ನೊಂದಿರುವ ಅಭಿಮಾನಿಗಳನ್ನ ನೋಯಿಸಬೇಡಿ ಯಶ್: ವಿಷ್ಣು ಅಭಿಮಾನಿಯ ಪತ್ರ
Recommended Video

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದ ಯಶ್ ನಿನ್ನೆ 'ವಿಷ್ಣುವರ್ಧನ್' ರವರ ಪರ ನಿಂತು ಮಾತನಾಡಿದ್ರು. ನಟ ಅನಿರುದ್ಧ್ ಅಭಿನಯದ 'ರಾಜಸಿಂಹ' ಸಿನಿಮಾದ ಆಡಿಯೋ ರಿಲೀಸ್ ಸಮಾರಂಭದಲ್ಲಿ ಭಾಗಿಯಾಗಿ ಮೊದಲಬಾರಿಗೆ ವಿಷ್ಣುವರ್ಧನ್ ಸ್ಮಾರಕದ ಪರವಾಗಿ ಧ್ವನಿ ಎತ್ತಿದರು.
ಸರ್ಕಾರ 'ವಿಷ್ಣುವರ್ಧನ್' ರಿಗೆ ಸಲ್ಲಬೇಕಾದ ಗೌರವ ಸಲ್ಲಿಸಲಿ. ಈ ಕೆಲಸ ಬೇಗ ಆಗಲಿ, ಸರ್ಕಾರ ಆಗಲ್ಲ ಅಂದ್ರೆ ನಾವು ಅಭಿಮಾನಿಗಳು ಸೇರಿ ಸ್ಮಾರಕ ಮಾಡುತ್ತೇವೆ, ನನಗೆ 'ವಿಷ್ಣುವರ್ಧನ್' ರ ಬಗ್ಗೆ ಮಾತನಾಡಲು ಎಲ್ಲೂ ಅವಕಾಶ ಸಿಕ್ಕಿರಲಿಲ್ಲ ಇಂದು ಮಾತನಾಡುವ ಸಮಯ ಬಂದಿದೆ ಎಂದಿದ್ರು. ಈ ವಿಚಾರವನ್ನ ಇದೇ 'ಫಿಲ್ಮಿಬೀಟ್' ನಲ್ಲಿ ಓದಿದ್ರಿ.
ಯಶ್ ರವರ ಈ ಮಾತಿನಿಂದ ಬೇಸರಗೊಂಡಿರುವ ವಿಷ್ಣು ಅಭಿಮಾನಿಗಳು ರಾಕಿಂಗ್ ಸ್ಟಾರ್ ಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಪತ್ರದಲ್ಲೇನಿದೆ.? ಪತ್ರ ಬರೆದವರ್ಯಾರು.? ಮುಂದೆ ಓದಿ...

'ವಿಷ್ಣು ಅಭಿಮಾನಿ' ಬರೆದ ಪತ್ರದಲ್ಲೇನಿದೆ?
ನಿನ್ನೆ ಸ್ಮಾರಕದ ಬಗ್ಗೆ ಮಾತನಾಡಿದ ನಟ ಯಶ್ ರಿಗೆ 'ವಿಷ್ಣು' ಅಭಿಮಾನಿಯಿಂದ ಪತ್ರ ಬಂದಿದೆ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ 'ವೀರಕಪುತ್ರ ಶ್ರೀನಿವಾಸ್' ಪತ್ರ ಬರೆದಿದ್ದಾರೆ. ವಿಷ್ಣು ಅಭಿಮಾನಿಯಾಗಿ ಸಾಕಷ್ಟು ದಿನಗಳಿಂದ ಸ್ಮಾರಕ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿರುವ ಶ್ರೀನಿವಾಸ್, ಪತ್ರದಲ್ಲಿ ಯಶ್ ಅವರಿಗೆ ಮನವಿ ಮಾಡೋದ್ರ ಜೊತೆಗೆ ಮುಂದೆ ನಿಂತು ಈ ಕೆಲಸ ಮಾಡಿ ಇಲ್ಲವಾದಲ್ಲಿ ನೊಂದಿರೋ ನಮ್ಮನ್ನ ನೋಯಿಸಬೇಡಿ ಎಂದಿದ್ದಾರೆ.

ಪತ್ರವನ್ನ ನೀವು ಒಮ್ಮೆ ಓದಿ
ಪ್ರೀತಿಯ ನಟ ಯಶ್ ಅವರೇ..
ಭಾರತಿ ಮೇಡಂ ಒಪ್ಪಿದ್ರೆ ಸ್ಮಾರಕ ನಾವೇ ನಿರ್ಮಾಣ ಮಾಡ್ತೀವಿ ಅಂದ್ರಂತೆ!
ಮೇಡಂ ಅವ್ರು ಒಪ್ಪಿದ್ದಿದ್ದರೆ ಅಭಿಮಾನಿಗಳಾದ ನಾವು ಯಾರ ತನಕವೂ ಕಾಯ್ತಲೇ ಇರಲಿಲ್ಲ ಸರ್. ನಾವೇ ನಿರ್ಮಾಣ ಮಾಡಿಬಿಡ್ತಿದ್ವಿ. ಅವ್ರು ಒಪ್ತಿಲ್ಲ ಅನ್ನೋದೇ ಇಲ್ಲಿ ಸಮಸ್ಯೆ.
ಒಂದು ವರ್ಷದ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಭಾರತಿಯವರನ್ನು ಒಪ್ಪಿಸಿ ಬನ್ನಿ ಇಲ್ಲೇ ಸ್ಮಾರಕ ಮಾಡೋಣ ಅಂದಿದ್ರು. ಅದೇ ಮಾತನ್ನು ಈಗ ನೀವೂ ಹೇಳ್ತಿದ್ದೀರಿ ಅಷ್ಟೇ.
ಇದೆಲ್ಲಾ ಕಣ್ಣೊರೆಸುವ, ಅಭಿಮಾನಿಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಮಾತುಗಳಷ್ಟೇ ಎಂಬುದು ನಾವು ಅರಿಯದ ವಿಷಯವಲ್ಲ. ನಿಮಗೆ ನಿಜಕ್ಕೂ ಸ್ಮಾರಕ ನಿರ್ಮಾಣದ ಬಗ್ಗೆ ಒಲವಿದ್ದರೆ, ಡಾ.ವಿಷ್ಣು ಅವರು ಅಂತ್ಯಸಂಸ್ಕಾರವಾದ ಜಾಗದಲ್ಲೇ ಸ್ಮಾರಕ ಆಗಲಿ. ನಿಮ್ಗೆ ಬೇಕಾದ್ರೆ ಭವನಗಳನ್ನು ಎಲ್ಲಿ ಬೇಕೋ ಅಲ್ಲಿ ಕಟ್ಕೊಳ್ಳಿ ಅಂತ ಖಡಕ್ಕಾಗಿ ಹೇಳಿ. ಭಾರತಿ ಮೇಡಂ ಅವರನ್ನು ಒಪ್ಪಿಸಬಹುದಾ ನೋಡಿ.? ಚಿತ್ರರಂಗದ ಗಣ್ಯರನ್ನೊಳಗೊಂಡ ನಿಯೋಗ ಈ ಕೆಲಸ ಮಾಡಲಿ. ಆ ಬಗ್ಗೆ ಯೋಚಿಸಿ..
ಅದು ಬಿಟ್ಟು ಸ್ಮಾರಕದ ಬಗ್ಗೆ ಏನೋ ಒಂದು ಹೇಳಿ, ನೊಂದಿರುವ ಅಭಿಮಾನಿಗಳನ್ನು ಮತ್ತಷ್ಟು ನೋಯಿಸಬೇಡಿ.
ಡಾ.ವಿಷ್ಣು ಸೇನಾ ಸಮಿತಿ

ಕಾದು ಸಾಕಾಗಿರೋ ಅಭಿಮಾನಿಗಳು
ಶ್ರೀನಿವಾಸ್ ಪತ್ರದಲ್ಲಿ ಉಲ್ಲೇಖ ಮಾಡಿರುವಂತೆ 'ಭಾರತಿ ವಿಷ್ಣುವರ್ಧನ್' ಅವರು ಒಪ್ಪಿದ್ದರೇ ಅಭಿಮಾನಿಗಳೇ ಹಣ ಹಾಕಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತಿದ್ದರು. ಆದ್ರೆ ಭಾರತಿಯವರು ಮೈಸೂರಿನಲ್ಲೇ ಸ್ಮಾರಕಕ್ಕೆ ಜಾಗ ಬೇಕೆಂದು ಪಟ್ಟುಹಿಡಿದ್ದಿದ್ದಾರೆ. ಇದೇ ಕಾರಣದಿಂದ ಸರ್ಕಾರವು ಸುಮ್ಮನೇ ಕುಂತಿದೆ.

ಅಭಿಮಾನಿಗಳ ಜೊತೆ ಕೈ ಸೇರಿಸ್ತಾರಾ 'ಯಶ್'
ಸದ್ಯ ಸಮಾಧಿ ಇರುವ ಸ್ಥಳದಲ್ಲೇ 'ವಿಷ್ಣು' ಸ್ಮಾರಕ ನಿರ್ಮಾಣಕ್ಕೆ ಯಶ್ ವಿಷ್ಣು ಸೇನಾ ಸಮಿತಿ ಜೊತೆ ಕೈಸೇರಿಸ್ತಾರಾ? ಅಥವಾ ಸರ್ಕಾರವೇ ಕುಟುಂಬದ ಜೊತೆ ಕೂತು ಮಾತನಾಡಿ ಆದಷ್ಟು ಬೇಗ ಸ್ಥಳ ನಿಗದಿ ಮಾಡುವಂತೆ ಒತ್ತಾಯ ಮಾಡುತ್ತಾರಾ? ಇಷ್ಟು ಪ್ರಶ್ನೆಗಳಿಗೆ ರಾಕಿಂಗ್ ಸ್ಟಾರ್ ಅವರೇ ಉತ್ತರ ನೀಡಬೇಕು. 'ವಿಷ್ಣು'ದಾದರ ವಿಚಾರದಲ್ಲಿ ಯಶ್ ಮುಂದಿನ ನಡೆ ಏನಾಗಿರುತ್ತೆ ಅನ್ನೋದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











