ಅಪ್ಪು ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಿದ ದೊಡ್ಮನೆ ಕುಟುಂಬ
ಪುನೀತ್ ರಾಜ್ಕುಮಾರ್ ಸಾವು ನಿಜಕ್ಕೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಹೌದು. ಪುನೀತ್ ನಿಧನಕ್ಕೆ ಸಾಕಷ್ಟು ಮಂದಿ ಕಂಬನಿ ಮಿಡಿದಿದ್ದಾರೆ. ಈಗಲೂ ಕೆಲವರು ಇದು ಕೆಟ್ಟ ಕನಸು ಎಂದೇ ನಂಬುತ್ತಿದ್ದಾರೆ. ಪುನೀತ್ ಇನ್ನು ನಮ್ಮೊಂದಿಗೆ ಇದ್ದಾರೆ, ಸಿನಿಮಾಗಳಲ್ಲಿ ನಟಿಸುತ್ತಾರೆ, ಅಭಿಮಾನಿಗಳನ್ನು ರಂಜಿಸುತ್ತಾರೆ ಅಂತೆಲ್ಲಾ ಇನ್ನು ನಂಬಿಕೊಂಡೆ ಇದ್ದಾರೆ. ಹೀಗೆ ಪುನೀತ್ ಸಾವು ಅರಗಿಸಿಕೊಳ್ಳಲು ಇನ್ನೂ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳಂತೂ ಪುನೀತ್ ನಿಧನಕ್ಕೆ ಈಗಲೂ ಅನ್ನ ನೀರು ಬಿಟ್ಟು ದುಃಖಿಸುತ್ತಿದ್ದಾರೆ. ಅವರ ನೆನಪಲ್ಲೇ ಸದಾ ಜೀವಿಸುತ್ತಿದ್ದಾರೆ.
ಪುನೀತ್ ಇದ್ದಾಗ ಅಭಿಮಾನಿಗಳನ್ನು ಯಾವತ್ತೂ ನೋಯಿಸಿರಲಿಲ್ಲ. ಮನೆಯ ಬಳಿ ಬರುವ ಅದೆಷ್ಟೋ ಅಭಿಮಾನಿಗಳನ್ನು ಪ್ರೀತಿಯಿಂದಲೇ ಮಾತನಾಡಿಸಿ ಕಳುಹಿಸಿಕೊಡುತ್ತಿದ್ದರು. ಪುನೀತ್ ಎಲ್ಲೇ ಹೋಗಲಿ ಬರಲಿ ಅಲ್ಲಿ ಅಭಿಮಾನಿಗಳ ಸಾಗರವೇ ತುಂಬಿಕೊಳ್ಳುತ್ತಿತ್ತು. ಹೀಗೆ ಪುನೀತ್ ಅವರ ಸರಳತೆ, ಆತ್ಮೀಯತೆಗೆ ಫ್ಯಾನ್ಸ್ ಕೂಡ ಮಾರುಹೋಗಿದ್ದುಂಟು. ಪುನೀತ್ ಸಾವಿನ ಸುದ್ದಿ ತಡೆದುಕೊಳ್ಳಲಾಗದೆ ಒಂದಷ್ಟು ಅಭಿಮಾನಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ರಾಜ್ ಕುಟುಂಬ ಅಭಿಮಾನಿಗಳನ್ನು ಯಾವತ್ತೂ ಕಡೆಗಣಿಸಿಲ್ಲ. ಇದೀಗ ಪುನೀತ್ ಸಾವಿನ 11ನೇ ದಿನದ ಕಾರ್ಯದ ಬಳಿಕ 12ನೇ ದಿನ ಅಭಿಮಾನಿಗಳಿಗೆ ಅನ್ನದಾನವನ್ನು ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪುನೀತ್ ಸಾವನ್ನಪ್ಪಿ 5ನೇ ದಿನಕ್ಕೆ ಪುನೀತ್ ಕುಟುಂಬಸ್ಥರು, ಸ್ನೇಹಿತರು ಮತ್ತು ಗಣ್ಯರ ಸಮ್ಮುಖದಲ್ಲಿ ಹಾಲು ತುಪ್ಪ ಶಾಸ್ತ್ರವನ್ನು ನೆರವೇರಿಸಿತ್ತು. ಕಂಠೀರವ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಹಾಲು ತುಪ್ಪ ಕಾರ್ಯಕ್ಕೆ ಅಭಿಮಾನಿಗಳಿಗೆ ಅವಕಾಶ ಇರಲಿಲ್ಲ. ಹಾಗೇ ನೆನ್ನೆಯಿಂದ ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋಗೆ ತೆರಳಲು ಅವಕಾಶ ಮಾಡಿಕೊಡಲಾಗಿದ್ದು, ಜನಸಾಗರವೇ ಹರಿದು ಬರುತ್ತಿದೆ. ಹೀಗಾಗಿ ಪುನೀತ್ ಅವರ 11ನೇ ದಿನದ ಶಾಸ್ತ್ರವನ್ನು ಮಾಡಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದು, ನವೆಂಬರ್ 8ಕ್ಕೆ ಈ ಕಾರ್ಯ ನೆರವೇರಲಿದೆ. ಅಂದು ಕೂಡ ಕೇವಲ ಕುಟುಂಬಸ್ಥರಿಗಷ್ಟೇ ಸಮಾಧಿ ಬಳಿ ಸೇರಲು ಅವಕಾಶ ಇದೆ. 11ನೇ ದಿನ ಕಾರ್ಯದ ನಂತರ ಅಂದರೇ ನವೆಂಬರ್ 9ಕ್ಕೆ ಅಭಿಮಾನಿಗಳಿಗೆ ಅನ್ನದಾನ ಮಾಡಲು ರಾಜ್ ಕುಟುಂಬ ತೀರ್ಮಾನಿಸಿದೆ.

ನಗರದ ಪ್ಯಾಲೇಸ್ ಗ್ರೌಂಡ್ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬರುವಂತಹ ಎಲ್ಲಾ ಅಭಿಮಾನಿಗಳಿಗೂ ಅಂದು ಅನ್ನದಾನ ನೆರವೇರಲಿದೆ. ಬೆಳಗ್ಗೆ 12 ಗಂಟೆಯಿಂದ ಅನ್ನದಾನ ಆರಂಭವಾಗಲಿದ್ದು, ಅಂದು ಪುನೀತ್ ರಾಜ್ಕುಮಾರ್ ಅವರಿಗೆ ಪುಷ್ಪನಮನ ಕೂಡ ಸಲ್ಲಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅಂದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಶಾಂತ ರೀತಿಯಾಗಿ ನಡೆದುಕೊಳ್ಳಬೇಕು ಎಂದು ದೊಡ್ಮನೆ ಕುಟುಂಬ ಮನವಿ ಮಾಡಿಕೊಂಡಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನವೆಂಬರ್ 16ರಂದು ಪುನೀತ್ ನಮನ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರರಂಗವೇ ಒಂದಾಗುತ್ತಿದೆ. ಎಲ್ಲರು ಸೇರಿ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಾ.ರಾ.ಗೋವಿಂದು, ನವೆಂಬರ್ 16 ರಂದು ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರೋದ್ಯಮದ ಎಲ್ಲಾ ಪ್ರಮುಖರು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಚಿವ ಸಂಪುಟ ಆಗಮಿಸಲಿದ್ದಾರೆ ಎಂದಿದ್ದಾರೆ.
ನವೆಂಬರ್ 16 ರಂದು ಪುನೀತ್ ನಮನ ಕಾರ್ಯಕ್ರಮದಲ್ಲಿ ಪುನೀತ್ ಗೀತ ನಮನ ಸಹ ಇರಲಿದೆ. ನಾಗೇಂದ್ರ ಪ್ರಸಾದ್ ಅಪ್ಪು ಬಗ್ಗೆ ಬರೆದಿರುವ ಹಾಡೊಂದರ ಪ್ರಸ್ತುತಿ ಮೂಲಕ ಗೀತ ನಮನ ಆರಂಭವಾಗಲಿದ್ದು, ಪುನೀತ್ ರಾಜ್ಕುಮಾರ್ ನಟನೆಯ ಹಾಡುಗಳನ್ನು ವಿವಿಧ ಹೆಸರಾಂತ ಗಾಯಕರು ಹಾಡಲಿದ್ದಾರೆ ಎಂದಿದ್ದಾರೆ ಸಾ.ರಾ.ಗೋವಿಂದು.


Click it and Unblock the Notifications











