'ಗೋಕಾಕ್ ಚಳವಳಿ' ವೇಳೆ ಕನ್ನಡಿಗರಿಗಾಗಿ ಪತ್ರ ಬರೆದಿದ್ದ ಡಾ.ರಾಜ್
ಅದು 1982, 'ಗೋಕಾಕ್ ಚಳವಳಿ'. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನ ಕಡ್ಡಾಯ ಮಾಡಬೇಕೆಂದು ಸಾಹಿತಿಗಳು ಬೀದಿಗಿಳಿದಿದ್ದರು. ಈ ಹೋರಾಟಕ್ಕೆ ಡಾ.ರಾಜ್ ಎಂಬ ಶಕ್ತಿ ಕೈಜೋಡಿಸಿ, ರಾಜ್ಯದಲ್ಲಿ ಬಹುದೊಡ್ಡ ಕನ್ನಡ ಹೋರಾಟ ಶುರುವಾಗಿತ್ತು.
ಈ ವೇಳೆ ರಾಜ್ ಕುಮಾರ್ ಮದ್ರಾಸಿನಲ್ಲಿ ಚಿತ್ರೀಕರಣದಲ್ಲಿದ್ದರು. ಅಲ್ಲಿಂದಲೇ ಗೋಕಾಕ್ ಹೋರಾಟಗಾರರಿಗೆ ರಾಜ್ ಕುಮಾರ್ ಒಂದು ಪತ್ರ ಬರೆದರು. ನಾಡು-ನುಡಿ ವಿಚಾರಕ್ಕೆ ಕುತ್ತು ಬಂದರೇ, ನಾವು ಸಹಿಸಲ್ಲ ಎಂದು ದನಿ ಎತ್ತಿದರು. ಅದೊಂದು ಪತ್ರ ಸಾಕಾಗಿತ್ತು. ಗೋಕಾಕ್ ಹೋರಾಟಗಾಗರಿಗೆ ಗುರಿಯನ್ನ ಮುಟ್ಟಲು. ಅಂದು ಡಾ.ರಾಜ್ ಬರೆದ ಪತ್ರ ಇಲ್ಲಿದೆ ನೋಡಿ......

ಡಾ.ರಾಜ್ ಬರೆದ ಪತ್ರದಲ್ಲಿ ಏನಿದೆ?
''ನನ್ನ ಹುಟ್ಟುನಾಡಾದ ಕರ್ನಾಟಕ, ನನ್ನ ತಾಯ್ನುಡಿಯಾದ ಕನ್ನಡ. ಎರಡು ನನ್ನ ರಕ್ತದ ಭಾಗವಾಗಿದೆ. ನನ್ನ ಬದುಕನ್ನೇ ಅವುಗಳಿಗಾಗಿ ಮೀಸಲಿಟ್ಟು, ಕಿಂಚಿತ್ ಕಲಾಸೇವೆಯನ್ನ ಮಾಡುತ್ತಿದ್ದೇನೆ. ಈಗ ಕರ್ನಾಟಕದಲ್ಲೇ ಕನ್ನಡಕ್ಕೆ, ಕನ್ನಡಿಗರಿಗೆ ಕುತ್ತು ಬಂದಿರುವುದು ತುಂಬಾ ವಿಷಾದಕರ''.

ಅಣ್ಣಾವ್ರ ಅಭಿಮಾನದ ಮಾತು!
''ಗೋಕಾಕ್ ವರದಿಯ ಬಗ್ಗೆ ಸರ್ಕಾರದ ವಿಳಂಬ ನೀತಿಯನ್ನ ವಿರೋಧಿಸಿ ಕನ್ನಡ ಜನತೆ ಚಳುವಳಿಗೆ ಇಳಿದಾಗ, ಕನ್ನಡಿಗರ ಪ್ರೀತಿ, ವಿಶ್ವಾಸಗಳನ್ನೇ ಮನಸಾರೆ ಉಂಡಿರುವ ನಾನು ಬೆಂಗಳೂರಿಗೆ ಬಂದು ನನ್ನ ನಿಲುವನ್ನ ಸ್ವಷ್ಟವಾಗಿ ಹೇಳಿದೆ''.

'ಗೋಕಾಕ್ ವರದಿ' ಜಾರಿ ತರಬೇಕು!
''ಕಳೆದ 19 ತಾರೀಖು ಕರ್ನಾಟಕ ಸರ್ಕಾರ ಪ್ರಕಟಿಸಿದ ಭಾಷಾಸೂತ್ರವನ್ನ ಗಮನಿಸಿದ್ದೇನೆ. ಎಲ್ಲ ರೀತಿಯಲ್ಲೂ ಸಮರ್ಪಕವಾಗಿದ್ದ ಗೋಕಾಕ್ ನೀತಿಯನ್ನ ಕಡೆಗಣಿಸಿ, ಸರ್ಕಾರವೂ ತನ್ನದೇ ಆದ ಸೂತ್ರವನ್ನ ಮುಂದಿಟ್ಟಿರುವುದು ನನಗೆ, ನನ್ನಂತಹ ಕಲಾವಿದರಿಗೆ, ಸಾಹಿತಿಗಳಿಗೆ ಕನ್ನಡ ಕುಲುಕೋಟಿಗೆ ತೀವ್ರ ಅಸಮಾಧಾನವನ್ನ ಉಂಟುಮಾಡಿದೆ'',

ಮದ್ರಾಸಿನಿಂದ ಪತ್ರ ಬರೆದಿದ್ದರು
''ಗೋಕಾಕ್ ಅಯೋಗದ ಶಿಫಾರಸ್ಸನ್ನೇ ಜಾರಿ ತರಬೇಕೆಂದು ಸರ್ಕಾರವನ್ನ ಒತ್ತಾಯಪಡಿಸಿ, ನಡೆಯುತ್ತಿರುವ ಈಗಿನ ಕನ್ನಡ ಜನತೆಯ ಶಾಂತಿಯುತವಾದ ಚಳುವಳಿಗೆ ನನ್ನ ಅಖಂಡ ಬೆಂಬಲವಿದೆ. ಈ ಕಾರಣದಿಂದ ಕರ್ನಾಟಕದಿಂದ ಅಂದರೇ, ನನ್ನ ತಾಯ್ನಾಡು ಮತ್ತು ತಾಯ್ನುಡಿಯಿಂದ ಯಾವುದೇ ಕರೆ ಬಂದರೂ ಈವತ್ತಿನ ನನ್ನ ಎಲ್ಲ ಶಕ್ತಿಯನ್ನ ನನ್ನ ತಾಯಿಗಾಗಿ ಮುಡಿಪಾಗಿಡಲು ಸಿದ್ದವಾಗಿದ್ದೀನಿ''. ಡಾ.ರಾಜ್ ಕುಮಾರ್


Click it and Unblock the Notifications











