ಮಹಿಳಾ ಸಾಧಕಿಯರಿಗೆ ಡಾ.ಪಾರ್ವತಮ್ಮ ರಾಜ್ ಕುಮಾರ್ ಪ್ರಶಸ್ತಿ
ಕನ್ನಡ ಚಲನಚಿತ್ರ ರಂಗದಲ್ಲಿ ಸಾಧನೆಗೈದ ಮಹಿಳೆಯರಿಗೆ ಡಾ.ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಒಂದು ಲಕ್ಷ ರೂ ಮೊತ್ತದ ಪ್ರಶಸ್ತಿ ಸ್ಥಾಪಿಸುವ ಇಂಗಿತವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ವ್ಯಕ್ತಪಡಿಸಿದ್ದಾರೆ.

ಇಂದು(ಜೂನ್ 8) ಬೆಂಗಳೂರಿನ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 'ಡಾ. ಪಾರ್ವತಮ್ಮ ರಾಜ್ ಕುಮಾರ್ ಒಂದು ನೆನಪು' ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ವಿ.ರಾಜೇಂದ್ರಸಿಂಗ್ ಬಾಬು ರವರು, 'ಭಾರತ ಚಲನಚಿತ್ರ ರಂಗದಲ್ಲಿ 80 ಸಿನಿಮಾಗಳನ್ನು ನಿರ್ಮಿಸಿ ಇತಿಹಾಸ ಬರೆದಿರುವ ಏಕೈಕ ನಿರ್ಮಾಪಕಿ ಪಾರ್ವತಮ್ಮ. ಕನ್ನಡ ಚಲನಚಿತ್ರ ರಂಗಕ್ಕೆ ಅವರ ಕೊಡುಗೆ ಅಪಾರ ಹಾಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗೆ ನೀಡಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು' ಎಂದು ಹೇಳಿದರು.

ಕನ್ನಡ ಚಿತ್ರರಂಗದ ದೊಡ್ಡಮನೆ ಎಂದೇ ಹೆಸರಾದ ಡಾ.ರಾಜ್ ಕುಮಾರ್ ಕುಟುಂಬ ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸಾಕ್ಷಿಯಾಗಿ ನಿಂತ ಆಲದಮರವಾಗಿದ್ದು, ಇಂದು ನಮ್ಮ ಕನ್ನಡ ಚಿತ್ರರಂಗ ಈ ಮಟ್ಟಕ್ಕೆ ಬೆಳೆಯಲು ಪಾರ್ವತಮ್ಮ ರಾಜ್ ಕುಮಾರ್ ಎಂದರೆ ತಪ್ಪಾಗಲಾರದು. ನಿರ್ಮಾಪಕರು ಸಾಹಿತ್ಯ ಓದುವುದನ್ನು ರೂಢಿಸಿಕೊಂಡರೆ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ದೊಡ್ಡ ನಮನ ಸಲ್ಲಿಸಿದಂತೆ, ಅತ್ಯುತ್ತಮ ಓದುಗರಾಗಿದ್ದರು. ಅತ್ಯುತ್ತಮ ಸಾಹಿತ್ಯದ ಕೃತಿಗಳನ್ನು ಚಲನಚಿತ್ರಗಳಾಗಿ ನಿರ್ಮಿಸಿದ ಕೀರ್ತಿ ಅವರದ್ದು ಎಂದು ಹೇಳುತ್ತಾ ರಾಜೇಂದ್ರಸಿಂಗ್ ಬಾಬು ಸ್ಮರಿಸಿದರು.

ಆಶಯ ಭಾಷಣ ಮಾಡಿದ ಸಾಹಿತಿ ಹಾಗೂ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ ಪಾರ್ವತಮ್ಮನವರ ವ್ಯಕ್ತಿತ್ವದಲ್ಲಿ ನಗರ ಮತ್ತು ಹಳ್ಳಿ ಎರಡೂ ಇತ್ತು. ಅವರೊಬ್ಬ ನಿರ್ಮಾಪಕಿಯಾಗಿ ಯಶಸ್ವಿಯಾಗಲು ನಗರ ವ್ಯಕ್ತಿತ್ವ ಹಾಗೂ ಕೂಡು ಕುಟುಂಬವನ್ನು ಮುನ್ನೆಡೆಸುತ್ತಾ ಡಾ.ರಾಜ್ ಅವರ ಬೆನ್ನೆಲುಬಾಗಿ ನಿಂತಿದ್ದ ಅವರಲ್ಲಿ ಹಳ್ಳಿಯ ಮುಗ್ಧ ಹೆಣ್ಣು ಮಗಳಿದ್ದಳು. ರಾಜ್ ಕುಮಾರ್ ಪ್ರಭಾವಳಿ ಪಾರ್ವತಮ್ಮ ಅವರಲ್ಲಿತ್ತು. ಅದನ್ನು ಮೀರಿ ಅದರ ಆಚೇ ಒಬ್ಬ ನಿರ್ಮಾಪಕಿತಯಾಗಿ ಕನ್ನಡ ಚಲನಚಿತ್ರರಂಗದ ಮಹಿಳಾ ಶಕ್ತಿಯಾಗಿ ಬೆಳೆದಿದ್ದು ಅದು ಅವರತನ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಒಬ್ಬಳು ಬೆಳೆಯುವುದು ಕಷ್ಟಕರ. ಅಂತಹದರಲ್ಲಿ ಅವರು 80 ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದು ಒಂದು ಸಾಧನೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಮಾತನಾಡಿ ಚಲನಚಿತ್ರ ರಂಗಕ್ಕೆ ರಾಜ್ ಕುಮಾರ್ ಅವರನ್ನು ಕೊಡುಗೆ ಕೊಟ್ಟವರು ಡಾ. ಪಾರ್ವತಮ್ಮ ರಾಜ್ ಕುಮಾರ್ ಅವರು ಎಂದರೆ ಅತಿಶಯೋಕ್ತಿಯಾಗಲಾರದು. ಬೇರೊಬ್ಬ ಯಾವ ನಟರ ಈ ತರಹದ ಕುಟುಂಬವನ್ನು ನಾನು ನೋಡಿಲ್ಲ, ಕೌಟುಂಬಿಕ ಬಾಂಧವ್ಯಕ್ಕೆ ಮಾದರಿ ಪಾರ್ವತಮ್ಮ ಅವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬ ಸದಸ್ಯರು ಹಾಗೂ ಚಲನಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


Click it and Unblock the Notifications











