ಡಾ. ರಾಜಕುಮಾರ್ ಆಗ ಹೇಳಿದ್ದ ಮಾತುಗಳು ಈಗಲೂ ಪ್ರಸ್ತುತ, ನೋಡಿ...
ಕಳೆದ ಭಾನುವಾರ ದೀಪ ಬೆಳಗುವ ಮೂಲಕ ಬಹುತೇಕ ಭಾರತ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿತ್ತು. ಸೆಲೆಬ್ರಿಟಿಗಳೂ, ಗಣ್ಯರೂ, ಜನಸಾಮಾನ್ಯರೂ ಎಲ್ಲರೂ ಮನೆಯಲ್ಲಿನ ಲೈಟ್ಗಳನ್ನು ಆರಿಸಿ ದೀಪ, ಹಣತೆ, ಮೋಂಬತ್ತಿ ಹಚ್ಚಿ, ಮೊಬೈಲ್ ಟಾರ್ಚ್ ಬೆಳಕನ್ನು ಬೀರಿ ಕೊರೊನಾ ವೈರಸ್ ವಿರುದ್ಧದ ಬೆಳಕಿನ ಯುದ್ಧದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ನೀಡಿದ್ದರು.
Recommended Video
ಇನ್ನು ಕೆಲವರು ದೀಪಾವಳಿಯನ್ನೇ ಆಚರಿಸಿಬಿಟ್ಟಿದ್ದರು. ಮನೆಯ ತುಂಬಾ ಹಣತೆಗಳನ್ನು ಇರಿಸಿದರು. ಪಟಾಕಿಗಳನ್ನು ಹೊಡೆದರು. ಇನ್ನು ಕೆಲವರು ಬೀದಿಗಿಳಿದು ಪಂಜು ಹಿಡಿದು ಮೆರವಣಿಗೆ ಮಾಡಿದರು. ದೀಪದ ಶಾಖಕ್ಕೆ ಕೊರೊನಾ ವೈರಸ್ ಸಾಯುತ್ತದೆ ಎಂಬ ಕಥೆಗಳನ್ನು ಹರಡಿಸಿದರು. ಇದು ತೀವ್ರ ಟೀಕೆಗೆ ಒಳಗಾಗಿತ್ತು. ದೀಪ ಹಚ್ಚಿದರೆ ಎಲ್ಲವೂ ಸಾಧ್ಯವಾಗುತ್ತದೆಯೇ ಎಂದು ಅನೇಕರು ಪ್ರಶ್ನಿಸಿದ್ದರು. ಇದಕ್ಕೆ ಪೂರಕವಾಗಿ ಡಾ. ರಾಜ್ಕುಮಾರ್ ಅವರು ನಾಟಕವೊಂದರಲ್ಲಿ ಆಡಿದ್ದ ಮಾತುಗಳ ವಿಡಿಯೋ ವೈರಲ್ ಆಗಿದೆ. ಮುಂದೆ ಓದಿ...

ದೀಪ ಹಚ್ಚಿ ಗಂಟೆ ಬಾರಿಸಿದರೆ ಮೋಕ್ಷ ಸಿಗುವುದೇ?
ಅಲ್ಲ ಆ ಹೀಗೆ ಮನಸಿಗೆ ಬಂದಂತೆ ಹುಚ್ಚು ಹುಚ್ಚಾಗಿ ಕುಣಿಯುತ್ತಾ ದೀಪಗಳನ್ನು ಹಚ್ಚಿಕೊಂಡು ಆಡಂಬರವಾಗಿ ಗಂಟೆ ಭಾರಿಸಿದ ಮಾತ್ರಕ್ಕೆ ಮೋಕ್ಷ ಸಿಕ್ಕುವುದೇ? ಎಂದು ಡಾ. ರಾಜಕುಮಾರ್ ಆಡಿರುವ ಸಂಭಾಷಣೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಾಟಕವೊಂದರ ದೃಶ್ಯ ಎನ್ನಲಾಗಿದೆ.
ಆರತಿ ಮಾಡಿ ಸಾಯುವುದಲ್ಲದೆ...
ಬೆಳಿಗೆದ್ದರೆ ಮಂಗಳಾರತಿ, ಮಧ್ಯಾಹ್ನ ಭೋಗಾರತಿ, ಸಾಯಂಕಾಲ ಸಂಧ್ಯಾರತಿ ರಾತ್ರಿ ಆಯಿತು ಎಂದರೆ ರಾಗಾರತಿ. ಹೀಗೆ ಆರತಿ ಮಾಡಿ ಮಾಡಿ ಸಾಯುವುದಲ್ಲದೆ ಇದರಿಂದ ಪ್ರಯೋಜನವಂತು ಏನೂ ಇಲ್ಲ ಎಂದು ಅಣ್ಣಾವ್ರು ಹೇಳಿದ್ದ ಡೈಲಾಗ್ ಈಗಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಇದು ಮೋಕ್ಷ ಕುರಿತ ಆಚರಣೆಗಳನ್ನು ಟೀಕಿಸುವ ಸಂಭಾಷಣೆಯಾದರೂ ಕೊರೊನಾದಿಂದ ಮೋಕ್ಷದ ಕುರಿತಾದ ಜನರ ಆಚರಣೆಗಳಿಗೆ ಸಮೀಕರಿಸುವಂತಿದೆ.

ಆರತಿ, ದೀಪದ ಹಾವಳಿ
ಡಾ. ರಾಜಕುಮಾರ್ ಅವರ ಸಂಭಾಷಣೆಯ ಈ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಂದಿ ಹಂಚಿಕೊಂಡಿದ್ದಾರೆ. ದೀಪ ಹಚ್ಚುವ ಹುಚ್ಚಾಟಗಳು, ಆರತಿ ಮಾಡುವ ಆಚರಣೆಗಳಿಂದ ಮೋಕ್ಷ ಸಿಗುವುದೇ. ಅದನ್ನು ಮಾಡಿ ಸಾಯುತ್ತೇವೆಯೇ ಹೊರತು ಯಾವುದೇ ಉಪಯೋಗವಿಲ್ಲ ಎನ್ನುವುದು ಈಗಿನ ಸಂದರ್ಭದಲ್ಲಿ ಜನರ ವರ್ತನೆಗಳಿಗೆ ಹೋಲುವಂತಿದೆ.
ಮತ್ತಿನಿಂದ ಮುಚ್ಚಿಕೊಂಡ ಕಣ್ಣನೊಮ್ಮೆ ಬಿಚ್ಚಿ ನೋಡಿ
ಇದೇ ವೇಳೆ ಕೆಲವರು ರಾಜಕುಮಾರ್ ಅವರು 'ಜ್ವಾಲಾಮುಖಿ' ಚಿತ್ರಕ್ಕಾಗಿ ಹಾಡಿದ್ದ ಚಿ. ಉದಯಶಂಕರ್ ಬರೆದ ಹಾಡೊಂದನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. 'ಮೋಡ ಸುರಿಸುವುದು ಮಳೆಯನ್ನು ಭುವಿಗೆ, ಈ ಭೂಮಿ ನೀಡುವುದು ಬೆಳೆಯನ್ನು ಜನಕೆ... ನೆಮ್ಮದಿಯ ನೀಡಲು ಈ ಲೋಕಕೆ ಇದನರಿತು ಬಾಳಿದರೆ ಭೂಮಿಯೇ ಸ್ವರ್ಗ... ಬರೀ ಸ್ವಾರ್ಥಿಗಳೇ ಬದುಕಿದರೆ ಲೋಕವೇ ನರಕ, ಲೋಕವೇ ನರಕ... ನೋಡಿ ನೋಡಿ ನೋಡಿ ಎಲ್ಲ ನೋಡಿ. ಮತ್ತಿನಿಂದ ಮುಚ್ಚಿಕೊಂಡ ಕಣ್ಣನೊಮ್ಮೆ ಬಿಚ್ಚಿ ನೋಡಿ' ಎಂಬ ಹಾಡು ಕೊರೊನಾ ವೈರಸ್ ಲಾಕ್ಡೌನ್ನಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರ ಪಾಡನ್ನು ವರ್ಣಿಸುವಂತೆ ಈ ಕಾಲದ ಪರಿಸ್ಥಿತಿಗೆ ಅನುಗುಣವಾಗಿದೆ.
ಅರಿಯದೆ ನಡೆದು ಎಡವಿದಿರಿ...
ಹಾಗೆಯೇ ಪಿ.ಬಿ. ಶ್ರೀನಿವಾಸ್ 'ಕಪ್ಪು-ಬಿಳುಪು' ಚಿತ್ರದಲ್ಲಿ ಹಾಡಿದ್ದ, ಆರ್.ಎನ್. ಜಯಗೋಪಾಲ್ ರಚನೆಯ ಗೀತೆಯೂ ವೈರಲ್ ಆಗಿದೆ. 'ಇಂದಿನ ಹಿಂದೂ ದೇಶದ ನವ ಯುವಕರೇ ನವ ಯುವತಿಯರೇ, ಯಾವುದು ಕಪ್ಪು ಯಾವುದು ಬಿಳುಪು... ಯಾವುದು ಸತ್ಯ, ಯಾವುದು ಮಿಥ್ಯ... ಅರಿಯದೆ ನಡೆದು ಎಡವದಿರಿ, ಎಡವದಿರಿ... ಭಾರತದ ಸಿಂಹಗಳು ಜಾಗ್ರತರಾಗಿರಿ ಎಂದೂ. ವೀರವಾಣಿಯ ಮೊಳಗಿದ ಸ್ವಾಮಿ ವಿವೇಕಾನಂದ ಮುಂದು, ನಿಮ್ಮನು ನೋಡಿ ಮರಕದೆ ಹೂಡಿ ಕಣ್ಣೀರ ಕರೆದಿಹರಿಂದು...' ಸಾಲುಗಳು ಕೂಡ ಈ ಸನ್ನಿವೇಶಕ್ಕೆ ತಕ್ಕಂತಿದೆ ಎಂದು ಅನೇಕರು ಹೇಳಿದ್ದಾರೆ.


Click it and Unblock the Notifications











