪೂಜಾಗಾಂಧಿ.

ನನಗೂ ಕಿರಣ್ ಅವರಿಗೂ ಸಂಬಂಧವಿಲ್ಲ: ಆನಂದ
ನನಗೂ ಕಿರಣ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಘಟನೆಯಲ್ಲಿ ನನನ್ನು ಯಾಕೆ ಎಳೆಯುತ್ತಿದ್ದಾರೋ ಗೊತ್ತಿಲ್ಲ. ನಾನು ಮದುವೆ ಕ್ಯಾನ್ಸಲ್ ಮಾಡಿಕೊಳ್ಳಲು ಪೂಜಾಗಾಂಧಿ ಅವರ ತಾಯಿಯೇ ಕಾರಣ. ಈಗಲೂ ಪೂಜಾ ಅವರ ಮೇಲೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ನಿಜವಾಗಿಯೂ ಈ ಕಿರಣ್ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ. "She is wonderful girl and wonderful human being" ಎಂದು ಮತ್ತೊಮ್ಮೆ ಪೂಜಾಗಾಂಧಿ ಅವರನ್ನು ಹೊಗಳಿದ್ದಾರೆ.

ಇಬ್ಬರೂ ಸೇರಿಯೇ ಈ ನಾಟಕ ಆಡುತ್ತಿದ್ದಾರೆ
ಆನಂದಗೌಡ ಹಾಗೂ ಡಾ.ಕಿರಣ್ ಇಬ್ಬರೂ ಸೇರಿಯೇ ಈ ನಾಟಕ ಆಡುತ್ತಿದ್ದಾರೆ ಎಂದು ಪೂಜಾಗಾಂಧಿ ಅವರ ತಾಯಿ ಜ್ಯೋತಿ ಗಾಂಧಿ ಅವರು ಆರೋಪಿಸಿದ್ದಾರೆ. ಮದುವೆ ನಿಶ್ಚಿತಾರ್ಥ ಕ್ಯಾನ್ಸಲ್ ಆಗಲೂ ಇವರೇ ಕಾರಣ. ಈ ಘಟನೆಯಲ್ಲಿ ಇಬ್ಬರ ಕೈವಾಡವೂ ಇದೆ ಎಂದು ಜ್ಯೋತಿ ಅವರು ಆರೋಪಿಸಿದ್ದಾರೆ.

ಪೂಜಾಗಾಂಧಿ ಅವರ ತಂದೆ ಏನು ಹೇಳುತ್ತಾರೆ?
ಇದೊಂದು ಫ್ರೆಂಡ್ಲಿ ಮೆಸೇಟ್ ಅಷ್ಟೇ. ಅದನ್ನು ತಮಾಷೆಗಾಗಿ ಕಳುಹಿಸಿದ್ದು. ಇವರಿಬ್ಬರೂ ಸೈಕೋಗಳು. ಇವರಿಬ್ಬರೂ ಇಷ್ಟು ದಿನ ಏಕೆ ಸುಮ್ಮನಿದ್ದರು. ಈಗ ಏಕೆ ಈ ಮೆಸೇಜ್ ಇಟ್ಟುಕೊಂಡು ನಾಟಕ ಮಾಡುತ್ತಿದ್ದಾರೆ. ಸಂಪೂರ್ಣ ಎಸ್ಎಂಎಸ್ ತೋರಿಸಿದರೆ ವಿಷಯ ನಿಮಗೇ ಅರ್ಥವಾಗುತ್ತದೆ ಎಂದಿದ್ದಾರೆ ಪೂಜಾಗಾಂಧಿ ಅವರ ತಂದೆ ಪವನ್ ಕುಮಾರ್ ಗಾಂಧಿ.
"ಪೂಜಾ ಅವರ ತಂದೆ ಪವನ್ ಕುಮಾರ್ ಗಾಂಧಿ ಅವರ ಮೊಬೈಲ್ ನಿಂದ ತಮಗೆ "I Will Kill You" ಎಂಬ ಮೆಸೇಜ್ ಬಂದಿದೆ. ಇದಿಷ್ಟೇ ಅಲ್ಲದೆ ನನ್ನನ್ನು ಕೊಲೆ ಮಾಡಿಸಲು ಪೂಜಾ ಅವರು ಸುಪಾರಿಯನ್ನೂ ಕೊಟ್ಟಿದ್ದಾರೆ" ಎಂದು ಡಾ.ಕಿರಣ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅವರು ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿದ್ದಾರೆ.


Click it and Unblock the Notifications











