ದುನಿಯಾ ವಿಜಯ್ vs ಪಾನಿಪುರಿ ಕಿಟ್ಟಿ: 4 ವರ್ಷದ ಹಳೆಯ ಕೇಸ್ ರೀಓಪನ್; ಯಾರಿಗೆ ಸಂಕಷ್ಟ?
ನಾಲ್ಕು ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ದೊಡ್ಡ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದರು. ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಮುಂದೆಯೇ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ಎಂಬುವವರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತ್ತು. ಮೊಬೈಲ್ನಲ್ಲಿ ಸೆರೆಯಾಗಿದ್ದ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸುದ್ದಿ ವಾಹಿನಿಗಳಲ್ಲಿ ಹರಿದಾಡಿದ್ದವು.
2018ರ ಸೆಪ್ಟೆಂಬರ್ 23ರಂದು ಬೆಂಗಳೂರಿನ ವಸಂತನಗರದಲ್ಲಿನ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತ್ತಿತ್ತು. ಆ ಕಾರ್ಯಕ್ರಮಕ್ಕೆ ನಟ ದುನಿಯಾ ವಿಜಯ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಅದರಂತೆ ತಮ್ಮ ಮಗ ಸಾಮ್ರಾಟ್ ವಿಜಯ್ ಜತೆ ನಟ ದುನಿಯಾ ವಿಜಯ್ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರುಗುವಾಗ ಮಾರುತಿ ಗೌಡ ಎಂಬುವವ ದುನಿಯಾ ವಿಜಯ್ ಅವರನ್ನು ನಿಂದಿಸಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ದುನಿಯಾ ವಿಜಯ್ ಅಭಿಮಾನಿಗಳು ಮಾರುತಿ ಗೌಡಗೆ ಮುತ್ತಿಗೆ ಹಾಕಿದ್ದರು.
ಈ ಸಂದರ್ಭದಲ್ಲಿ ಮಾರುತಿ ಗೌಡ ಅವರನ್ನು ದುನಿಯಾ ವಿಜಯ್ ಕರೆತಂದು ಕಾರಿನಲ್ಲಿ ಕೂರಿಸಿದ್ದರು. ಇತ್ತ ಮಾರುತಿ ಗೌಡ ಅವರ ಸಂಬಂಧಿ ಪಾನಿಪುರಿ ಕಿಟ್ಟಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದುನಿಯಾ ವಿಜಯ್ ಮಾರುತಿ ಗೌಡ ಅವರನ್ನು ಅಪಹರಿಸಿದ್ದಾರೆ ಹಾಗೂ ಘಟನೆ ನಡೆದ ಸ್ಥಳದಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರನ್ನು ದಾಖಲಿಸಿದ್ದರು. ಇದರ ಮೇರೆಗೆ ದುನಿಯಾ ವಿಜಯ್ ಅವರನ್ನು ಸಂಪರ್ಕಿಸಿದ್ದ ಪೊಲೀಸರು ಮಾರುತಿ ಗೌಡ ಅವರನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು. ಹೀಗೆ ಠಾಣೆಗೆ ಬಂದ ದುನಿಯಾ ವಿಜಯ್ ಹಾಗೂ ದೂರು ನೀಡಿ ಠಾಣೆಯ ಬಳಿಯೇ ಇದ್ದ ಪಾನಿಪುರಿ ಕಿಟ್ಟಿ ಹಾಗೂ ಸಹಚರರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಪ್ರತಿ ದೂರು ನೀಡಿದ್ದ ದುನಿಯಾ ವಿಜಯ್
ಅಂದಿನ ದಿನ ಠಾಣೆಗೆ ಬಂದಾಗ ದುನಿಯಾ ವಿಜಯ್ ತಮ್ಮ ಮೇಲೆ ಪಾನಿಪುರಿ ಕಿಟ್ಟಿ ಹಾಗೂ ಸಹಚರರು ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಹಾಗೂ ತನ್ನ ಕಾರಿಗೆ ಹಾನಿಯುಂಟುಮಾಡಿದ್ದರು ಎಂದು ಪ್ರತಿದೂರನ್ನು ನೀಡಿದ್ದರು. ಆದರೆ ಈ ದೂರನ್ನು ಕ್ಲೋಸ್ ಮಾಡಲಾಗಿತ್ತು. ಇನ್ನು ಪಾನಿಪುರಿ ಕಿಟ್ಟಿ ನೀಡಿದ್ದ ದೂರು ಮಾತ್ರ ಇನ್ನೂ ಸಹ ನಡೆಯುತ್ತಲೇ ಇತ್ತು.

ಕೇಸ್ ರೀಓಪನ್
ಕರ್ನಾಟಕದ ಉಚ್ಛ ನ್ಯಾಯಾಲಯ 2022ರ ಅಕ್ಟೋಬರ್ 22ರಂದು ಆದೇಶವನ್ನು ನೀಡಿದ ಅನ್ವಯ ದುನಿಯಾ ವಿಜಯ್ ಪಾನಿಪುರಿ ಕಿಟ್ಟಿ ಮೇಲೆ ನೀಡಿದ್ದ ಕೇಸ್ ರೀಓಪನ್ ಆಗಿದೆ. ಈ ಆದೇಶದ ಮೇರೆಗೆ 2022ರ ಡಿಸೆಂಬರ್ 8ರಂದು ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಮೂಲಕ ಪಾನಿಪುರಿ ಕಿಟ್ಟಿಗೆ ಸಂಕಷ್ಟ ಶುರುವಾದಂತಾಗಿದೆ.

ದೂರಿನಲ್ಲಿ ಇರುವುದೇನು?
ಇನ್ನು ದುನಿಯಾ ವಿಜಯ್ ನೀಡಿದ್ದ ಪ್ರತಿದೂರಿನಲ್ಲಿ "2018ರ ಸೆಪ್ಟೆಂಬರ್ 23ರಂದು ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಹೋಗಿದ್ದೆವು. ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಮಾರುತಿ ಗೌಡ ಏನೋ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ಅಂತೆಲ್ಲಾ ಶುರು ಮಾಡ್ರಾ ಇದ್ದೀಯ ನಿನ್ನ ಹಾಗೂ ನಿನ್ನ ಅಪ್ಪನನ್ನು ಕೊಂದು ಬಿಡುತ್ತೇನೆಂದು ಕೊಲೆ ಬೆದರಿಕೆ ಹಾಕಿದ್ದ. ಇದರಿಂದ ಕೋಪಗೊಂಡ ನನ್ನ ಕೆಲ ಅಭಿಮಾನಿಗಳು ಮಾರುತಿ ಗೌಡನಿಗೆ ಮುತ್ತಿಗೆ ಹಾಕಿದ್ದರು ಹಾಗೂ ಮಾರುತಿ ಗೌಡನನ್ನು ಕರೆತಂದು ನನ್ನ ಕಾರಿನಲ್ಲಿ ಕೂರಿಸಿ ಮನೆಗೆ ಬಿಡಲು ಮುಂದಾಗಿದ್ದೆ. ಇದೇ ಸಂದರ್ಭದಲ್ಲಿ ಮಾರುತಿ ಗೌಡನಿಗೆ ಪಾನಿಪುರಿ ಕಿಟ್ಟಿ ಕರೆಮಾಡಿ ನನ್ನ ಬಳಿಯೂ ಮಾತನಾಡಿದ ಹಾಗೂ ಮತ್ತೆ ಅಂಬೇಡ್ಕರ್ ಭವನಕ್ಕೆ ಬಾ ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದಿದ್ದ. ಅಷ್ಟರಲ್ಲಿ ಪೊಲೀಸರು ಕರೆ ಮಾಡಿ ಹೈಗ್ರೌಂಡ್ಸ್ ಠಾಣೆಗೆ ಮಾರುತಿ ಗೌಡನನ್ನು ಕರೆತನ್ನಿ ಎಂದು ಹೇಳಿದರು. ಕಾನೂನಿಗೆ ಬೆಲೆ ಕೊಟ್ಟು ಆತನನ್ನು ಆತನ ಮನೆಗೆ ಕರೆದೊಯ್ಯುವ ಬದಲು ಠಾಣೆಗೆ ಕರೆದೊಯ್ದೆ. ಇದೇ ಸಂದರ್ಭದಲ್ಲಿ ಠಾಣೆಯ ಮುಂಭಾಗ ಪಾನಿಪುರಿ ಕಿಟ್ಟಿ ಹಾಗೂ ಸಹಚರರು ಬಂದು ನಿನ್ನ ಹಾಗೂ ನಿನ್ನ ಮಗನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಮತ್ತು ಆತನ ಸಹಚರನೋರ್ವ ಚಾಕುವಿನಿಂದ ತಿವಿಯಲು ಬಂದ, ತಪ್ಪಿಸಿಕೊಂಡು ಠಾಣೆಗೆ ಹೋಗಿದ್ವಿ. ಈ ಸಂದರ್ಭದಲ್ಲಿ ನನ್ನ ರೇಂಜ್ ರೋವರ್ ಕಾರಿನ ಮೇಲೂ ಸಹ ಪಾನಿಪುರಿ ಕಿಟ್ಟಿ ಹಾಗೂ ಸಹಚರರು ಹಾನಿ ಮಾಡಿದ್ದರು. ಹೀಗಾಗಿ ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡ ಮತ್ತು ಅವರ ಸಹಚರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಉಲ್ಲೇಖಿಸಿದ್ದರು. ಸದ್ಯ ಈ ದೂರು ರೀಓಪನ್ ಆಗಿದೆ..


Click it and Unblock the Notifications











