ಡಾ.ವಿಷ್ಣುವರ್ಧನ್ ಪುಣ್ಯ ಸ್ಮರಣೆ 5000 ಅಭಿಮಾನಿಗಳಿಂದ ನೇತ್ರದಾನ: ಅಭಿಮಾನ್ ಸ್ಟುಡಿಯೋದಲ್ಲಿ ಅನ್ನದಾನ
ಡಾ. ವಿಷ್ಣುವರ್ಧನ್, ಜನಮೆಚ್ಚಿದ ನಾಯಕ, ಅಭಿಮಾನಿಗಳ ಪಾಲಿಗೆ ಹೃದಯವಂತ, ಸಾಹಸ ಸಿಂಹ, ಅಭಿನಯ ಭಾರ್ಗವ. 2009, ಡಿಸೆಂಬರ್ 30 ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಕರಾಳದಿನ. ಸಾಹಸ ಸಿಂಹ ಬಾರದ ಲೋಕಕ್ಕೆ ಪಯಣ ಬೆಳೆಸಿದ ದಿನವಿದು. 12 ವರ್ಷಗಳ ಹಿಂದೆ ವಿಷ್ಣುದಾದ ಅಪಾರ ಅಭಿಮಾನಿಗಳನ್ನು ಅನಾಥರನ್ನಾಗಿಸಿ, ಇಹಲೋಕ ತ್ಯಜಿಸಿದ ದಿನ. ಈ ದಿನದಂದು 'ಸಾಹಸ ಸಿಂಹ'ನ ಅಭಿಮಾನಿಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇಂದು (ಡಿಸೆಂಬರ್ 30) ಡಾ. ವಿಷ್ಣುವರ್ಧನ್ ಅವರ 12ನೇ ಪುಣ್ಯತಿಥಿ. ಈ ದಿನದಂದು ರಾಜ್ಯದಾದ್ಯಂತ ಸಾಹಸ ಸಿಂಹನ ಅಭಿಮಾನಿಗಳು ಅಗಲಿದ ತಮ್ಮ ನೆಚ್ಚಿನ ನಟನಿಗೆ ಪೂಜೆಯನ್ನು ಅರ್ಪಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಭಿಮಾನಿಗಳು ನಾನಾ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿರುವ ದಾದಾನ ಅಭಿಮಾನಿಗಳು ನೇತ್ರದಾನಕ್ಕೆ ಮುಂದಾಗಿದ್ದಾರೆ. ಸಾಹಸ ಸಿಂಹನ 12ನೇ ಪುಣ್ಯ ತಿಥಿಯಂದು ಅಭಿಮಾನಿಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರ ತಿಳಿಯಲು ಮುಂದೆ ಓದಿ.

5000 ಅಭಿಮಾನಿಗಳಿಗೆ ನೇತ್ರದಾನಕ್ಕೆ ನೋಂದಣಿ
ಡಾ.ವಿಷ್ಣುವರ್ಧನ್ ಪುಣ್ಯತಿಥಿಯನ್ನು ಪುಣ್ಯ ದಿನವೆಂದೇ ಪರಿಗಣಿಸಿರುವ ಅಭಿಮಾನಿಗಳು ರಾಜ್ಯಾದ್ಯಂತ ಉತ್ತಮ ಕೆಲಸದಲ್ಲಿ ಭಾಗಿಯಾಗಿದ್ದಾರೆ. ನೇತ್ರದಾನ, ರಕ್ತದಾನ ಸೇರಿದಂತೆ ಅನ್ನದಾನ ಮಾಡುತ್ತಿದ್ದಾರೆ. ಅದರಲ್ಲೂ ರಾಜ್ಯದ ಮೂಲೆ ಮೂಲೆಯಲ್ಲಿರುವ ವಿಷ್ಣು 5 ಸಾವಿರ ಅಭಿಮಾನಿಗಳು ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಕೊಳ್ಳಲಿದ್ದಾರೆ. " ರಾಜ್ಯದಾದ್ಯಂತ ಇವತ್ತು 5 ಸಾವಿರ ಜನರು ಒಗಟ್ಟಾಗಿ ನೇತ್ರದಾನವನ್ನು ಮಾಡುತ್ತಿದ್ದೇವೆ. ನಾವು ರಾಜ್ಯದ ಉದ್ದಗಲಕ್ಕೂ ವಿಷ್ಣು ಸೇನಾ ಸಮಿತಿಯಿಂದ ಒಟ್ಟು 12 ಸಾವಿರ ಸದಸ್ಯರು ಇದ್ದೇವೆ. ಇವರಲ್ಲಿ 5 ಸಾವಿರ ಮಂದಿ ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ. ಕಳೆದ ಒಂದು ವಾರದಿಂದ ಈ ಪ್ರಕ್ರಿಯೆ ಆರಂಭ ಆಗಿತ್ತು. ಅದರಂತೆ ಇಂದು 5 ಸಾವಿರ ಮಂದಿಗೆ ನೇತ್ರದಾನ ಮಾಡಲು ವ್ಯವಸ್ಥೆಯನ್ನು ಮಾಡಿದ್ದೇವೆ. ಇವತ್ತು ಸ್ಮಾರಕದ ಬಳಿಯೇ ನಾವು ಸುಮಾರು 2000 ಮಂದಿ ನೇತ್ರದಾನಕ್ಕೆ ಸಹಿ ಮಾಡಲಿದ್ದೇವೆ. " ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಫಿಲ್ಮಿ ಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

150ಕ್ಕೂ ಅಧಿಕ ಸ್ಥಳದಲ್ಲಿ ಬೀದಿ ಬದಿ ಅನ್ನದಾನ
"ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಲೋಕೇಶ್ ಮತ್ತು ಶ್ರೀನಿವಾಸ್ ಅವರು ಪುಣ್ಯ ಸ್ಮರಣೆಯನ್ನು ಆಚರಣೆ ಮಾಡಿದ್ದಾರೆ. ಒಬ್ಬರು ಸಮಾಧಿಗೆ ಗುಲಾಬಿ ಹೂವಿನ ಅಲಂಕಾರ ಮಾಡಿದ್ದಾರೆ. ಇನ್ನೊಬ್ಬರು ನೇತ್ರದಾನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇನ್ನೊಬ್ಬರು ರಕ್ತದಾನದ ವ್ಯವಸ್ಥೆ ಮಾಡಿದ್ದು, ಮತ್ತೊಬ್ಬರು ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ. ಪುಣ್ಯಭೂಮಿಯಲ್ಲಿ ಇಷ್ಟೆಲ್ಲಾ ಕೆಲಸಗಳು ಆಗುತ್ತಿವೆ. ಮತ್ತೊಂದು ಕಡೆ 200ಕ್ಕೂ ಆಶ್ರಮಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿದೆ. 150ಕ್ಕೂ ಹೆಚ್ಚು ಕಡೆಗೆ ರಸ್ತೆ ಬದಿಗಳಲ್ಲಿ ಅನ್ನದಾನ ಕೇಂದ್ರಗಳನ್ನು ಸ್ಥಾಪನೆ ಮಾಡಿ, ಅಲ್ಲಿ ಅನ್ನದಾನಕ್ಕೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ." ಎಂದು ವೀರಕಪುತ್ರ ಶ್ರೀನಿವಾಸ್ ಫಿಲ್ಮಿ ಬೀಟ್ಗೆ ತಿಳಿಸಿದ್ದಾರೆ.

ಪುಣ್ಯಭೂಮಿಯಲ್ಲಿ ಸ್ಮಾರಕದ ಬಗ್ಗೆ ಸರ್ಕಾರದ ಜೊತೆ ಚರ್ಚೆ
" ಡಾ.ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ನಡೆಯುತ್ತಿದೆ. ಯಾವುದೇ ಸಮಸ್ಯೆ ಆಗದಂತೆ ವೇಗದಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಇರುವ ಪುಣ್ಯಭೂಮಿ ಬಗ್ಗೆ ಮೈಸೂರಿನಲ್ಲಿ ಸ್ಮಾರಕ ಆದ ಬಳಿಕ ಕೈಗೆತ್ತುಕೊಳ್ಳುತ್ತಿದ್ದೇವೆ. ಅಲ್ಲಿ, ಇಲ್ಲಿ ಗೊಂದಲಗಳು ಬೇಡ ಅಂತ ಈ ನಿರ್ಧಾರಕ್ಕೆ ಬಂದಿದ್ದೇವೆ. ಬಾಲಕೃಷ್ಣ ಕುಟುಂಬದವರು ನಮಗೆ ಸ್ಪಂದಿಸುತ್ತಿದ್ದಾರೆ. ನಾವು ಮತ್ತು ಬಾಲಕೃಷ್ಣ ಕುಟುಂಬದವರು ಸರ್ಕಾರವನ್ನು ಭೇಟಿ ಮಾಡಿ, ಮುಂದೆ ಏನು ಮಾಡಬೇಕು ಎಂಬುದನ್ನು ಯೋಚನೆ ಮಾಡಲಿದ್ದೇವೆ." ಎಂದು ವೀರಕಪುತ್ರ ಶ್ರೀನಿವಾಸ್ ಸ್ಮಾರಕದ ಬಗ್ಗೆ ಮಾಹಿತಿ ನೀಡಿದ್ದಾರೆ.

ಗ್ರಂಥಾಲಯ ಹಾಗೂ ಪಾರ್ಕ್ ಉದ್ಘಾಟನೆ
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 12ನೇ ಪುಣ್ಯತಿಥಿಯ ಅಂಗವಾಗಿ ರಾಜ್ಯದ ನಾನಾ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ ಬೆಂಗಳೂರಿನ ವಿಜಯನಗರದಲ್ಲಿ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಪಾರ್ಕ್ ಹಾಗೂ ಸ್ಮಾರಕವನ್ನು ಉದ್ಘಾಟನೆ ಮಾಡಲಾಗಿದೆ.


Click it and Unblock the Notifications











