ವಿಷ್ಣು ಪುತ್ಥಳಿ ಅನಾವರಣ: ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಬಂಧನ ವಿಷ್ಣು ಸೇನಾ ಸಮಿತಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕ್ರಿಸ್ಮಸ್ ಈವ್ ದಿನ ಅಂದರೆ ಡಿಸೆಂಬರ್ 24ರಂದು ನಡೆಯುವ ಈ ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಗೆ ಆರಂಭವಾಗಲಿದೆ. (ಸ್ಯಾಂಡಲ್ ವುಡ್ ಸಾರ್ವತ್ರಿಕ ಚುನಾವಣೆ -2014)
ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿರುವ ಈ ವಿಷ್ಣು ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಬಿಎಂಪಿ ಸದಸ್ಯ ಎಚ್ ಎಸ್ ಪದ್ಮರಾಜ್ ವಹಿಸಲಿದ್ದಾರೆ.
ವಿಷ್ಣು ಸೇನಾ ಸಮಿತಿ ಈ ಕಾರ್ಯಕ್ರಮಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಸಾಲುಮರದ ತಿಮ್ಮಕ್ಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್ ವಿ ರಾಜೇಂದ್ರ ಸಿಂಗ್ ಅವರನ್ನು ಆಹ್ವಾನಿಸಿದೆ.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಹಿರಿಯ ನಿರ್ದೇಶಕ ಭಾರ್ಗವ, ಭಾರತಿ ವಿಷ್ಣುವರ್ಧನ್, ಅನಿರುದ್ದ್, ಕಿಚ್ಚ ಸುದೀಪ್, ಎಚ್ ಎಸ್ ಫಣಿರಾಮಚಂದ್ರ, ಎಸ್ ನಾರಾಯಣ್ ಮುಂತಾದವರು ಭಾಗವಹಿಸಲಿದ್ದಾರೆಂದು ಬಂಧನ ವಿಷ್ಣು ಸೇನಾ ಸಮಿತಿ ತಿಳಿಸಿದೆ.
ಕಾರ್ಯಕ್ರಮದ ದಿನದಂದು ಮಧ್ಯಾಹ್ನ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲಾ ವಿಷ್ಣು ಅಭಿಮಾನಿ ಸಂಘಗಳಿಗೆ ಆಹ್ವಾನ ಪತ್ರಿಕೆಯನ್ನು ರವಾನಿಸಿದ್ದೇವೆ. ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ 'ಫಿಲ್ಮೀಬೀಟ್' ಗೆ ತಿಳಿಸಿದ್ದಾರೆ.
ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಲ್ಲಿ ಡಾ.ರಾಜಕುಮಾರ್ ಕುಟುಂಬದ ಯಾವ ಸದಸ್ಯರ ಹೆಸರೂ ಇಲ್ಲ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ 'ಆಹ್ವಾನ ಕಳುಹಿಸಲಿಲ್ಲ' ಎನ್ನುವ ಉತ್ತರ ವಿಜಯ್ ಕುಮಾರ್ ಅವರಿಂದ ಬಂದಿದೆ.
ರಾಜ್ ಮತ್ತು ವಿಷ್ಣು ಕನ್ನಡ ಚಿತ್ರೋದ್ಯಮದ ಎರಡು ಕಣ್ಣುಗಳಿದ್ದಂತೆ ಮತ್ತು ಜೀವಿತಾವಧಿಯಲ್ಲಿ ಇವರಿಬ್ಬರೂ ಸಹೋದರರಂತಿದ್ದರು. ವಿಷ್ಣು ಪುತ್ಥಳಿ ಅನಾವರಣ ಕಾರ್ಯಕ್ರಮವೆಂದರೆ ಅದು ಕನ್ನಡ ಚಿತ್ರೋದ್ಯಮದ ಕಾರ್ಯಕ್ರಮವಿದ್ದಂತೆ.
ಹಾಗಾಗಿ, ರಾಜ್ ಕುಟುಂಬವನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸ ಬೇಕಾಗಿತ್ತು ಎನ್ನುವುದು ಸಮಸ್ತ ಚಿತ್ರಪ್ರೇಮಿಗಳ ಆಶಯ.


Click it and Unblock the Notifications











